
ಬೆಂಗಳೂರು: ಹುಟ್ಟಿದ ದಿನದಂದೇ ಮಕ್ಕಳ ಶ್ರವಣ ದೋಷ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ನ್ಯೂನತೆ ಗುಣಪಡಿಸಬಹುದಾಗಿದ್ದು, ಪೋಷಕರು ಹಾಗೂ ವೈದ್ಯರು ಮಕ್ಕಳ ಶ್ರವಣ ದೋಷವನ್ನು ಆರಂಭದಲ್ಲೇ ಪತ್ತೆಹಚ್ಚಿ ಗುಣಪಡಿಸಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ ತಿಳಿಸಿದರು.

ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಐಇಸಿ, ಎಸ್ಬಿಸಿಸಿ ವಿಭಾಗ ಇವರುಗಳ ಸಂಯುಕ್ತಾಶ್ರದಲ್ಲಿ ಬುಧವಾರ ದಾವಣಗೆರೆ ನಗರದ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಶ್ರವಣ ದಿನಾಚರಣೆಯಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಕ್ಕಳಿಗೆ ಕಿವಿಯ ಆರೈಕೆಯ ಶಿಕ್ಷಣ ನೀಡುವುದು ಅವಶ್ಯಕ. ಕಿವಿಗಳಲ್ಲಿ ಯಾವುದೇ ವಸ್ತುವನ್ನು ಹಾಕಿಕೊಳ್ಳುವುದು ಹಾಗೂ ಜೋರಾದ ಶಬ್ಧದೊಂದಿಗೆ ಸಂಗೀತವನ್ನು ಆಲಿಸುವುದರಿಂದ ಆಗಬಹುದಾದ ಅನಾಹುತದ ಬಗ್ಗೆ ತಿಳುವಳಿಕೆ ನೀಡಬೇಕು. ಹಾಗೂ ಉತ್ತಮ ಜೀವನ ನಿರ್ವಹಣೆಗೆ ಪಂಚೇಂದ್ರಿಯಗಳು ಅತ್ಯಗತ್ಯವಾಗಿದ್ದು ಕಣ್ಣಿನ ಆರೋಗ್ಯದಷ್ಟೇ ಕಿವಿಯ ಆರೋಗ್ಯವೂ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಜಾಗೃತಿ ವಹಿಸಿ ಶ್ರವಣ ದೋಷದ ಸಮಸ್ಯೆಗೆ ಆಸ್ಪದ ನೀಡದಂತೆ ಸಮಾಜ ಮುನ್ನಡೆಯಬೇಕು ಎಂದರು.
ಪಂಚೇಂದ್ರಿಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. 2012 ರಲ್ಲಿ ಶ್ರವಣ ದೋಷಗಳ ಸಮೀಕ್ಷೆಯನ್ನು ನಡೆಸಲಾಗಿತ್ತು. ನಂತರದಲ್ಲಿ ಇಲ್ಲಿಯವರೆಗೂ ಸಮೀಕ್ಷೆ ಕೈಗೊಳ್ಳದ ಕಾರಣ ನಿರ್ದಿಷ್ಟ ಅಂಕಿ-ಅಂಶಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ 2021ರಲ್ಲಿ ಶ್ರವಣ ದೋಷದ ಸಮೀಕ್ಷೆ ನಡೆಸಿ ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರೀಕ ಕಲ್ಯಾಣಾಧಿಆರಿ ಅಧಿಕಾರಿ ಜಿ.ಎಸ್. ಶಶಿಧರ್ ಮಾತನಾಡಿ, ಕಳೆದ ವರ್ಷ ವಿಶ್ವ ಶ್ರವಣ ದಿನಾಚರಣೆಯನ್ನು ಜಾಗೃತಿ ಜಾಥಾ ಮಾಡುವುದರ ಮೂಲಕ ಆಚರಿಸಿದ್ದು, ಈ ಬಾರಿ ಕೋವಿಡ್ ಇರುವ ಕಾರಣದಿಂದ ಸಾಂಕೇತಿಕವಾಗಿ ಆಚರಿಸುತ್ತಿದ್ದೇವೆ. 60 ಡೆಸಿಬಲ್ ಗಿಂತ ಹೆಚ್ಚು ಶ್ರವಣ ದೋಷ ಇರುವವರನ್ನು ಅಂಗವಿಕಲರು ಎಂದು ಪರಿಗಣಿಸಿ ಇವರಿಗೆ ಶೇಕಡ 40 ಕ್ಕಿಂತ ಹೆಚ್ಚು ಅಂಗವೈಕಲ್ಯ ಇರುವವರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಎಂದರು.
