ರಾಮನಗರ: ಬಿಜೆಪಿ ಜೊತೆಗೂಡಿ ತಂತ್ರಗಾರಿಕೆ ಮಾಡಿ ಯೋಗೇಶ್ವರ್ ಅವರನ್ನು ಹೊರಹಾಕಿದ್ದು ಕುಮಾರಸ್ವಾಮಿಯೇ ಹೊರತು, ನಾವೇನೂ ಷಡ್ಯಂತ್ರ ಮಾಡಿಲ್ಲ ಎಂದು ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ಅವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಅಭ್ಯರ್ಥಿ ಕೊರತೆಯಿಂದ ಯೋಗೇಶ್ವರ್ ಅವರನ್ನ ಬಿಜೆಪಿಯಿಂದ ಹೈಜಾಕ್ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಯೋಗೇಶ್ವರ್ 9 ಚುನಾವಣೆ ಎದುರಿಸಿ, 5 ಸಲ ಶಾಸಕರಾಗಿ 2 ಸಲ ಸಚಿವರಾಗಿದ್ದವರು. ಕುಮಾರಸ್ವಾಮಿ ತಮ್ಮ ಪುತ್ರನನ್ನು ಉಪ ಚುನಾವಣೆಗೆ ನಿಲ್ಲಿಸುವುದಕ್ಕಾಗಿ, ಬಿಜೆಪಿ ಜೊತೆಗೂಡಿ ತಂತ್ರಗಾರಿಕೆ ಮಾಡಿ ಯೋಗೇಶ್ವರ್ ಅವರನ್ನು ಹೊರಹಾಕಿದರು.
ನಾವೇನೂ ಷಡ್ಯಂತ್ರ ಮಾಡಿಲ್ಲ. ಮಾಡುತ್ತಿರುವುದು ಅವರೇ, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಹೋಗಿ ಕೂತು ಮಾಡ್ತಾ ಇರೋದು ಷಡ್ಯಂತ್ರವಲ್ಲವೇ? ಎಂದು ಪ್ರಶ್ನಿಸಿದರು.
ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಯಾವುದೇ ಅಸಮಾಧಾನವಿಲ್ಲ. ಇಲ್ಲಿ ಮುಂಚಿನಿಂದಲೂ ನಾನೇ ಅಭ್ಯರ್ಥಿ ಎಂದು ಡಿಕೆ ಶಿವಕುಮಾರ್ ಹೇಳಿಕೊಂಡು ಬಂದಿದ್ದಾರೆ. ಈಗ ಅಭ್ಯರ್ಥಿಯಾಗಿರುವ ಯೋಗೇಶ್ವರ್ ಜೊತೆಗೆ ಶಿವಕುಮಾರ್ ಮುಖ ನೋಡಿ ಜನ ಮತ ಹಾಕಲಿದ್ದಾರೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ ಸರ್ಕಾರದಿಂದ ನಮ್ಮ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿರುವುದಕ್ಕೆ ತಿರುಗೇಟು ನೀಡಿದ ಡಿಕೆ ಸುರೇಶ್, ಬಸ್ಸುಗಳಲ್ಲಿ ಜನರನ್ನು ಕರೆದುಕೊಂಡು ಬರಲು ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆದು, ಲೆಕ್ಕ ಕೊಡಬೇಕು ಎಂಬ ಸಾಮಾನ್ಯ ಜ್ಞಾನ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಇಲ್ಲವೆ? ಅಷ್ಟೂ ಗೊತ್ತಿಲ್ಲದೆ ಹೇಗೆ ಕೇಂದ್ರ ಸಚಿವರಾದರು? ಗೊಲ್ಲದಿದ್ದರೆ ಪ್ರಧಾನಿ ಮೋದಿಯನ್ನು ಕೇಳಿ ತಿಳಿದುಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಹಲವು ಚುನಾವಣೆಗಳನ್ನು ಮಾಡಿದ್ದಾರೆ. ನೀತಿ ಸಂಹಿತೆ ಹಾಗೂ ಯಾರ ಪಾತ್ರ ಏನೇನು ಎಂಬುದರ ಅರಿವಿದೆ. ಉಲ್ಲಂಘನೆ ಆಗಿದ್ದರೆ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳು ಅವರ ಕರ್ತವ್ಯ ಮಾಡುತ್ತಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ. ಆದರೆ, ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ದಿನಾ ಬೆಳಿಗ್ಗೆ ದೂಷಿಸುತ್ತಾರೆ ಎಂದು ಕಿಡಿಕಾರಿದರು.