ದೊಡ್ಡಬಳ್ಳಾಪುರ: ಮೇ 02 ರಂದು 2024-25ನೇ ಸಾಲಿನ ಎಸ್.ಎಸ್.ಎಲ್.ಸಿ (SSLC) ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಆದರೆ ದೊಡ್ಡಬಳ್ಳಾಪುರ ತಾಲೂಕು ಶೇ.70.08 ಫಲಿತಾಂಶ ಪಡೆಯುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಿಗೆ ಹೋಲಿಸಿದರೆ ಕೊನೆ ಸ್ಥಾನಕ್ಕೆ ತಲುಪುವ ಮೂಲಕ ಕಳಪೆ ಸಾಧನೆ ಮಾಡಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 3654 ವಿದ್ಯಾರ್ಥಿಗಳು 2024-25 ನೇ ಸಾಲಿನ ಪರೀಕ್ಷೆಗೆ ಹಾಜರಾಗಿದ್ದು 2561 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 70.08 ರಷ್ಟು ಫಲಿತಾಂಶ ಪಡೆದಿದ್ದಾರೆ.
ಉಳಿದಂತೆ ಮೊದಲ ಸ್ಥಾನವನ್ನು ದೇವನಹಳ್ಳಿ ತಾಲ್ಲೂಕು ಪಡೆದಿದ್ದು, ಇಲ್ಲಿ 3255 ವಿದ್ಯಾರ್ಥಿಗಳು ಹಾಜರಾಗಿದ್ದು 2550 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 78.34 ರಷ್ಟು ಫಲಿತಾಂಶ ಪಡೆದಿದ್ದಾರೆ.
ಎರಡನೇ ಸ್ಥಾನವನ್ನು ನೆಲಮಂಗಲ ತಾಲ್ಲೂಕು ಪಡೆದಿದ್ದು , ಇಲ್ಲಿ 3109 ವಿದ್ಯಾರ್ಥಿಗಳು ಹಾಜರಾಗಿದ್ದು 2300 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 73.97 ರಷ್ಟು ಫಲಿತಾಂಶ ಪಡೆದಿದ್ದಾರೆ.
ಮೂರನೇ ಸ್ಥಾನವನ್ನು ಹೊಸಕೋಟೆ ತಾಲ್ಲೂಕು ಪಡೆದಿದ್ದು, ಇಲ್ಲಿ 3625 ವಿದ್ಯಾರ್ಥಿಗಳು ಹಾಜರಾಗಿದ್ದು 2646 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 72.99 ರಷ್ಟು ಫಲಿತಾಂಶ ಪಡೆದಿದ್ದಾರೆ.
ದೊಡ್ಡಬಳ್ಳಾಪುರಕ್ಕೆ ಕೊನೆ ಸ್ಥಾನ.. ಸರ್ಕಾರಿ ಶಾಲೆಯ ಫಲಿತಾಂಶ ತೀವ್ರ ಕುಸಿತ
ಕಳೆದ ವರ್ಷ 2023-24 ನೇ ಸಾಲಿನಲ್ಲಿ ಎರಡನೇ ಸ್ಥಾನ ಪಡೆದಿದ್ದ ದೊಡ್ಡಬಳ್ಳಾಪುರ ತಾಲೂಕು ಈ ವರ್ಷ ಕಳೆಪೆ ಸಾಧನೆ ಮಾಡಿದೆ.. ಅದರಲ್ಲಿಯೂ ಸರ್ಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳು ಅತಿ ಹೆಚ್ಚು ಅನುತೀರ್ಣರಾಗಿದ್ದಾರೆ.
ಶಿಕ್ಷಣ ಇಲಾಖೆ ಮಾಹಿತಿ ಅನ್ವಯ ದೊಡ್ಡಬಳ್ಳಾಪುರ ತಾಲೂಕಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಪರೀಕ್ಷೆ ಬರೆದ 2171 ಮಕ್ಕಳ ಪೈಕಿ ಬರೋಬ್ಬರಿ 886 ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೆ.
ಇವರಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ 1463 ಮಕ್ಕಳ ಪೈಕಿ 509 ವಿದ್ಯಾರ್ಥಿಗಳು ಅನುತೀರ್ಣರಾಗುವ ಮೂಲಕ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗಕ್ಕೆ ಮಕ್ಕಳನ್ನು ಕಳಿಸುತ್ತಿರುವ ಪೋಷಕರಲ್ಲಿ ಆತಂಕವನ್ನು ಹೆಚ್ಚಿಸಿದೆ.
ಹೊಣೆ ಯಾರು..?
SSLC ಫಲಿತಾಂಶದಲ್ಲಿ ಎರಡನೇ ಸ್ಥಾನದಿಂದ ಕೊನೆಯ ಸ್ಥಾನಕ್ಕೆ ದೊಡ್ಡಬಳ್ಳಾಪುರ ತಾಲೂಕು ಕುಸಿಯಲು ಕಾರಣ ಏನು..? ಇದರ ಹೊಣೆ ಯಾರು ಹೊರಬೇಕಾದವರು ಯಾರು..? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ (ಕೆಲವೆಡೆ ಶಿಕ್ಷಕರು ಇದ್ದಾಗಿಯೂ ಫಲಿತಾಂಶ ಕುಸಿತ), ಕೆಲ ಶಾಲೆಗಳಲ್ಲಿ ಶಿಕ್ಷಕರ ಬೇಜವಬ್ದಾರಿ, ಗ್ರಾಮೀಣ ಪೋಷಕರು ಅಸಡ್ಡೆಯಿಂದಾಗಿ ಮಕ್ಕಳ ಮಿತಿ ಮೀರಿದ ಮೊಬೈಲ್ ಬಳಕೆ ಈ ರೀತಿಯ ಕಳಪೆ ಫಲಿತಾಂಶಕ್ಕೆ ಕಾರಣ ಎನ್ನಲಾಗುತ್ತಿದೆ.
ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಮಟ್ಟ ತೀವ್ರ ಕುಸಿತ ಈ ರೀತಿ ಫಲಿತಾಂಶಕ್ಕೂ ಕಾರಣ ಎನ್ನಬಹುದು, ಅಗತ್ಯ ಶಿಕ್ಷಕರನ್ನು ನೇಮಿಸದೆ, ಕಡಿಮೆ ಸಂಬಳಕ್ಕೆ ಅತಿಥಿ ಶಿಕ್ಷಕರನ್ನು ಅವಲಂಬಿಸಿದರೆ ಫಲಿತಾಂಶ ಉತ್ತಮವಾಗುವುದಾದರೂ ಹೇಗೆ..?
8ನೇ ತರಗತಿಗೆ ದಾಖಲಾಗುವ ಅನೇಕ ಮಕ್ಕಳಿಗೆ ಕನ್ನಡ, ಇಂಗ್ಲಿಷ್ ಅಕ್ಷರಗಳ ಬಗ್ಗೆ ಅರಿವೇ ಇರುವುದಿಲ್ಲ ಎಂಬುದು ಅನೇಕ ಪ್ರೌಢಶಾಲೆ ಶಿಕ್ಷಕರ ಆರೋಪ, ಹಾಗಾದರೆ ಪ್ರಾಥಮಿಕ ಶಾಲೆಗಳಲ್ಲಿ ದೊರಕುತ್ತಿರುವ ಶಿಕ್ಷಣದ ಗುಣಮಟ್ಟವನ್ನು ಪ್ರಶ್ನೆ ಮಾಡಬೇಕಾದವರು ಯಾರು..?
ಇನ್ನೂ ಶಿಕ್ಷಣ ಇಲಾಖೆ ಜವಬ್ದಾರಿ ಹೊರದೆ, ಸೂಕ್ತ ಸಮಯದಲ್ಲಿ ಅಗತ್ಯ ತರಬೇತಿ ಆಯೋಜನೆ ಮಾಡದೇ ಇರುವುದು, ಶಿಕ್ಷಕರ ನೇಮಕ ಮಾಡದೆ ಡೆಪ್ಟೇಷನ್ ಮಾಡಿ ಕೈತೊಳೆದುಕೊಂಡಿರುವುದು, ತಾಲೂಕಿನ ಮಕ್ಕಳಿಗ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಕಾಳಜಿ ತೋರದೆ, ಶಿಕ್ಷಕರ ಕಟ್ಟು ನಿಟ್ಟಿನ ಸೂಚನೆ ನೀಡದೇ ಇರುವುದು ಕೂಡ ಈ ರೀತಿಯ ಕಳಪೆ ಫಲಿತಾಂಶಕ್ಕೆ ಕಾರಣ ಎನ್ನಲಾಗಿದೆ.
ರಾಜ್ಯಕ್ಕೆ ಟಾಪರ್ಗಳಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಖಾಸಗಿ ಶಾಲೆಯ ವಿದ್ಯಾರ್ಥಿನಿ ಹೆಸರು ಬಂದಿರುವುದನ್ನೇ ಸಾಧನೆ ಎಂಬಂತೆ ಬಿಂಬಿಸುವ ವ್ಯವಸ್ಥೆ, ಉಳಿದ 886 ಮಕ್ಕಳು ಅನುತೀರ್ಣ ಆಗಿರುವುದಕ್ಕೆ ಕಾರಣ ಏನು..? ಎಂಬುದು ಚರ್ಚೆಯಾಗದೆ ಉಳಿದಿರುವುದು ವಿಪರ್ಯಾಸ.
ಕೆಲ ಶಾಲೆಗಳಲ್ಲಿ ಅನೇಕ ಮಕ್ಕಳು ಎಲ್ಲಾ ಸಬ್ಜೆಕ್ಟ್ ಗಳಲ್ಲಿಯೂ ಅನುತ್ತೀರ್ಣರಾಗಿದ್ದಾರೆ. ಇದಕ್ಕೆ ಹೊಣೆ ಹೊರಬೇಕಾದವರು ಯಾರು..? ಫಲಿತಾಂಶ ಬಂದು 6 ದಿನ ಕಳೆದರು ಮುಖ್ಯ ಶಿಕ್ಷಕರ ಸಭೆ ಕರೆದು, ಲೋಪ ಎಲ್ಲಾಗಿದೆ, ಮುಂದೆ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ಸಭೆಯೇ ನಡೆದಿಲ್ಲ ಎನ್ನಲಾಗುತ್ತಿದೆ. ಈ ರೀತಿ ಆದರ ಸರ್ಕಾರಿ ಶಾಲೆಗಳ ಬಗ್ಗೆ ಭರವಸೆ ಉಳಿಯುವುದಾದರೂ ಹೇಗೆ..? ಎಂಬ ಪ್ರಶ್ನೆ ದೊಡ್ಡಬಳ್ಳಾಪುರ ತಾಲೂಕಿನ ಜನರದ್ದಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)