ಕೇಂದ್ರ ಸರ್ಕಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶ್ರವಣ ದೋಷ ಇರುವ ವಿದ್ಯಾರ್ಥಿಗಳ ಉನ್ನತ ಅಭ್ಯಾಸಕ್ಕಾಗಿ ರೂ. 40 ರಿಂದ 50 ಸಾವಿರ ಹಾಗೂ ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಶೇಕಡ 40 ರಷ್ಟು ಅಂಗವೈಕಲ್ಯತೆ ಹೊಂದಿರುವವರಿಗೆ ಮಾಸಿಕ ಪಿಂಚಣಿ ಸೌಲಭ್ಯ ಒದಗಿಸುತ್ತಿದ್ದು, ಸ್ವಂತ ಉದ್ಯೋಗ ಮಾಡುವವರಿಗೆ ಇಲಾಖೆ ವತಿಯಿಂದ ರೂ. 5 ಲಕ್ಷ ಸಾಲ ಸೌಲಭ್ಯ ನೀಡುತ್ತಿದ್ದೇವೆ ಎಂದರು.
ಕೇಂದ್ರ ಸರ್ಕಾರದ ವತಿಯಿಂದ ಪ್ರತಿ ಜಿಲ್ಲೆಯಲ್ಲೂ ಸಿಆರ್ಸಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ದಾವಣಗೆರೆಯ ದೇವರಾಜ್ ಅರಸ್ ಬಡಾವಣೆಯಲ್ಲಿ ಈ ಕೇಂದ್ರವಿದೆ. ಇಲ್ಲಿ ಆಡೀಯೋಲಾಜಿಸ್ಟ್, ಸ್ಪೀಚ್ ಥೆರಿಪಿಸ್ಟ್ ಸೇರಿದಂತೆ ವಿಕಲಚೇತನರಿಗೆ ಸಂಬಂಧಿಸಿದ ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಶ್ರವಣ ದೋಷವಲ್ಲದೇ ಎಲ್ಲಾ ವಿಕಲಚೇತನರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಇಲ್ಲಿ ಸಮಗ್ರ ಅಂಗವಿಕಲರ ಪುನಶ್ಚೇತನ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ದೈಹಿಕ ಅಂಗವಿಕಲರಿಗೆ ಬೈಕ್ ಮತ್ತು ಅಂಧÀರಿಗೆ ಲ್ಯಾಪ್ಟ್ಯಾಪ್ ನೀಡಲಾಗುತ್ತಿದೆ. ಶ್ರವಣ ದೋಷ ಇರುವವರಿಗೆ ಸಂವಹನ ನಡೆಸಲು ಹಾಗೂ ಸ್ವ-ಉದ್ಯೋಗ ಕಂಡುಕೊಳ್ಳಲು, ಉನ್ನತ ವಿದ್ಯಾಭ್ಯಾಸ ಮಾಡಲು ತೊಂದರೆ ಆಗಿರುವ ಹಿನ್ನೆಲೆಯಲ್ಲಿ ಅವರಿಗೆ ಮೊಬೈಲ್ ನೀಡಿದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಹೆಚ್ಚಿನ ಜ್ಞಾನವನ್ನು ಸಂಪಾದಿಸಲು ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
ಈ ವೇಳೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಜಿಲ್ಲೆಯಾದ್ಯಂತ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿದೆ. ಬೆರಳಣಿಕೆಯಷ್ಟು ಪ್ರಕರಣಗಳು ಮಾತ್ರ ವರದಿಯಾಗುತ್ತಿದೆ. ಆದರೆ ಇದೀಗ ಮತ್ತೆ ಕೊರೋನ 2ನೇ ಅಲೆ ಆರಂಭವಾಗಿದ್ದು, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡುಬಂದಿದೆ. ಇವೆರಡರ ಮಧ್ಯೆ ನಾವಿದ್ದೇವೆ. ಕೊರೋನ ಸೋಂಕು ಸಂಪೂರ್ಣವಾಗಿ ಹೋಗಿಲ್ಲದ ಕಾರಣ ಅದನ್ನು ತಡೆಗಟ್ಟಲು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.
