ಧಾರವಾಡ: ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ (Santosh Lad) ಅವರು ಸೋಮವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಕಲಘಟಗಿ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಿಗೆ, ಬೆಳೆಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ, ಕಲಘಟಗಿ ಪಟ್ಟಣದಲ್ಲಿ ಜನಸ್ಪಂದನ ಸಭೆ ಜರುಗಿಸಿ, ಸಾರ್ವಜನಿಕರ ಸಮಸ್ಯೆ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದರು.

ಹುಲಕೊಪ್ಪ ಹಾಗೂ ಗಳಗಿ ಗ್ರಾಮದ ಗೋವಿನಜೋಳ ಮತ್ತು ಭತ್ತ ಬೆಳೆ ವೀಕ್ಷಣೆ: ಹುಲಕೊಪ್ಪ ಹಾಗೂ ಗಳಗಿ ಗ್ರಾಮಗಳ ಚನ್ನಬಸಪ್ಪ ಹಳ್ಯಾಳ ಅವರ ಜಮೀನಿಗೆ ಭೇಟಿ ನೀಡಿ, ಕಾಡುಹಂದಿ, ಕರಡಿ ಹಾಗೂ ಇತರ ಕಾಡು ಪ್ರಾಣಿಗಳಿಂದ ಗೋವಿನಜೋಳದ ಬೆಳೆ, ನಾಗರಾಜ ಹಳ್ಯಾಳ ಅವರ ತೋಟದ ಭತ್ತದ ಬೆಳೆ ಹಾಗೂ ಕಬ್ಬು ಬೆಳೆ ವೀಕ್ಷಣೆ ಮಾಡಿ, ಮಾಹಿತಿ ಪಡೆದುಕೊಂಡರು.

ಗಳಗಿ ಗ್ರಾಮದ ರೈತರಾದ ಅಶೋಕ ಈರಪ್ಪ ಹುಬ್ಬಳ್ಳಿ ಅವರ 1 ಎಕರೆ 38 ಗುಂಟೆ ಜಮೀನು, ರೇಖಾ ಗಂಗಪ್ಪ ಪೂಜಾರ ಅವರ 4 ಎಕರೆ 20 ಗುಂಟೆ ಜಮೀನು, ಧರ್ಮರಾಜ ಸುಭಾಷ ಚಂದ್ರಗೌಡ ಪಾಟೀಲ ಅವರ 5 ಎಕರೆ 20 ಗುಂಟೆ ಜಮೀನು ಮತ್ತು ಹುಲಕೊಪ್ಪ ಗ್ರಾಮದ ರೈತ ಈರಪ್ಪ ಚೆನ್ನಪ್ಪ ಬಡಿಗೇರ ಅವರ 9 ಎಕರೆ 38 ಗಂಟೆ ಜಮೀನೀನಲ್ಲಿ ಗೋವಿನಜೋಳ ಬೆಳೆಯು ಹಾನಿಯಾದ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.
ನಂತರ ಅವರು ಸ್ಥಳದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ಕಲಘಟಗಿ ಹಾಗೂ ಧಾರವಾಡ ತಾಲೂಕಿನ ಕೆಲವು ಪ್ರದೇಶಗಳು ಮಲೆನಾಡಿನ ಸೆರಗಿನಲ್ಲಿ ಇದ್ದು, ಗುಡ್ಡ, ಕಾಡು ಹೆಚ್ಚಾಗಿವೆ. ಮತ್ತು ಕಾಡುಪ್ರಾಣಿಗಳು ಸಾಕಷ್ಟು ಇವೆ. ರೈತರು ಪ್ರತಿವರ್ಷ ಬೆಳೆದ ಬೆಳೆಯನ್ನು ಸುಸೂತ್ರವಾಗಿ ರಾಶಿ ಮಾಡಿಕೊಂಡು ಬರಲು ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಲು ಕ್ರಮವಹಿಸಬೇಕಿದೆ ಎಂದರು.
