ದೊಡ್ಡಬಳ್ಳಾಪುರ: ಜೆಡಿಎಸ್ (JDS) ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಷ್ಟಾವಂತ ಕಾರ್ಯಕರ್ತರಿದ್ದರೆ ಚುನಾವಣೆಗಳನ್ನು ಗೆಲ್ಲುವುದು ಕಷ್ಟಸಾಧ್ಯವಲ್ಲ. ಈ ದಿಸೆಯಲ್ಲಿ ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪಕ್ಷ ಸಂಘಟನೆಯನ್ನು ಸಮರ್ಪಕವಾಗಿ ಮಾಡಬೇಕು. ಕಾರ್ಯಕರ್ತರೊಡಗೂಡಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ಗೆಲುವು ಸಾಧ್ಯವಾಗುತ್ತದೆ ಎಂದು ಜೆಡಿಎಸ್ ಕೋರ್ ಕಮಿಟಿ ರಾಜ್ಯ ಅಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ (J.K. Krishna Reddy) ಹೇಳಿದರು.
ನಗರದ ಒಕ್ಕಲಿಗರ ಭವನದಲ್ಲಿ ಜೆಡಿಎಸ್ ವತಿಯಿಂದ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ದೊಡ್ಡಬಳ್ಳಾಪುರದಲ್ಲಿ 60ರಿಂದ70 ಸಾವಿರ ಮತ ಪಡೆಯುತ್ತಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ 500 ಜನರು ಸೇರದಿರುವುದು ನೋವಿನ ಸಂಗತಿ. ರಾಜ್ಯದಲ್ಲಿ ಚುನಾವಣೆಯಲ್ಲಿ ಒಟ್ಟು ಮತದಾರರ ಪೈಕಿ ಶೇ. 6ರಷ್ಟು ಮತ ಪಕ್ಷದ ಚಿಹ್ನೆಗೆ ಬಿದ್ದರೆ ಮಾತ್ರ ಚಿಹ್ನೆ ಉಳಿಸಲು ಸಾಧ್ಯ.
ಪಕ್ಷ ಕಟ್ಟುವಾಗ ದೇವೇಗೌಡ ಅವರ ಶ್ರಮ ಸದಾ ನೆನೆಯಬೇಕು. ದೇವೆಗೌಡರು ಪ್ರಧಾನಿಯಾದ ಸಂದರ್ಭದಲ್ಲಿ ರಾಜ್ಯಕ್ಕೆ ಅನೇಕ ಕೊಡುಗೆ ನೀಡುವ ಕೆಲಸ ಮಾಡಿದರು. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿದ್ದರು. 2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ 20 ತಿಂಗಳ ಅಧಿಕಾರದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.
ಪಕ್ಷ ಸಂಘಟನೆಗೆ ಒತ್ತು ನೀಡಿ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಪಕ್ಷಕ್ಕೆ ಅವಕಾಶ ಸಿಗಲು ಸಾರ್ವಜನಿಕ ವಲಯದಲ್ಲಿ ಜೆಡಿಎಸ್ ಬಲವಾಗಿದೆ ಎನ್ನುವ ಅಭಿಪ್ರಾಯ ಮೂಡಿಸಬೇಕು. ಪಕ್ಷದಲ್ಲಿ ಗುಂಪುಗಾರಿಕೆ ಬಿಡಬೇಕು. ನಾವು ಗೆಲ್ಲಲು ನಿರಂತರವಾಗಿ ಪ್ರಯತ್ನ ಮಾಡಬೇಕು ನಮ್ಮಲ್ಲಿ ಗುರಿಯಿರಬೇಕು.
ಸಂಘಟನೆಯಿಂದ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯವಾಗುತ್ತದೆ. ಪ್ರಬಲವಾಗಿ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು. ಚುನಾವಣೆಗೆ 2 ವರ್ಷವಿದೆ. 52 ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಪ್ರವಾಸ ಮಾಡಿದ್ದು, ಇನ್ನು 35 ಕಡೆ ಪ್ರವಾಸ ಬಾಕಿಯಿದೆ ಎಂದರು.
ಮುಂದೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳು ಎದುರಾಗಲಿದ್ದು, ಇವು ಕಾರ್ಯಕರ್ತರ ಚುನಾವಣೆಯಾಗಲಿವೆ. ಇದರಲ್ಲಿ ಕಾರ್ಯಕರ್ತರು ಬಹಳ ಮುಖ್ಯ. ಕಾರ್ಯಕರ್ತರು ಕೆಲಸ ಮಾಡಿದರೆ ನಾವು ನಾಯಕರಾಗಿ ವೇದಿಕೆ ಮೇಲೆ ಕೂರಲು ಸಾಧ್ಯ. ಪಕ್ಷ ಸಂಘಟನೆಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು.