ಪ್ರತೀ ರಾಷ್ಟ್ರೀಯ ಕಾರ್ಯಕ್ರಮಗಳಿಗೂ ಅದರದ್ದೇ ಆದ ಗುರಿ-ಉದ್ದೇಶಗಳಿರುತ್ತದೆ. ಅದರಂತೆ ವಿಶ್ವ ಶ್ರವಣ ದಿನಾಚರಣೆಯ ಉದ್ದೇಶವೆಂದರೆ ಶ್ರವಣ ದೋಷದ ಲಕ್ಷಣಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ತಪಾಸಣೆ ನಡೆಸುವುದು, ಅದರ ಕುರಿತು ಮಾಹಿತಿ ಹರಡುವುದು ಮತ್ತು ಅನಾರೋಗ್ಯ ಮುಕ್ತ ದೇಶವನ್ನಾಗಿ ಮಾಡುವುದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ಆರ್ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಶ್ರವಣದೋಷ ಮುಕ್ತ ದೇಶವನ್ನು ಮಾಡಬೇಕಾದರೆ ಮೊದಲು ವೈದ್ಯರು, ನರ್ಸ್ಗಳು ಮಗು ಹುಟ್ಟಿದ ತಕ್ಷಣ ಮಗುವಿನಲ್ಲಿರುವಂತಹ ಎಲ್ಲಾ ದೋಷಗಳನ್ನು ಪತ್ತೆ ಹಚ್ಚಲು ಮುಂದಾಗಬೇಕು. ಪ್ರಾಥಮಿಕ ಹಂತದಲ್ಲೇ ಪರೀಕ್ಷೆ ಮಾಡದೇ ನಿರ್ಲಕ್ಷಿಸಿದರೆ 2 ವರ್ಷದ ನಂತರ ಮಗುವಿನ ಶ್ರವಣ ದೋಷಕ್ಕೆ ನಾವೇ ಕಾರಣೀಭೂತರಾಗುವುದಲ್ಲದೇ, ಆರೋಗ್ಯ ಇಲಾಖೆ ಇದ್ದೂ ಇಲ್ಲದಂತೆ ಆಗುತ್ತದೆ ಎಂದರು.
ಡಿಎಲ್ಓ ಡಾ.ಮುರುಳಿಧರ ಮಾತನಾಡಿ, ಸಾಮಾನ್ಯ ಜ್ವರ, ಕೆಮ್ಮು, ಶೀತ ಬಂದರೆ ಹೇಗೆ ನಮ್ಮ ಬಗ್ಗೆ ನಾವು ಕಾಳಜಿ ವಹಿಸುತ್ತೇವೆಯೋ ಹಾಗೆಯೇ ಕಿವಿಗಳ ಬಗೆಗೆ ಜಾಗೃತರಾಗಬೇಕು. ಕಿವಿ ಸೋಂಕಿಗೆ ಆರಂಭದಲ್ಲಿಯೇ ಚಿಕಿತ್ಸೆ ಪಡೆಯಬೇಕು. ನಮಗೆ ಅರಿವಿಲ್ಲದೇ ಇಯರ್ಫೋನ್ಗಳ ಸಹಾಯದಿಂದ ಜೋರಾದ ಧ್ವನಿಯನ್ನು ಕೇಳುವುದರಿಂದ ಕಿವಿಗೆ ಹಾನಿಯಾಗುವ ಸಾಧ್ಯತೆಯಿರುವುದರಿಂದ ಅದನ್ನು ತಡೆಗಟ್ಟಬೇಕು ಎಂದರು.