ಮುಂದಿನ ಒಂದು ವಾರದಲ್ಲಿ ಪ್ರಾಣಿಗಳಿಂದ ಬೆಳೆ ಹಾನಿಯಾಗಿರುವ ಪ್ರದೇಶದಲ್ಲಿ ಕಲಘಟಗಿ ಹಾಗೂ ಧಾರವಾಡ ತಾಲೂಕಿನ ಕಂದಾಯ, ಕೃಷಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ಮಾಡಿ, ವರದಿ ಸಲ್ಲಿಸಬೇಕು. ಮತ್ತು ಸರ್ಕಾರದ ನಿಯಮಾನುಸಾರ ಪ್ರತಿ ಹೇಕ್ಟೆರಿಗೆ ಪರಿಹಾರವನ್ನು ಅರಣ್ಯ ಇಲಾಖೆ ತಕ್ಷಣ ಬಿಡುಗಡೆ ಮಾಡಬೇಕೆಂದು ಸೂಚಿಸಿದರು.
ರೈತರ ಬೇಡಿಕೆಗಳಾದ ಕಾಡುಪ್ರಾಣಿಗಳ ಹಾನಿಯಿಂದ ರಕ್ಷಣೆ, ಹೆಚ್ಚಿನ ಪರಿಹಾರ ಬಿಡುಗಡೆ, ಕಾಡುಪ್ರಾಣಿಗಳನ್ನು ಹೆದರಿಸಲು ಬಂದೂಕು ಬಳಕೆಗೆ ಅನುಮತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಸೂಕ್ತ ಪರಿಹಾರ ನೀಡಬೇಕು. ಕಾಡಿನ ಅಂಚಿನಲ್ಲಿರುವ ರೈತರ ಜಮೀನುಗಳ ಪಕ್ಕದ ರಸ್ತೆಗಳಲ್ಲಿ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ನಿರಂತರವಾಗಿ ಪೆಟ್ರೋಲಿಂಗ್ ಮಾಡಬೇಕು. ಹೆಚ್ಚಿನ ಸದ್ದು ಹಾಗೂ ಬೆಳಕು ನೋಡುವುದರಿಂದ ಪ್ರಾಣಿಗಳು ಹೆದರಿ ರೈತರ ತೋಟಗಳತ್ತ ಬರುವುದು ಕಡಿಮೆಯಾಗುತ್ತದೆ. ರೈತರೊಂದಿಗೆ ಚರ್ಚಿಸಿ, ಅವರೊಡನೆ ಇದ್ದು, ಅರಣ್ಯ ಇಲಾಖೆ ಉತ್ತಮವಾಗಿ ಕೆಲಸ ಮಾಡಬೇಕೆಂದು ಸಚಿವ ಸಂತೋಷ ಲಾಡ್ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ರೈತರು ಮಾತನಾಡಿ, ಗುಡ್ಡ ಹಾಗೂ ಕಾಡಿನ ಪಕ್ಕದಲ್ಲಿರುವ ರೈತರಿಗೆ ಕಾಡುಪ್ರಾಣಿಗಳಿಂದ ಜೀವ ಭಯವಿದೆ. ಮತ್ತು ಬಿತ್ತಿದ ಬೆಳೆಗಳು ಸರಿಯಾಗಿ ಬರುತ್ತಿಲ್ಲ. ಕೊಯ್ಲಿಗೆ ಬಂದಿರುವ ಬೆಳೆಗಳನ್ನು ಆನೆ, ಮಂಗಗಳು, ಕಾಡುಹಂದಿ, ಕರಡಿ, ಚಿಗರೆಯಂತಹ ಕಾಡು ಪ್ರಾಣಿಗಳು ಹಾಳು ಮಾಡುತ್ತಿವೆ. ಸರ್ಕಾರವು ಅರಣ್ಯ ಇಲಾಖೆಯ ಮೂಲಕ ನೀಡುವ ಬೆಳೆ ಪರಿಹಾರವು ಕಡಿಮೆಯಾಗಿದೆ. ಇದನ್ನು ಹೆಚ್ಚಳ ಮಾಡಬೇಕು. ಮತ್ತು ಕಾಡುಪ್ರಾಣಿಗಳು ರೈತರ ಜಮೀನುಗಳಿಗೆ ಬರದಂತೆ ತಡೆಯಲು ಕಾಡಿನ ಕೊನೆಯಲ್ಲಿ ದೊಡ್ಡದಾದ ಕಂದಕಗಳನ್ನು ತೊಡಬೇಕು. ಹಾಗೂ ತಂತಿ ಬೇಲಿ ಅಳವಡಿಸಬೇಕೆಂದು ಸಚಿವರಿಗೆ ಮನವಿ ಸಲ್ಲಿಸಿದರು.
