ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕುರಿತು ಬಿಜೆಪಿ ನಾಯಕರು, ಪರಿಷತ್ ಸದಸ್ಯ ಸಿಟಿ ರವಿಯವರು (CT Ravi) ಬಳಸಿದ ಪದ ಅತ್ಯಂತ ಹೀನ ಹಾಗೂ ಖಂಡನಾರ್ಹ. ಒಬ್ಬ ಮಹಿಳೆಯ ಕುರಿತ ಇಂತಹ ಮಾತು ಅವರ ನೀಚತನದ ಪರಮಾವಧಿ ಎಂದು ಮಾಜಿ ಶಾಸಕಿ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮಲ್ಲೇಶ್ವರ ಬಿಜೆಪಿ ಕಚೇರಿ ಮುಂದೆ ಬಿಜೆಪಿ ಮತ್ತು ಸಿಟಿ ರವಿ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮನ್ನು ತಾವು ಸಂಸ್ಕೃತಿಯ ರಕ್ಷಕರೆಂದು ಬಿಂಬಿಸಿಕೊಳ್ಳುವ ಬಿಜೆಪಿ ನಾಯಕರು ಬಾಯಿ ಬಿಟ್ಟರೆ ಸಾಕು, ಅವರ ಸಂಸ್ಕೃತಿ ತಿಳಿಯುತ್ತದೆ. ಅಂಬೇಡ್ಕರರ ಕುರಿತಾಗಿಯೇ ಹಗುರವಾಗಿ ಮಾತನಾಡುವ ಬಿಜೆಪಿಗರು ಮಹಿಳೆಯರ ಬಗ್ಗೆ ಇಂತಹ ಅವಾಚ್ಯ ಪದ ಬಳಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
ಸದನದಂತಹ ಸ್ಥಳದಲ್ಲಿಯೇ ಮಹಿಳೆಯರನ್ನು ಅವಮಾನಿಸುವ ಇವರು ಇನ್ನು ರಾಜ್ಯದ ದುರ್ಬಲರು, ಶೋಷಿತರು, ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬಹುದು ಎಂದು ಪ್ರಶ್ನಿಸಿದರು.
ಸಿಟಿ ರವಿ ಅವರು ಈ ಕೂಡಲೇ ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು. ಬಿಜೆಪಿ ಪಕ್ಷವು ಮಹಿಳೆಯರ ಪರ ಕಾಳಜಿ ಹೊಂದಿದ್ದರೆ ಈ ಕೂಡಲೇ ರವಿಯವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.