
ದೊಡ್ಡಬಳ್ಳಾಪುರ: ಕ್ಷಯರೋಗದ ಬಗ್ಗೆ ಭಯದ ಅಗತ್ಯವಿಲ್ಲ, ಸರಿಯಾದ ಚಿಕಿತ್ಸೆ ಮೂಲಕ ಕ್ಷಯರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ತಿಳಿಸಿದರು.

ನಗರದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕ್ಷಯರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಲಾದ ಸೈಕಲ್ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
2025 ರವೇಳೆಗೆ ಕ್ಷಯ ಮುಕ್ತ ಕರ್ನಾಟಕ ಗುರಿಯನ್ನು ಸರಕಾರ ಹೊಂದಿದ್ದು, ಇದಕ್ಕಾಗಿ ಪೂರಕವಾಗಿ ಆರೋಗ್ಯ ಇಲಾಖೆ ಕೆಲಸ ಮಾಡಲಾಗುತ್ತಿದೆ. ಕ್ಷಯ,ಕರೊನಾ ರೋಗದ ಲಕ್ಷಣವು ಒಂದೇ ರೀತಿಯಿದ್ದು ಜನರು ಇದನ್ನು ನಿರ್ಲಕ್ಷ್ಯ ಮಾಡದೆ ರೋಗದ ಲಕ್ಷಣಗಳು ಕಂಡುಬಂದರೆ ತಡಮಾಡದೆ ಚಿಕಿತ್ಸೆ ಪಡೆಯಬೇಕು. ಕ್ಷಯ ರೋಗವನ್ನು ನಿರ್ಮೂಲನೆ ಮಾಡಲು ಕೇವಲ ಸರಕಾರದಿಂದ ಸಾಧ್ಯವಿಲ್ಲ, ಸ್ಥಳೀಯವಾಗಿ ಸಂಘ ಸಂಸ್ಥೆಗಳೂ ಜನರಲ್ಲಿ ಕ್ಷಯರೋಗದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದರೆ 2025ಕ್ಕೆ ಕ್ಷಯ ರೋಗದಿಂದ ಮುಕ್ತವಾಗಬಹುದು ಎಂದರು.
ಬೆಂ.ಗ್ರಾ.ಜಿಲ್ಲಾ ಕ್ಷಯ ನಿರ್ಮೂಲನೆ ಜಾಗೃತಿ ರಾಯಭಾರಿ ಹುಲಿಕಲ್ ನಟರಾಜ್ ಮಾತನಾಡಿ, ಕ್ಷಯ ಮುಕ್ತವಾಗಬೇಕೆಂದರೆ ಸಮಾಜದ ತಳ ಹಂತದಿಂದ ಜಾಗೃತಿ ಮೂಡಿಸಬೇಕು.ಕೇಂದ್ರ ಹಾಗೂ ರಾಜ್ಯ ಸರಕಾರ ನಾನಾ ಯೋಜನೆಗಳ ಮೂಲಕ ಕ್ಷಯ ನಿರ್ಮೂಲನೆಗೆ ಪ್ರಯತ್ನಿಸುತ್ತಿದೆ.ಮಾ.24ರಂದು ವಿಶ್ವ ಕ್ಷಯ ರೋಗ ನಿರ್ಮೂಲನಾ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಕ್ಷಯರೋಗದ ಲಕ್ಷಣಗಳು ಕಂಡು ಬಂದಲ್ಲಿ ಸರಕಾರಿ ಆಸ್ಪತ್ರೆಯನ್ನು ಭೇಟಿ ಮಾಡಿದರೆ ಉತ್ತಮ ಚಿಕಿತ್ಸಯೊಂದಿಗೆ ಕ್ಷಯದಿಂದ ಸಂಪೂರ್ಣ ಗುಣಮುಖರಾಗಬಹುದು.ಕ್ಷಯ ಒಂದು ದೊಡ್ಡ ಪಿಡುಗಲ್ಲ ನಾವು ಸ್ವಚ್ಚತೆಗೆ ಒತ್ತು ಕೊಟ್ಟು ಕ್ಷಯದಿಂದ ಆದಷ್ಟು ದೂರವಿರಬೇಕು.ಸಮುದಾಯವೆಲ್ಲ ಸರಕಾರದೊಂದಿಗೆ ಕೈಜೋಡಿಸಿ ಕ್ಷಯವನ್ನು ಹೋಗಲಾಡಿಸಲು ಪ್ರಯತ್ನಿಸಬೇಕು ಎಂದರು.
ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಶಕೀಲಾ, ತಾಲೂಕು ಕ್ಷಯ ರೋಗ ನಿರ್ಮೂಲನ ಸಿಬ್ಬಂದಿಗಳಾದ ಯುವರಾಜ್, ಆನಂದ್, ಸಿದ್ದರಾಜು, ಮಂಜುನಾಥ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