ಹುಲ್ಲಂಬಿ ಗ್ರಾಮದ ಕಬ್ಬಿನ ಬೆಳೆ ವೀಕ್ಷಣೆ: ನಂತರ ಸಚಿವರು ಹುಲ್ಲಂಬಿ ಗ್ರಾಮ ವ್ಯಾಪ್ತಿಯ ಕಬ್ಬಿನ ತೋಟಗಳಿಗೆ ಭೇಟಿ ನೀಡಿ, ಬೆಳೆಹಾನಿ ಪರಿಶೀಲಿಸಿ, ಮನವಿ ಸ್ವೀಕರಿಸಿದರು. ಬೆಳೆಹಾನಿಗೆ ಸೂಕ್ತ ಪರಿಹಾರದ ಭರವಸೆ ನೀಡಿದರು.
ಹುಲ್ಲಂಬಿ ರೈತರಾದ ತವನಪ್ಪ ರಾಯಪ್ಪ ಅಳಗವಾಡಿ ಅವರ 16 ಎಕರೆ 16 ಗುಂಟೆ ಜಮೀನು ಹಾಗೂ ಶಂಕ್ರವ್ವ ಕೋ.ರುದ್ರಪ್ಪ ಬಿಸರಳ್ಳಿ ಅವರ 5 ಎಕರೆ 26 ಗುಂಟೆ ಜಮೀನುದಲ್ಲಿ ಬೆಳೆದ ಮೆಕ್ಕೆಜೋಳ ಮತ್ತು ಕಬ್ಬು ಬೆಳೆ ಹಾನಿಯಾದ ಬಗ್ಗೆ ಸಚಿವರು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ರೈತರು ಮಾತನಾಡಿ, ಅಂದಾಜು 100-1500 ಎಕರೆ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಹುಲ್ಲಂಬಿ ಗ್ರಾಮದ ಸುಮಾರು 24 ಜನ ರೈತರ ಜಮೀನಿನ ಬೆಳೆ ಹಾನಿಯಾಗಿದೆ. ಕಬ್ಬು ಹಾಗೂ ಮಾವಿನ ತೋಟದ ಬೆಳೆಗಳನ್ನು ಸಹ ಕಾಡುಪ್ರಾಣಿಗಳು ಹಾಳು ಮಾಡುತ್ತಿವೆ. ಇದರಿಂದಾಗಿ ಬೀಜ, ಗೊಬ್ಬರ ಎಲ್ಲವೂ ಹಾಳಾಗುತ್ತಿದೆ. ಕಾಡುಪ್ರಾಣಿಗಳನ್ನು ಹೆದರಿಸಿ, ಓಡಿಸಲು ನಮಗೆ ಬಂದೂಕು ಬಳಕೆಗೆ ಅನುಮತಿಯನ್ನು ಕೊಡಿಸಬೇಕೆಂದು ಕೋರಿದರು. ರೈತರಿಗೆ ಸೂಕ್ತ ಪರಿಹಾರ ಹಾಗೂ ಸಹಾಯ ಧನ ನೀಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪ್ರೋಬೆಷನರಿ ರಿತೀಕಾ ವರ್ಮಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಕಲಘಟಗಿ ತಹಶೀಲ್ದಾರ ಬಸವರಾಜ ಹಾಗೂ ಇತರರು ಇದ್ದರು.