ಬೆಂಗಳೂರು: ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಅವಳಿ ನಗರಗಳಿಗೆ ನೀರುಣಿಸುವ ಜಕ್ಕಲಮಡಗು ಜಲಾಶಯ ತುಂಬಿ ಕೋಡಿ ಹರಿದಿದ್ದು, ಎರಡು ನಗರಗಳ ಜನರಿಗೆ ನೆಮ್ಮದಿ ತರಿಸಿರುವ ಕುರಿತು ಸಂಸದ ಡಾ.ಕೆ.ಸುಧಾಕರ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ಗಡಿಭಾಗದಲ್ಲಿರುವ ಜಕ್ಕಲಮಡಗು ಜಲಾಶಯ ಅವಳಿ ನಗರಗಳಿಗೆ ಕುಡಿಯುವ ನೀರು ಪೂರೈಸುವ ನೀರಿನ ಸೆಲೆಯಾಗಿದ್ದು, ಕಳೆದ ವರ್ಷ ಮಳೆಯ ಕೊರತೆಯಿಂದ ಜಲಾಶಯ ಕೋಡಿ ಬಿದ್ದಿರಲಿಲ್ಲ.
ಎರಡು ವರ್ಷಗಳ ಹಿಂದೆ, ಅಂದರೆ, 2022ರ ಜೂನ್ ತಿಂಗಳಲ್ಲೇ ಕೋಡಿಬಿದ್ದು ಎರಡು ನಗರಗಳಲ್ಲಿ ಕಳೆದ ಎರಡು ವರ್ಷದಿಂದ ಯಾವುದೇ ನೀರಿನ ಸಮಸ್ಯೆಯಾಗದಂತ ಪರಿಸ್ಥಿತಿ ಇತ್ತು. ಇದೀಗ ಮತ್ತೊಮ್ಮೆ ಜಲಾಶಯ ತುಂಬಿರುವುದು ಇನ್ನೆರಡು ವರ್ಷಗಳ ನೀರಿನ ಸಮಸ್ಯೆಯನ್ನ ದೂರ ಮಾಡಿದೆ.
ಜಕ್ಕಲಮಡುಗು ಜಲಾಶಯ 4390 ದಶಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯ, 51.25 ಚ.ಮೀ. ಶೇಖರಣಾ ವಿಸ್ತಿರ್ಣ ಹೊಂದಿದೆ. ಈ ಜಲಾಶಯದಿಂದ ಚಿಕ್ಕಬಳ್ಳಾಪುರ ನಗರ ಶೇ.68 ಪಾಲು ಪಡೆದರೆ, ದೊಡ್ಡಬಳ್ಳಾಪುರ ನಗರಕ್ಕೆ ಶೇ.32 ಪಾಲಿದೆ.
ಈ ಬಾರಿ ಜಲಾಶಯ ತುಂಬಿ ಹರಿಯಲಿದೆ ಎಂಬ ಜನರ ಆಶಾಭಾವನೆಗೆ ತಕ್ಕಂತೆ ಉತ್ತಮ ಮಳೆಯಾಗಿ ಜಲಾಶಯ ತುಂಬಿರುವುದು ಎರಡು ನಗರಗಳ ಜನತೆಗೆ ಅತ್ಯಂತ ಸಂತಸದ ವಿಷಯವಾಗಿದೆ ಎಂದಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯಲ್ಲಿ ಸೋಮವಾರ ರಾತ್ರಿ 72.05 ಮಿ.ಮೀ ದಾಖಲೆ ಮಳೆ ಸುರಿದಿದ್ದು, ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದ ರೈತರನ್ನು ಸಂಕಷ್ಟಕ್ಕೆ ಒಳಾಗಗುವಂತೆ ಮಾಡಿದ್ದು, ಹೂವಿನ ತೋಟಗಳಿಂದ ನೀರನ್ನು ಹೊರಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಇನ್ನೂ ಗುಡುಗು, ಸಿಡಿಲಿನ ಜೊತೆ ದೊಡ್ಡಬಳ್ಳಾಪುರ ತಾಲೂಕಿನ ಧಾರಾಕಾರವಾಗಿ ಮಳೆ ಕಸಬಾ ಹೋಬಳಿಯಲ್ಲಿ 53.07 ಮಿ.ಮೀ, ದೊಡ್ಡಬೆಳವಂಗಲ ಹೋಬಳಿಯಲ್ಲಿ 33.05 ಮಿ.ಮೀ, ಮಧುರೆ ಹೋಬಳಿಯಲ್ಲಿ 32.05 ಮಿ.ಮೀ ಹಾಗೂ ಸಾಸಲು ಹೋಬಳಿಯಲ್ಲಿ 34.08 ಮಿ.ಮೀ ಒಟ್ಟು 46.14 ಮಿ.ಮೀ ದಾಖಲಾಗಿದೆ.