ಬೆಳಗಾವಿ: ಸುಗಮ ಸಂಚಾರ ಹಾಗೂ ನಾಗರಿಕರ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ (Namma Metro) ಮಾರ್ಗವನ್ನು ಹೊಸಕೋಟೆ, ನೆಲಮಂಗಲ ಹಾಗೂ ಬಿಡದಿವರೆಗೆ ವಿಸ್ತರಣೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದರು.
ವಿಧಾನಸಭೆಯ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಶರತ್ ಬಚ್ಚೆಗೌಡ ಅವರು ಹೊಸಕೋಟೆಗೆ ಮೆಟ್ರೋ ಮಾರ್ಗ ವಿಸ್ತರಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಡಿಕೆ ಶಿವಕುಮಾರ್ ಇಂದು ಉತ್ತರಿಸಿದರು.
ಈ ವಿಚಾರವಾಗಿ ಶರತ್ ಅವರು ಬಹಳ ಹೋರಾಟ ಮಾಡುತ್ತಿದ್ದಾರೆ. ಬೆಂಗಳೂರು ಕೂಡ ವಿಪರೀತವಾಗಿ ಬೆಳೆಯುತ್ತಿದೆ. ಸಾಮಾನ್ಯ ರೈಲಿನಲ್ಲಿ ಕೋಲಾರದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ದಿನ ನಿತ್ಯ ಸಂಚರಿಸುತ್ತಾರೆ. ಐಟಿ ಕಾರಿಡಾರ್ ಬಹುತೇಕ ಹೊಸಕೋಟೆ ಮುಟ್ಟಿದೆ. ಹೀಗಾಗಿ ಮೆಟ್ರೋ ಅವಶ್ಯಕತೆ ಇದೆ ಎಂದು ತಿಳಿಸಿದರು.
ಮಾರ್ಗ ವಿಸ್ತರಣೆ ವಿಚಾರವನ್ನು ನಾನು ಈಗಾಗಲೇ ಯೋಜನೆಯಲ್ಲಿ ಸೇರಿಸಿ ವಿಸ್ಕೃತ ಸಮೀಕ್ಷೆ ಮಾಡಿಸುತ್ತಿದ್ದೇನೆ. ನಮ್ಮಸರ್ಕಾರ ಹಾಗೂ ಮೆಟ್ರೋ ಸಂಸ್ಥೆ ಅವರ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಿದೆ.
ಹೊಸಕೋಟೆ ಜೊತೆಗೆ ಬಿಡದಿ, ನೆಲಮಂಗಲದವರೆಗೂ ಮೆಟ್ರೋ ಮಾರ್ಗ ವಿಸ್ತರಣೆ ಯೋಜನೆ ಸಿದ್ಧಡಿಸಲು ವರದಿ ರೂಪಿಸಲಾಗುತ್ತಿದೆ. ನಾವು ನಿಮ್ಮ ಮನವಿಯನ್ನು ಪರಿಗಣಿಸಿದ್ದೇವೆ ಎಂದು ಹೇಳಿದರು.