ಚಿಗಟೇರಿ ಆಸ್ಪತ್ರೆಯ ಅಧೀಕ್ಷಕರಾದ ಡಾ.ಜಯಪ್ರಕಾಶ್ ಮಾತನಾಡಿ, ಪ್ರತಿ ಅಂಗಾಗಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಕಿವಿಗಳಲ್ಲಿ ಕೊಳಕು ನೀರು ಪ್ರವೇಶಿಸುವುದನ್ನು ತಡೆಗಟ್ಟಲು ಎಣ್ಣೆ ಅಥವಾ ಯಾವುದೇ ತೀಕ್ಷ್ಣವಾದ ವಸ್ತುಗಳು, ಬೆಂಕಿಕಡ್ಡಿಗಳು, ಕಿವಿ-ಮೊಗ್ಗುಗಳನ್ನು ಬಳಸಬಾರದು. ಆದಷ್ಟು ಪ್ರಾಥಮಿಕ ಹಂತದಲ್ಲೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಡಿಹೆಚ್ಓ ಡಾ.ನಾಗರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರವಣದೋಷದಿಂದ ಬಳಲುತ್ತಿದ್ದ ಭೂಮಿಕ ಅವರಿಗೆ ಸರ್ಕಾರದ ವತಿಯಿಂದ ಎನ್.ಪಿ.ಪಿ.ಸಿ.ಡಿ (ನ್ಯಾಷನಲ್ ಪ್ರೋಗ್ರಾಂ ಫಾರ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ ಆಫ್ ಡೆಫ್ನೆಸ್) ಯೋಜನೆಯಡಿ ಉಚಿತವಾಗಿ ಅಡಿಯೋಲಾಜಿಸ್ಟ್ ಹಾಗೂ ಸ್ಪೀಚ್ ಥೆರಪಿ ಮಾಡಿಸಲಾಗುತ್ತಿದೆ. ಈ ಚಿಕಿತ್ಸೆಗೆ ಖಾಸಗಿ ಅಸ್ಪತ್ರೆಗಳಲ್ಲಿ ಸುಮಾರು 7 ರಿಂದ10 ಲಕ್ಷ ವ್ಯಯವಾಗುತ್ತಿದ್ದು, ಇದೀಗ ಯೋಜನೆಯಡಿ ಚಿಕಿತ್ಸೆ ಫಲಕಾರಿಯಾಗಿದೆ ಎಂದರು.
ಮನುಷ್ಯನ ಪಂಚೇಂದ್ರಯಗಳಲ್ಲಿ ಮುಖ್ಯವದದ್ದು ಶ್ರವಣೇದ್ರಿಯ. ಮಕ್ಕಳಲ್ಲಿ ಮಾತಿನ ಬೆಳವಣಿಗೆ ಆಗಬೇಕೆಂದರೆ ಶ್ರವಣ ಶಕ್ತಿ ಅವಶ್ಯಕವಾಗಿದೆ. ಶ್ರವಣ ಶಕ್ತಿ ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಹೊಣೆ. ಈ ನಿಟ್ಟಿನಲ್ಲಿ ವಿಶ್ವ ಅರೋಗ್ಯ ಸಂಸ್ಥೆ 2007 ರ ಮಾರ್ಚ್ 3 ರಂದು ವಿಶ್ವ ಶ್ರವಣ ಎಂದು ಘೋಷಿಸಿತು. ಕಳೆದ 4-5 ವರ್ಷಗಳಿಂದ ಪ್ರತಿ ವರ್ಷ ಒಂದೊಂದು ಘೋಷಣೆಯಡಿ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದು, ಈ ಬಾರಿ ‘ಇರಲಿ ಎಲ್ಲರಿಗೂ ಶ್ರವಣ ಆರೈಕೆ’ ತಪಾಸಣೆ, ಪುನರ್ವಸತಿ, ಸಂವಹನ ಎಂಬ ಘೋಷಣೆಯಡಿ ವಿಶ್ವದಾದ್ಯಂತ ಶ್ರವಣದೋಷದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಆರ್.ಎನ್.ಟಿ.ಸಿ.ಪಿ ಡಾ.ಗಂಗಾಧರ್, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ.ನಳೀನಾಕ್ಷಿ. ಎಸ್, ಟಿಹೆಚ್ಒ ಡಾ.ವೆಂಕಟೇಶ್ ನಾಯ್ಕ್, ಡಿಹೆಚ್ಇಒ ಡಾ.ಸುರೇಶ್.ಎನ್.ಬಾರ್ಕಿ, ಇಎನ್ಟಿ ತಜ್ಞೆ ಡಾ.ರೂಪ.ಸಿ.ವೈ, ಆಡಿಯೋಲಾಜಿಸ್ಟ್ ಕಾವ್ಯ, ಸ್ಪೀಚ್ ಥೆರಪಿಸ್ಟ್ ಡಾ.ಮಮತ, ಡಿವಿಬಿಡಿಸಿ ಡಾ.ನಟರಾಜ್, ಟಿಹೆಚ್ಇಒ ಉಮಾಪತಿ.ಹೆಚ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ..

