
ದೊಡ್ಡಬಳ್ಳಾಪುರ: ಮಹಿಳೆಯರು ಸಂಘಟಿತರಾಗಿ ಕೆಲಸ ಮಾಡುವ ಗುಣ ಬೆಳೆಸಿಕೊಂಡಾಗ ಮಾತ್ರ ನಮ್ಮ ಪ್ರಗತಿ ಸಾಧ್ಯವಾಗಲಿದೆ ಎಂದು ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ ಹೇಳಿದರು.

ಅವರು ನಗರದ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಭೀಮಕ್ಕ ಅವರ ಹೆಸರಿನಲ್ಲಿ ನೀಡಲಾದ ರಾಜ್ಯ ಮಟ್ಟದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಮಹಿಳೆಯರ ಸತತ ಹೋರಾಟದ ಫಲವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ 50 ರಷ್ಟು ಮೀಸಲಾತಿ ದೊರೆತಿದೆ. ಈ ಮೀಸಲಾತಿ ರಾಜಕೀಯದ ಎಲ್ಲಾ ಹಂತದಲ್ಲೂ ದೊರೆಯುವಂತಾಗಲು ನಿರಂತರ ಹೋರಾಟದ ಅಗತ್ಯವಿದೆ. ಮೀಸಲಾತಿಯ ಬೆಂಬಲದಿಂದ ಆಯ್ಕೆಯಾಗಿ ಬಂದಿರುವ ಖುರ್ಚಿಯ ಮೇಲೆ ಪುರುಷರು ಕುಳಿತು ಅಧಿಕಾರ ನಡೆಸಲು ಅವಕಾಶ ನೀಡದೆ ತಮ್ಮ ಹಕ್ಕನ್ನು ಅರಿತುಕೊಂಡು ಕೆಲಸ ಮಾಡಿದಾಗ ಮಾತ್ರ ರಾಜಕೀಯ ಮೀಸಲಾತಿಗಾಗಿ ನಡೆಸಿದ ಹೋರಾಟಕ್ಕೆ ಅರ್ಥ ಬರಲಿದೆ. ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಮಹಿಳಾ ಸದಸ್ಯರಿಗೆ ತಮ್ಮ ಅಧಿಕಾರ ವ್ಯಾಪ್ತಿಯ ಕುರಿತಂತೆ ತರಬೇತಿಗಳನ್ನು ನೀಡುವ ಕಡೆಗು ಮಹಿಳಾ ಸಂಘ ಸಂಸ್ಥೆಗಳು ಕಾರ್ಯೋನ್ಮುಖವಾಗಬೇಕು ಎಂದರು.
ಸ್ವಾತಂತ್ರ್ಯ ಪೂರ್ವದಲ್ಲೇ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಅಗತ್ಯ ಇರುವ ವೇದಿಕೆ, ತರಬೇತಿಗಳನ್ನು ನೀಡುವ ಸಲುವಾಗಿ ಮಹಿಳಾ ಸಮಾಜವನ್ನು ಸ್ಥಾಪನೆ ಮಾಡಿದ ಮಹಾನ್ ಚೇತನ ಭೀಮಕ್ಕ ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆ ಇದೆ. ಇಂತಹ ಮಹಾನ್ ವ್ಯಕ್ತಿಗಳು ಮಹಿಳೆಯ ಏಳಿಗೆಗಾಗಿ ಕಂಡಿದ್ದ ಕನಸುಗಳನ್ನು ಸಾಕಾರಮಾಡುವತ್ತ ಮಹಿಳಾ ಸಮಾಜದ ಪದಾಧಿಕಾರಿಗಳು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಲೇಖಕಿ ಡಾ.ಎನ್.