ಬೆಂಗಳೂರು: ಸಾಮರಸ್ಯ, ಸಹೋದರತ್ವದ ದ್ಯೋತಕವೇ ರಕ್ಷಾಬಂಧನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra) ತಿಳಿಸಿದರು.
ರಕ್ಷಾಬಂಧನ ಕಾರ್ಯಕ್ರಮದ ಅಂಗವಾಗಿ ಇಂದು ಬೆಂಗಳೂರಿನಲ್ಲಿ ಮಹಿಳೆಯರ ಸಬಲೀಕರಣಕ್ಕೆ ಮೀಸಲಾಗಿ ದುಡಿಯುತ್ತಿರುವ ಸುಮಂಗಲಿ ಸೇವಾಶ್ರಮದಲ್ಲಿ ಪವಿತ್ರ ರಕ್ಷಾ ಬಂಧನ ಆಚರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಹೆಣ್ಣಿಗೂ ಸಹೋದರನಾಗಿ ನಿಲ್ಲುವ ಹಾಗೂ ಆಕೆಯಲ್ಲಿ ಧೈರ್ಯವನ್ನು ತುಂಬಿ ಸಮಾಜಕ್ಕೆ ಶಕ್ತಿಯಾಗಿ ಆ ಹೆಣ್ಣು ಬೆಳೆಯಲು ಪುರುಷ ಸಮಾಜದ ರಕ್ಷಾ ಕವಚವಾಗಿ ನಿಲ್ಲಬೇಕು, ಎನ್ನುವ ಸಂದೇಶವೇ ಈ ರಕ್ಷಾಬಂಧನ ಎಂದು ವಿವರಿಸಿದರು. ಆಶ್ರಮದ ವಿದ್ಯಾರ್ಥಿನಿಯರಿಗೆ ಸಿಹಿ ವಿತರಿಸಿ ರಕ್ಷಾಬಂಧನದ ಶುಭ ಕೋರಲಾಯಿತು.
ಮೊಗೆದಷ್ಟೂ ಬರಿದಾಗದ ನಿಷ್ಕಲ್ಮಶ ಪ್ರೀತಿಯ ದ್ಯೋತಕವಾಗಿ ಸುಖ, ಸಮೃದ್ಧಿ, ಶ್ರೇಯಸ್ಸನ್ನು ಕೋರಿ, ನೈತಿಕ ಬೆಂಬಲ ಸೂಚಕವಾಗಿ ರಕ್ಷೆ ಕಟ್ಟಿ ಹಾರೈಸಿದ ಆಶ್ರಮದ ಹೆಣ್ಣುಮಕ್ಕಳು ಹಾಗೂ ತಾಯಂದಿರ ಹಾರೈಕೆಗಳು ಮಾತೃ ವಾತ್ಸಲ್ಯದ ಪ್ರತಿರೂಪದಂತಿತ್ತು ಎಂದು ವಿಜಯೇಂದ್ರ ಹೇಳಿದರು.