ಚಿಕ್ಕಬಳ್ಳಾಪುರ (Murder News): ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಈ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಜಮೀನಿನ ಬೆಲೆ ಗಗನಕ್ಕೇರುತ್ತಿರೋ ಕಾರಣಕ್ಕೆ ತಂಟೆ ತಕರಾರುಗಳು ಜಾಸ್ತಿ ಆಗ್ತಿದೆ.
ಭೂಮಿಯ ವ್ಯಾಮೋಹಕ್ಕೆ ಬಿದ್ದ ಜನ ಸಂಬಂಧಗಳನ್ನೇ ಲೆಕ್ಕಿಸದೇ ರಕ್ತಪಾತಕ್ಕೆ ಮುಂದಾಗ್ತಿದ್ದಾರೆ. ಅದರಲ್ಲೂ ರಾಜಧಾನಿಗೆ ಸನಿಹದಲ್ಲಿರೋ ಈ ಜಿಲ್ಲೆಯಲ್ಲಿ ಕೊಂಚ ಜಾಸ್ತಿನೇ ಆಗಿ, ತಂದೆ ಸಮಾನರನ್ನೇ ಮುಗಿಸಿ ಜೈಲು ಪಾಲಾಗಿದ್ದಾನೆ… ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ಸ್ಟೋರಿ ನೋಡಿ
ರಾಜಧಾನಿ ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಮೀನಿನ ಬೆಲೆ ಕೋಟಿಯ ಕೋಟೆ ದಾಟಿದೆ. ಲಕ್ಷದಲ್ಲಿದ್ಧ ಬೆಲೆ ಕೋಟಿ ದಾಟಿದ್ದೇ ತಡ ಇಲ್ಲ ಸಲ್ಲದ ತಂಟೆ ತಕರಾರುಗಳು ಮೈಮೇಲೆ ಎಳೆದುಕೊಳ್ಳುವಂತಾಗಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಬಳ್ಳಾಪುರ ತಾಲ್ಲೂಕು ಪೋಶೆಟ್ಟಿಹಳ್ಳಿ ಗ್ರಾಮದಲ್ಲಿ ದಾಯಾದಿಯಿಂದಲೇ ವ್ಯಕ್ತಿಯ ಬರ್ಬರವಾಗಿ ಕೊಲೆಯಾಗಿದೆ.
ಕೊಲೆಯಾದ ದುರ್ದೈವಿಯನ್ನು ಲಕ್ಷ್ಮೀನರಸಪ್ಪ (60 ವರ್ಷ) ಎಂದು ಗುರುತಿಸಲಾಗಿದೆ. ಆರೋಪಿಯನ್ನು ನಂದೀಶ್ (29 ವರ್ಷ) ಎಂದು ಗುರ್ತಿಸಲಾಗಿದೆ.
ತಾಲೂಕಿನ ಬಾಲಕುಂಟ ಹಳ್ಳಿ ಮೂಲದ ಮೃತ ಲಕ್ಷ್ಮೀನರಸಪ್ಪ ಕೆಇಬಿ ಗುತ್ತಿಗೆದಾ ರರಾಗಿ ಕೆಲಸ ಮಾಡಿಕೊಂಡಿದ್ದರು. ಭಾನುವಾರ ಬೆಳಗ್ಗೆ ಸುಮಾರು 11-40 ರ ಸುಮಾರಿನಲ್ಲಿ ಗಂಗಾಧರಯ್ಯನ ಪುತ್ರ ನಂದೀಶ್ ಬಂದು ಮನೆಯಲ್ಲಿದ್ದ ಲಕ್ಷ್ಮೀನರಸಪ್ಪ ನನ್ನು ಅಲ್ಲಿಯೇ ಇದ್ದ ಕುಡುಗೋಲಿನಿಂದ ಕುತ್ತಿಗೆ ಮತ್ತು ದೇಹದ ಬಾಗಗಳಿಗೆ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ.
ಇನ್ನು ಹೀಗೆ ಕೊಲೆ ಮಾಡಿದ ನಂದೀಶ ಎಲ್ಲಿಯೂ ಪರಾರಿಯಾಗಿಲ್ಲ. ಬದಲಿಗೆ ಪೋಶೆಟ್ಟಿಹಳ್ಳಿ ಗ್ರಾಮದ ಪಕ್ಕದ ಲ್ಲಿಯೇ ಇದ್ದ ಮರವೊಂದರ ನೆರಳಿನಲ್ಲಿ ಕುಳಿತು ಪೊಲೀಸರಿಗಾಗಿ ಕಾಯುತ್ತಿದ್ದನಂತೆ.
ವಿಷಯ ತಿಳಿದ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.