Daily story: ಇಬ್ಬರು ಗೆಳೆಯರಿದ್ದರು. ಅವರ ಕೆಲಸ ಒಳ್ಳೆಯ ಸುಂದರವಾದ `ಮಡಕೆಗಳನ್ನು ಮಾಡುವುದು. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಒಳ್ಳೆಯ ಕುಂಬಾರರು ಎಂದು ಹೆಸರು ಮಾಡಿದ್ದರು. ಮಡಕೆಗಳನ್ನು ಮಾರಿ ತಮ್ಮ ಜೀವನ ಸಾಗಿಸುತ್ತಿದ್ದರು.
ಒಂದು ಸಂತೆಯಲ್ಲಿ ಮಡಕೆ ಮಾರುತ್ತಿರುವಾಗ ಆ ಹಳ್ಳಿಯ ಜಮೀನುದಾರ ‘ನನ್ನ ಮನಸ್ಸಿಗೆ ಸುಂದರವಾಗಿ ಕಾಣುವಂತೆ ಯಾರು ಒಳ್ಳೆಯ ಮಡಕೆಗಳನ್ನು ಮಾಡಿಕೊಂಡು ಬರುತ್ತಾರೋ ಅವರಿಗೆ ನಿಮ್ಮ ತೂಕದಷ್ಟು ಹಣವನ್ನು ಕೊಡುತ್ತೇನೆ’ ಎಂದು ಹೇಳಿ ಹೋದನು.
ಗೆಳೆಯರಿಬ್ಬರು ಬಡವರು. ಆದರೆ, ಒಬ್ಬ ಹಿರಿಯ ಮಡಕೆ ಮಾಡುವಲ್ಲಿ ಕಿರಿಯನಿಗಿಂತ ಸ್ವಲ್ಪ ನುರಿತವನಾಗಿದ್ದ. ಒಳ್ಳೆಯ ಸುಂದರವಾದ ಮಡಕೆಗಳನ್ನು ಮಾಡುತ್ತಿದ್ದ, ಆದರೆ ಕಿರಿಯವನು ಸುಂದರವಾಗಿ ಮಾಡುತ್ತಿದ್ದರೂ ಅವನು ಮಾಡಿದ ಮಡಕೆಯ ಮೇಲೆ ಸುಂದರವಾದ ವಿನ್ಯಾಸ ಇರಲಿಲ್ಲ. ಇದರಿಂದ ತನಗೆ ಆ ಬಹುಮಾನದ ಹಣ ತಪ್ಪುತ್ತದೆ. ತನ್ನ ಗೆಳೆಯನಿಗೆ ಸಿಗುತ್ತದೆ ಎಂದು ದುರಾಸೆಯನ್ನು ವ್ಯಕ್ತಪಡಿಸಿದ.
‘ಹೇಗಾದರೂ ಮಾಡಿ ಗೆಳೆಯನ ಮಡಕೆಯಲ್ಲಿ ಒಂದು ರಂಧ್ರವನ್ನು ಕೊರೆದು ಬಿಟ್ಟರೆ ಆ ಜಮೀನುದಾರ ನನಗೆ ಹಣವನ್ನು ಕೊಡುತ್ತಾನೆ’ ಎಂದು ಕಿರಿಯವ ಯೋಚಿಸಿದ. ಅಂದು ಮಧ್ಯರಾತ್ರಿ ರಂಧ್ರ ಕೊರೆಯಲು ಎದ್ದ. ಗೆಳೆಯ ತಯಾರು ಮಾಡಿದ ಸುಂದರವಾದ ಮಡಕೆಯನ್ನು ನೋಡಿದಾಗ ಮನಸ್ಸು ಬರಲಿಲ್ಲ. ಆದರೆ ಹಣದ ಆಸೆಯಿಂದ ಮಡಕೆಯನ್ನು ಎತ್ತಿ ಕೊಂಡಾಗ ಆಶ್ಚರ್ಯವಾಯಿತು ಕಿರಿಯ ಕುಂಬಾರನಿಗೆ, ಅಲ್ಲಿದ್ದ ಪ್ರತಿಯೊಂದು ಮಡಕೆಯಲ್ಲೂ ಮೊದಲೇ ರಂಧ್ರವಿತ್ತು.
ಅಷ್ಟರಲ್ಲಿ ಗೆಳೆಯನಾದ ಹಿರಿಯ ಕುಂಬಾರ ಎದುರಿಗೆ ಬಂದ. ‘ನಾಳೆ ನಿನ್ನ ಮಡಕೆಗಳನ್ನು ತೆಗೆದುಕೊಂಡು ಹೋಗು. ನನ್ನ ಮಡಕೆಯಲ್ಲಿ ಲೋಪವಿದೆ ಎಂದು ನಾನೇ ಹೇಳುತ್ತೇನೆ. ಆಗ ಬಹುಮಾನದ ಹಣವೆಲ್ಲ ನಿನಗೆ ಸಿಗುತ್ತದೆ. ಎಲ್ಲ ಹಣ ನೀನೆ ತೆಗೆದುಕೋ ನನಗೆ ಹಣ ಬೇಡ. ದುಡಿಯಲು ಶಕ್ತಿ ಇದೆ. ಸುಂದರವಾದ ಮಡಕೆಗಳನ್ನು ಮಾಡಲು, ಯೋಚಿಸಲು ಯುಕ್ತಿ ಇದೆ. ಅಷ್ಟು ಸಾಕು ನನಗೆ. ಈಗ ಮಲಗು. ಮುಂಜಾನೆ ಬೇಗ ಜಮೀನುದಾರನ ಮನೆಗೆ ಹೋಗಬೇಕು’ ಎಂದ.
ಕಿರಿಯ ಕುಂಬಾರನಿಗೆ ತನ್ನ ತಪ್ಪಿನ ಅರಿವಾಯಿತು. ‘ಕ್ಷಮಿಸು ಗೆಳೆಯ, ಹಣದ ವ್ಯಾಮೋಹದಿಂದ ನಾನು ದುರ್ಬುದ್ದಿಯವನಾದೆ. ಹಣಕ್ಕಿಂತ ಮೀಗಿಲಾದದ್ದು ಗುಣ. ಆ ಗುಣ ನಿನ್ನಲ್ಲಿ ಇದೆ. ಶಕ್ತಿಯ ಜೊತೆ ಯುಕ್ತಿಯೊಂದಿದ್ದರೆ ನಾನು ಶ್ರೀಮಂತನಾಗಬಹುದು. ಏನು ಬೇಕಾದರೂ ಸಾಧಿಸಬಹುದು ಎಂದು ನೀನು ನನಗೆ ಹೇಳಿಕೊಟ್ಟೆ’ ಎಂದು ತನ್ನ ಗೆಳೆಯನ ಕ್ಷಮೆ ಕೇಳಿದನು.
ಕೃಪೆ: ಸಾಮಾಜಿಕ ಜಾಲತಾಣ.