ದೊಡ್ಡಬಳ್ಳಾಪುರ: ತಾಲ್ಲೂಕಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥ (kannada jyothi ratha) ಆಗಮಿಸಿತು.
ದೇವನಹಳ್ಳಿ ತಾಲ್ಲೂಕಿನಿಂದ ಆಗಮಿಸುವ ಕನ್ನಡ ಜ್ಯೋತಿ ರಥವನ್ನು ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ದೇವನಹಳ್ಳಿ ತಾಲ್ಲೂಕಿನ ಗಡಿಭಾಗದಲ್ಲಿ ಸ್ವಾಗತಿಸಲಾಯಿತು.
ಆದ್ದೂರಿ ಮೆರವಣಿಗೆ: ದೊಡ್ಡಬಳ್ಳಾಪುರ ತಾಲ್ಲೂಕಿಗೆ ಆಗಮಿಸಿ ಕನ್ನಡ ಜ್ಯೋತಿ ರಥಕ್ಕೆ ದೊಡ್ಡಬಳ್ಳಾಪುರ ಜವಾಹರ ನವೋವಿದ್ಯಾಲಯದ ವಿದ್ಯಾರ್ಥಿಗಳು ಪುಪ್ಪಾರ್ಚನೆ ಮಾಡಿದರು.
ಕನ್ನಡದ 50 ಮಂದಿ ಸಾಧಕರ ಭಾವಚಿತ್ರಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ ದೃಶ್ಯ ಗಮನಸೆಳೆಯಿತು.
ಪೂರ್ಣಕುಂಭ ಸ್ವಾಗತ: ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿಗೆ ಆಗಮಿಸಿದ ಕನ್ನಡ ರಥವನ್ನು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಅದ್ಧೂರಿ ಯಾಗಿ ಪೂರ್ಣ ಕುಂಭ ಸ್ವಾಗತಿಸಿದರು.
ಕಲಾ ತಂಡಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿಕುಮಾರ್, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನರಸಿಂಹಮೂರ್ತಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಆರ್.ನಾರಾಯಣಸ್ವಾಮಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಾಳಯ್ಯ, ಗ್ರಾಮದ ಮುಖಂಡರುಗಳಾದ ಮುನಿರಾಜು, ವಿಶ್ವನಾಥ್, ಕೃಷ್ಣಮೂರ್ತಿ, ಬೈಲಪ್ಪ, ಕನ್ನಡಪರ ಹೋರಾಟಗಾರ ರಾಜಘಟ್ಟರವಿ, ಟಿಜಿ ಮಂಜುನಾಥ್, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ, ಪ್ರತಿನಿಧಿಗಳಾದ ಸಫೀರ್, ಚಂದ್ರಶೇಖರ್, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಕಾರ್ಮಿಕರು ಮತ್ತು ಶಾಲಾ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಮ್ಮೇಳನದ ಜಾಗೃತಿಗೆ ಕನ್ನಡ ಜ್ಯೋತಿ ರಥ

ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕನ್ನಡ ಜ್ಯೋತಿ ರಥವು ಸಂಚರಿಸುತ್ತಿದೆ.
ಸಮಸ್ತ ಕನ್ನಡಿಗರನ್ನು ಆಹ್ವಾನಿಸುವ ಉದ್ದೇಶದಿಂದ ಈ ರಥ ಸಂಚಾರ ಮಾಡುತ್ತಿದೆ.
ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಜಾಗೃತಿ ಮತ್ತು ಅಭಿಮಾನ ಮೂಡಿಸುತ್ತಾ ಕನ್ನಡಿಗರು ಸಮ್ಮೇಳನಕ್ಕೆ ಬರಲು ಈ ರಥ ಯಾತ್ರೆಯು ಪ್ರೇರಣೆಯಾಗಲಿದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ತಿಳಿಸಿದರು.
ಕನ್ನಡ ಜ್ಯೋತಿ ರಥದ ಆಕರ್ಷಣೆ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆಯುತ್ತಿರುವ ಕನ್ನಡ ರಥದ ಮುಂಭಾಗದಲಿ ಭುವನೇಶ್ವರಿ ದೇವಿ ಪ್ರತಿಮೆ ಇದೆ. ಹಿಂಭಾಗದಲ್ಲಿ ಕೃಷಿಯ ಸಂಕೇತವಾದ ಎತ್ತುಗಳೊಂದಿಗೆ ಇರುವ ರೈತನನ್ನು ಕಾಣಬಹುದಾಗಿದೆ.
ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕೆ.ಶಿವರಾಮಕಾರಂತ, ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಅವರುಗಳ ಭಾವಚಿತ್ರಗಳಿವೆ.
ಸಾಹಿತ್ಯ ಸಮ್ಮೇಳನ ನಡೆಯುವ ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಚಿತ್ರಗಳು ಆಕರ್ಷಣೆಯ ಆಗಿವೆ.
ನ.26 ರಂದು ದೊಡ್ಡಬಳ್ಳಾಪುರ ನಗರದಲ್ಲಿ ಮೆರವಣಿಗೆ
ದೊಡ್ಡಬಳ್ಳಾಪುರ ನಗರದಲ್ಲಿ ಮಂಗಳವಾರ ಮುಂಜಾನೆ 9.30 ಗಂಟೆಯಿಂದ ಕನ್ನಡ ಜ್ಯೋತಿ ರಥದ (kannada jyothi ratha) ಮೆರವಣಿಗೆ ನಡೆಯಲಿದೆ.
ಬಸವಭವನ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಕನ್ನಡ ಜಾಗೃತ ಭವನ, ತಾಲ್ಲೂಕು ಕಛೇರಿ ವೃತ್ತ, ಮಗುವಾಳಪ್ಪ ವೃತ್ತ, ಇಸ್ಲಾಂಪುರ ರಸ್ತೆ, ಕೊಂಗಾಡಿಯಪ್ಪ ಕಾಲೇಜು ರಸ್ತೆ, ಬಯಲುಬಸವಣ್ಣ ದೇವಸ್ಥಾನ, ಕನಕದಾಸ ವೃತ್ತದ ಮೂಲಕ ಅರಳುಮಲ್ಲಿಗೆ, ಕಾಡನೂರು ಕೈಮರ, ಚೆನ್ನಾದೇವಿ ಅಗ್ರಹಾರ, ಕನಸವಾಡಿ ಗ್ರಾಮಗಳಲ್ಲಿ ಸಂಚರಿಸಿದ ನಂತರ ನೆಲಮಂಗಲ ತಾಲ್ಲೂಕಿಗೆ ಕನ್ನಡ ರಥವನ್ನು ಬೀಳ್ಕೊಡಲಾಗುತ್ತದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎ.ಜಯರಾಮ ತಿಳಿಸಿದರು.