ಗಾಯಿತ್ರಿ ಮಾತನಾಡಿ,ವಿಶ್ವ ಮಹಿಳಾ ದಿನಾಚರಣೆಯ ಈ ವರ್ಷದ ಘೋಷ ವಾಕ್ಯ ‘ಕಾಯಕ ವರ್ಷ’ವನ್ನಾಗಿ ಘೋಷಣೆ ಮಾಡಲಾಗಿದೆ. ಮಹಿಳೆಯರನ್ನು ಅವರ ಕೆಲಸದ ಮೂಲಕ ಗುರುತಿಸಬೇಕಿದೆ. ಸಮಾಜ ಸುಧಾರಣೆಯ ಕೆಲಸ ಮಾಡುವಾಗ ಹಲವಾರು ಟೀಕೆಗಳು ಬರುವುದು ಸಹಜವೆ. ಆದರೆ ನಮ್ಮ ಕಣ್ಣಮುಂದೆಯೇ ಹಲವಾರು ಜನ ಮಹಿಳೆಯರು ಮಾಡಿರುವ ಸಾಧನೆಯ ಮಾದರಿಗಳು ಇವೆ. ಇವತ್ತಿನ ಸಮಾಜಕ್ಕೆ ಹೊಂದಿಕೊಂಡಂತೆ ಕೆಲಸ ಮಾಡುತ್ತಿರುವ ಸುಮಂಗಲಿ ಸೇವಾಶ್ರಮದ ಕೆಲಸಗಳು ಮಹಿಳೆಯರಿಗೆ ಉತ್ತಮ ಮಾದರಿಯಾಗಿ ಕಾಣುತ್ತಿದೆ. ಉತ್ತಮ ಸಾಮಾಜಿಕ ಸಂಘಟಕರಾಗಿರುವ ಸುಶೀಲಮ್ಮ ಅವರು ಅರಿವು ಮೂಡಿಸುವ ಕೆಲಸವಷ್ಟೇ ಮಾಡದೆ ಅಗತ್ಯ ಇರುವ ಮಹಿಳೆಯರಿಗೆ ನೆರವಾಗುವ ಮೂಲಕ ಅದರ ಅನುಷ್ಟಾನಕ್ಕೆ ಅಗತ್ಯ ಇರುವ ಬಲವನ್ನು ನೀಡುತ್ತಿದ್ದಾರೆ. ತಮ್ಮ ಕೆಲಸಗಳ ಬಗ್ಗೆ ಹೊಗಳಿಕೆ, ತೆಗಳಿಕೆ ಯಾವುದಕ್ಕೂ ಕಿವಿಗೊಡದೆ ಕೆಲಸ ಮಾಡುವ ಮನೋಭಾವದ ವ್ಯಕ್ತಿತ್ವ ಶುಶೀಲಮ್ಮ ಅವರದ್ದಾಗಿದೆ. ತಾವು ನೆಟ್ಟ ಸಸಿ ನಮ್ಮ ಕಣ್ಣ ಮುಂದೆಯೇ ಬೆಳೆದು ಹತ್ತಾರು ಜನರಿಗೆ ನೆರಳು, ಪಕ್ಷಿಗಳಿಗೆ ಆಶ್ರಯ ನೀಡುವುದನ್ನು ಕಂಡು ಸಂತಸ ಪಡುವ ಗುಣವುಳ್ಳ ವ್ಯಕ್ತಿಯನ್ನು ಗುರುತಿಸಿ ಭೀಮಕ್ಕ ಪ್ರಶಸ್ತಿ ನೀಡಿ ಗೌರವಿಸುಸಿರುವುದು ಅಭಿನಂದನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್.ಪ್ರಭಾ ಮಾತನಾಡಿ, ಭೀಮಕ್ಕ ಅವರ ಮಹಿಳಾಪರವಾದ ಕೆಲಸ ರಾಜ್ಯಮಟ್ಟದಲ್ಲಿ ಪ್ರಚಾರವಾಗುವ ಮೂಲಕ ಮತ್ತಷ್ಟು ಮಹಿಳೆಯರಿಗೆ ಭೀಮಕ್ಕ ಅವರು ಸ್ಫೂರ್ತಿಯಾಗಬೇಕು ಎನ್ನುವ ಆಶಯದೊಂದಿಗೆ ಪ್ರಶಸ್ತಿಯನ್ನು ಸ್ಥಾಪನೆ ಮಾಡಲಾಗಿದೆ. ಗಾಂಧೀಜಿ ಅವರ ಆಧ್ಯಾತ್ಮೀಕ ಮಾರ್ಗದಲ್ಲಿ ನಡೆಯುತ್ತಿರುವ ಸುಶೀಲಮ್ಮ ಅವರಂತಹ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಮಹಿಳಾ ಸಮಾಜಕ್ಕೆ ಹೆಮ್ಮೆಯ ಸಂಗತಿ ಎಂದರು.
ಸಮಾರಂಭದಲ್ಲಿ ಮಹಿಳಾ ಸಮಾಜದ ಉಪಾಧ್ಯಕ್ಷೆ ಕವಿತಾ, ಕಾರ್ಯದರ್ಶಿ ದೇವಕಿ, ಸಹ ಕಾರ್ಯದರ್ಶಿ ವರಲಕ್ಷ್ಮೀ, ಖಾಜಾಂಚಿ ಯಶೋಧ, ನಿರ್ದೇಶಕರಾದ ವತ್ಸಲಾ, ಗೌರಮ್ಮ ಇದ್ದರು. ಇದೇ ಸಂದರ್ಭದಲ್ಲಿ ಮಹಿಳೆಯರೇ ಬಿಡಿಸಿರುವ ಚಿತ್ರಗಳ ಪ್ರದರ್ಶನ ನಡೆಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟಮಾತನಾಡಿ, ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

