ಬೆಂಗಳೂರು; ಆಟವಾಡುವಾಗ ಅಣ್ಣ-ತಂಗಿ ಆಯತಪ್ಪಿ ಕೆರೆಗೆ ಬಿದ್ದು ನೀರನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹರ್ಷ ಲೇಔಟ್ನ ಜಾನ್ಸನ್ (13) ಮತ್ತು ಮಹಾಲಕ್ಷ್ಮೀ(11) ಕೆರೆಗೆ ಬಿದ್ದಿರುವ ಅಣ್ಣ-ತಂಗಿ. ಸೋಮವಾರ ಸಂಜೆ 5.30ಕ್ಕೆ ಕೆಂಗೇರಿ ಬಸ್ ನಿಲ್ದಾಣದ ಎದುರಿನ ಕೆರೆಯಲ್ಲಿ ಈ ಘಟನೆ ನಡೆದಿದೆ.
ಜಯಮ್ಮ ಎಂಬುವವರ ಮಕ್ಕಳಾದ ಜಾನ್ಸನ್ ಮತ್ತು ಮಹಾಲಕ್ಷ್ಮೀ ಕೆರೆಯ ವಾಕಿಂಗ್ ಪಾತ್ನಲ್ಲಿ ಆಟವಾಡುತ್ತಿದ್ದಾಗ ಕೆರೆಗೆ ಉರುಳಿದ ಬಿಂದಿಗೆ ಎತ್ತಿಕೊಳ್ಳಲು ಮಹಾಲಕ್ಷ್ಮೀ ಕೆರೆಗೆ ಇಳಿದಿದ್ದಳು. ತಂಗಿ ಮುಳುಗುವುದನ್ನು ಕಂಡ ಜಾನ್ಸನ್ ಸಹ ರಕ್ಷಣೆಸಲು ಕೆರೆಗೆ ಇಳಿದಿದ್ದಾನೆ. ಈ ವೇಳೆ ಆತನೂ ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿ ಶೀಲನೆ ನಡೆಸಿ, ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಇಬ್ಬರು ಮಕ್ಕಳಿಗಾಗಿ ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಮಕ್ಕಳು ಪತ್ತೆಯಾಗಿಲ್ಲ.
ಅಷ್ಟರಲ್ಲಿ ಕತ್ತಲೆ ಆವರಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.