ದೊಡ್ಡಬಳ್ಳಾಪುರ: ಚನ್ನರಾಯಪಟ್ಟಣ್ಣ ಕೃಷಿ ಭೂಸ್ವಾಧೀನ ವಿರೋಧಿಸಿ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ರೈತರನ್ನು ಬಂಧಿಸಿದ (Arrest of farmers) ಕ್ರಮ ಖಂಡಿಸಿ ವಿವಿಧ ಸಂಘಟನೆಗಳ ವತಿಯಿಂದ ಗುರುವಾರ ತಾಲ್ಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಭೂಸ್ವಾಧೀನ ವಿಚಾರದಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿರುವ ಜಿಲ್ಲಾ ಸಚಿವ ಕೆ.ಎಚ್.ಮುನಿಯಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅಧಿಕಾರ ಇಲ್ಲದೇ ಇದ್ದಾಗ ಬಿಡುವು ಮಾಡಿಕೊಂಡು ಪ್ರತಿಭಟನ ಸ್ಥಳಕ್ಕೆ ಬಂದು ರೈತರ ಪರವಾಗಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಅಧಿಕಾರಕ್ಕೆ ಬರುತ್ತಿದ್ದಂತೆ ರೈತರ ವಿರುದ್ಧ ನೀತಿ ಹಾಗೂ ರೈತರ ಮೇಲಿನ ದಬ್ಬಾಳಿಕೆ ಹೆಚ್ಚಾಗಿದೆ.
ಕಾಂಗ್ರೆಸ್ ನಾಯಕರ ಇಬ್ಬಗೆಯ ನೀತಿಯಿಂದ ರೈತರು ಭೂಮಿ ಕಳೆದುಕೊಳ್ಳುವಂತ ಸ್ಥಿತಿಗೆ ಬಂದಿದ್ದಾರೆ. ರಾಜ್ಯದಲ್ಲಿ ರೈತರನ್ನು ಎದುರು ಹಾಕಿಕೊಂಡಿರುವ ಯಾವ ರಾಜಕೀಯ ಪಕ್ಷಗಳು ಅಧಿಕಾರದಲ್ಲಿ ಉಳಿದಿಲ್ಲ. ಆದರೆ ಇತರೆ ಪಕ್ಷಗಳಿಗಿಂತಲು ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡಿರುವುದೇ ರೈತರ ವಿರುದ್ಧ ನಡೆದುಕೊಂಡಿರುವ ಸಂದರ್ಭದಲ್ಲಿ. ಇದರ ಅರಿವು ಇದ್ದೂ ಸಹ ಕ್ಷೇತ್ರದ ಶಾಸಕರು ಆಗಿರುವ ಕೆ.ಎಚ್.ಮುನಿಯಪ್ಪ ಅವರು ಕೆಲವೇ ಜನ ಬಂಡವಾಳ ಶಾಹಿಗಳ ಹಿತಕ್ಕಾಗಿ ರೈತರನ್ನು ಎದುರುಹಾಕಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ಚಿ, ತಾಲ್ಲೂಕು ಕಾರ್ಯದರ್ಶಿ ರುದ್ರಾ ಆರಾಧ್ಯ, ಕರವೇ ಕನ್ನಡಿಗರ ಬಣದ ರಾಜ್ಯ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ಕೆಆರ್ಎಸ್ ಪಕ್ಷದ ಶಿವಶಂಕರ್, ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಸಿ.ಎಚ್.ರಾಮಕೃಷ್ಣ,ಕಾರ್ಮಿಕ ಸಂಘಟನೆ ಮುಖಂಡ ಪಿ.ಎ.ವೆಂಕಟೇಶ್, ರೇಣುಕಾಆರಾಧ್ಯ, ದಲಿತ ಸಂಘಟನೆಯ ಮುಖಂಡ ರಾಜುಸಣ್ಣಕ್ಕಿ ಇದ್ದರು.