ದೊಡ್ಡಬಳ್ಳಾಪುರ: ಮೈಸೂರಿನ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ತಬ್ದ ಚಿತ್ರದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಕಡೆಗಣಿಸಲಾಗಿದೆ ಎಂಬ ಆಕ್ರೋಶ ತಾಲೂಕಿನಾಧ್ಯಂತ ಬುಗಿಲೆದ್ದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ, ದೊಡ್ಡಬಳ್ಳಾಪುರ ಒಂದು ಶಾಪಗ್ರಸ್ತ ತಾಲೂಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಅರ್ಹತೆ ಇದ್ದರು ಕೂಡ ಪ್ರತಿ ಸೌಲಭ್ಯಕ್ಕೂ ಪ್ರತಿಯೊಂದು ಸೇವೆಗೂ ಪ್ರತಿಭಟನೆ ಹೋರಾಟ ಮಾಡಿ ನ್ಯಾಯ ಪಡೆಯುವ ದೈನೇಸಿ ಸ್ಥಿತಿ ನಮ್ಮದು.
ನಮ್ಮ ತಾಲೂಕನ್ನು ಕಂಡರೆ ಯಾವುದೇ ಪಕ್ಷದ ಉಸ್ತುವಾರಿ ಸಚಿವರಾದರೂ ಮಲತಾಯಿ ಮಕ್ಕಳಂತೆ ಕಾಣುತ್ತಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ನಾವು (ದೊಡ್ಡಬಳ್ಳಾಪುರ ತಾಲೂಕು) ಈ ದೇಶದವರೆ ಅಲ್ಲವೇನೊ ಎನ್ನುವಂತೆ ವರ್ತಿಸುತ್ತದೆ. ಹಲವಾರು ದಶಕಗಳ ಹಿಂದಿನಿಂದ ನಮ್ಮದೆ ಉಪವಿಭಾಗ ಇದ್ದರೂ ಕೂಡ ಹಲವಾರು ಭಾರಿ ಮನವಿ ಹೋರಾಟ ನಡೆದರೂ ಇಂದಿಗೂ ಒಂದು ಭಾರಿಯಾದರೂ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳು ಬಂದು ಇಲ್ಲಿ ಧ್ವಜಾರೋಹಣ ಮಾಡಿಲ್ಲ ಎಂದು ಕಿಡಿಕಾರಿದರು.
ಯಾವುದೇ ಮಾನದಂಡದಿಂದ ನೋಡಿದರೂ ಜಿಲ್ಲಾ ಕೇಂದ್ರವಾಗಲೂ ಅರ್ಹತೆ ಇರುವ ತಾಲ್ಲೂಕು ಕೂಡ ನಮ್ಮದೇ. ಆದರೂ ನಮ್ಮ ತಾಲೂಕಿನ ಜನತೆಯ ಕೂಗು ಅರಣ್ಯ ರೋಧನ.
ಈಗ ತಾಜ ಉದಾಹರಣೆ ವಿಶ್ವ ವಿಖ್ಯಾತ. ಮೈಸೂರು ದಸರಾ ಜಂಬೂ ಸವಾರಿಯ ಸ್ತಬ್ಧ ಚಿತ್ರ ಗಳಲ್ಲಿ ನಮ್ಮ ತಾಲೂಕು ಕಾಣೆಯಾಗಿದೆ..! ಯಾಕೆ ನಮ್ಮ ತಾಲೂಕಿಗೆ ಇತಿಹಾಸವೆ ಇಲ್ಲವೆ ಅಥವಾ ನಾವು ಗ್ರಾಮಾಂತರ ಜಿಲ್ಲೆಯವರಲ್ಲವೆ..? ಎಂದು ಪ್ರಶ್ನಿಸಿರುವ ಅವರು, ಈ ರೀತಿಯ ತಾರತಮ್ಯ, ನಿರ್ಲಕ್ಷ್ಯ, ಕಡೆಗಣನೆ, ಮಲತಾಯಿ ಧೋರಣೆ ನಮಗೆ ಪದೇ ಪದೇ ಆಗುತ್ತಿದೆ.
ಇದನ್ನು ಎಷ್ಟು ದಿನ ಅಂತಾ ಸಹಿಸುವುದು ದೊಡ್ಡಬಳ್ಳಾಪುರ ತಾಲೂಕಿನ ಶಾಸಕರು ಕೂಡಲೇ ಇದರ ಬಗ್ಗೆ ಗಮನ ಹರಿಸಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಬಳಿ ಕಾರಣ ಕೇಳಬೇಕು, ಸೂಕ್ತ ಎಚ್ಚರಿಕೆ ನೀಡಬೇಕು, ನಮ್ಮ ತಾಲೂಕಿನ ವಿರೋಧ ದಾಖಲಿಸಬೇಕು, ನಿರ್ಲಕ್ಷ್ಯದ ವಿರುದ್ಧ ಉಸ್ತುವಾರಿ ಸಚಿವರಿಗೆ ಹಾಗೂ ಸರ್ಕಾರಕ್ಕೆ ಪತ್ರ ಬರೆದು ಖಂಡಿಸಬೇಕು ಮುಂದೆ ಪುನರಾವರ್ತನೆ ಆಗದಂತೆ ಗಮನ ಹರಿಸಬೇಕು ಎಂದು ರಾಜಘಟ್ಟರವಿ ಒತ್ತಾಯಿಸಿದ್ದಾರೆ.
ಅಲ್ಲದೆ ದೊಡ್ಡಬಳ್ಳಾಪುರ ಕಡೆಗಣನೆ ಇದೊಂದು ಅಕ್ಷಮ್ಯ ನಡವಳಿಕೆ ಇದಕ್ಕೆ ತಾಲೂಕಿನ ಎಲ್ಲಾ ಜನತೆ ಧಿಕ್ಕಾರ ಕೂಗುತ್ತಾರೆ ಎಂದಿದ್ದಾರೆ.