ದೊಡ್ಡಬಳ್ಳಾಪುರ: ಕನ್ನಡಾಂಬೆಯ ಮಕ್ಕಳಾದ ನಾವು ಕರ್ನಾಟಕಕ್ಕೆ ಆಗಮಿಸುವ ಅನ್ಯ ಭಾಷಿಗರಿಗೆ ಕನ್ನಡವನ್ನು ಕಲಿಸಿ, ನಾವು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ವಿಸ್ತರಿಸಬೇಕು ಎಂದು ಶ್ರೀ ದೇವರಾಜ್ ಅರಸ್ ಎಜುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷರಾದ ಜೆ.ರಾಜೇಂದ್ರ ಹೇಳಿದರು.
ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಕ್ಯಾಂಪಸ್ ಹಾಗೂ ಶ್ರೀ ದೇವರಾಜ್ ಅರಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾವು ಕೇವಲ ನವೆಂಬರ್ ಕನ್ನಡಿಗರಾಗದೆ ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲಿ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ, ಕನ್ನಡ ನುಡಿ, ಸಂಸ್ಕೃತಿ ಪರಂಪರೆ ಉಳಿಸಲು ಕನ್ನಡಿಗರಾದ ನಾವುಗಳು ಸದಾ ಕಟಿಬದ್ಧರಾಗಬೇಕು ಎಂದರು.
ಶ್ರೀ ದೇವರಾಜ್ ಅರಸ್ ಅಂತರರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲ ಧನಂಜಯ್ ಮಾತನಾಡಿ, ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ. ನದಿಗಳು ಹರಿಯುವ, ಸಾಧು-ಸಂತರು-ದಾಸರು- ಶಿವಶರಣರು – ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ, ಕರ್ನಾಟಕದ ಹಿತವನ್ನು ಕನ್ನಡವನ್ನು ವಿರೋಧಿಸುವ ವ್ಯಕ್ತಿ ಎಷ್ಟೇ ದೊಡ್ಡ ರಾಷ್ಟ್ರ ಭಕ್ತನಾದರೂ ಅವನನ್ನು ಕನ್ನಡದ ಮನಸುಗಳು ನಿರಾಕರಿಸಬೇಕು. ನಮ್ಮ ಭಾಷೆಯನ್ನು ಬೆಳೆಸಲು ಶ್ರದ್ಧೆ ಎಂಬ ನೀರೆರೆದು ಭಾಷೆ ಎಂಬ ಮರವನ್ನು ಬೆಳೆಸಬೇಕು. ನಮ್ಮ ನಾಡಗೀತೆಯಲ್ಲಿ ದೇಶಭಕ್ತಿಯೊಡನೆ ರಾಜ್ಯದ ಮೇಲಿನ ಪ್ರೀತಿಯನ್ನು ಹೆಣೆಯಲಾಗಿದೆ, ಅಖಂಡ ಭಾರತದ ಕಲ್ಪನೆಯನ್ನು ಮಾಡಿಕೊಂಡಿರುವಂತಹ ಶ್ರೇಯಸ್ಸು ನಮ್ಮ ಕವಿಗಳಿಗೆ ಸಲ್ಲುತ್ತವೆ ಎಂದರು.

ಶ್ರೀದೇವರಾಜ್ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಚಿಕ್ಕಣ್ಣ ಮಾತನಾಡಿ, ಆಲೂರು ವೆಂಕಟರಾವ್ 1905ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ, ಕರ್ನಾಟಕದ ಇತಿಹಾಸ ಕಲೆ, ಸಾಹಿತ್ಯ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ಅರಿವು ಮೂಡಿಸುವ ಕಾರ್ಯಕ್ರಮಗಳು ಜರುಗಬೇಕು, ನುಡಿದಂತೆ ನಡೆವ ಭಾಷೆ ನಮ್ಮ ಕನ್ನಡ ಭಾಷೆ, ಶಬ್ದಕ್ಕೂ ಹಾಗೂ ಅಭಿವ್ಯಕ್ತಿಗೂ ಸಂಬಂಧವಿರುವ ಶ್ರೀಮಂತವಾದ ಭಾಷೆ ಕನ್ನಡ ಭಾಷೆ, ಆದ್ದರಿಂದಲೇ ಸಿರಿಗನ್ನಡಂ ಗೆಲ್ಗೆ ಎಂದು ಹೇಳುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ದೇವರಾಜ್ ಅರಸ್ ಸಮೂಹ ಶಿಕ್ಷಣ ಸಂಸ್ಥೆಯ ಎಲ್ಲಾ ಕನ್ನಡ ಅಧ್ಯಾಪಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್ ಜಾಲಪ್ಪ ಕ್ಯಾಂಪಸ್ ನ ಅಧ್ಯಕ್ಷರಾದ ಜೆ. ಆರ್ ರಾಕೇಶ್, ಲಯನ್ ಎಂ.ಆರ್. ಶ್ರೀನಿವಾಸ್ ಲಯನ್ ಎಂ. ಎ. ನಾಗರತ್ನ, ವೀರಭದ್ರಗೌಡ, ಶೈಕ್ಷಣಿಕ ಘಟಕಗಳ ಎಲ್ಲಾ ಪ್ರಾಂಶುಪಾಲರುಗಳು, ಉಪ ಪ್ರಾಂಶುಪಾಲರುಗಳು, ಮುಖ್ಯಸ್ಥರುಗಳು, ಪ್ರಾಧ್ಯಾಪಕರುಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.