ದೊಡ್ಡಬಳ್ಳಾಪುರದಲ್ಲಿ ಪಕ್ಷದ ರಜತಾ ಮಹೋತ್ಸವ ಕಾರ್ಯಕ್ರಮ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲಲ್ಲು ಅನುಕೂಲವಾಗುತ್ತದೆ. ಇಂದಿನ ಸಭೆಯ ಅಭಿಪ್ರಾಯಗಳನ್ನು ಪಕ್ಷದ ವರಿಷ್ಟರ ಗಮನಕ್ಕೆ ತರಲಾಗುವುದು. ಅವರು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಮುಖಂಡರಾದ ಹರೀಶ್ ಗೌಡ ಮಾತನಾಡಿ, ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಚೆನ್ನಗಪ್ಪ ಅವರಿಗೆ ಟಿಕೆಟ್ ನೀಡಿದ್ದರ ಫಲವಾಗಿ ಸ್ಥಳೀಯ ಮುಖಂಡರು ಟಿಕೆಟ್ನಿಂದ ವಂಚಿತರಾಗುವುದಲ್ಲದೇ ಪಕ್ಷಕ್ಕೆ ಹಾನಿಯಾಯಿತು.
ಸಾಲು ಸಾಲು ಚುನಾವಣೆಗಳು ಎದುರಾಗುತ್ತಿದ್ದು, ಕಾರ್ಯಕರ್ತರಿಗೆ ಸಂಘಟಿತರಾಗಬೇಕಿದೆ. ತಾಲೂಕಿನ ಪಕ್ಷ ಬಲಿಷ್ಟವಾಗಿದ್ದು, ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಚುನಾವಣೆಗೆ ಸಿದ್ದರಾಗಬೇಕಿದ್ದು, ಮುನೇಗೌಡ ಅವರು ಈ ಮುಂಚಿಗಿಂತಲೂ ಹೆಚ್ಚಾಗಿ ಎಲ್ಲಾ ಮುಖಂಡರನ್ನು ಒಂದಾಗಸಿಕೊಂಡು, ಬೂತ್ ಮಟ್ಟದಿಂದ ಪಕ್ಷವನ್ನು ಸದೃಢವಾಗಿಸಬೇಕಿದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಮುನೇಗೌಡ ಮಾತನಾಡಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ, ವಿಧಾನಸಭೆ, ಲೋಕಸಭೆ ಚುನಾವಣೆಗೆ ಪಕ್ಷವನ್ನು ಬೂತ್ ಮಟ್ಟದಿಂದ ಸದೃಢಗೊಳಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಬೂತ್ ಕಮಿಟಿ ರಚಿಸಿ, ಬೂತ್ಗೆ ಇಬ್ಬರನ್ನು ನೇಮಕ ಹಾಗೂ 25 ಸದಸ್ಯರು ನೊಂದಣಿ ಮಾಡಲಾಗುತ್ತಿದೆ ಎಂದರು.
ಜಗಳ ಬಿಡಿ ಪಕ್ಷ ಸಂಘಟನೆ ಮಾಡಿ
ಸಭೆಯಲ್ಲಿ ಮಾತನಾಡಿದ ಜೆಡಿಎಸ್ನ ವಿವಿಧ ಹೋಬಳಿಗಳ ಮುಖಂಡರು ಹಾಗೂ ಕಾರ್ಯಕರ್ತರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜೆಡಿಎಸ್ ಬಲಿಷ್ಟವಾಗಿದೆ. ನಮ್ಮಂತಹ ನಿಷ್ಟಾವಂತ ಕಾರ್ಯಕರ್ತರಿದ್ದಾರೆ. ಆದರೆ ಪಕ್ಷದ ನಾಯಕರ ಒಳಜಗಳ ಪಂಗಡಗಳಿಂದಾಗಿ ಕಾರ್ಯಕರ್ತರು ಸಂಧಿಗ್ದತೆ ಎದುರಿಸುತ್ತಿದ್ದಾರೆ.
ನಾವೇ ಮುಖಂಡರು ನಮ್ಮದೇ ಮಾತುನಡೆಯಬೇಕು ಎನ್ನುವ ಆಹಂ ಬಿಟ್ಟು ಮುಖಂಡರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಮುಂದೆ ನಮ್ಮ ಗುರಿ ಏನು ಎನ್ನುವುದನ್ನು ನಿಗದಿಪಡಿಸಬೇಕು. ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಪಕ್ಷಕ್ಕೆ ಗುಡ್ಬೈ ಹೇಳಿದ ಕಾರ್ಯಕರ್ತ
ದೊಡ್ಡಬಳ್ಳಾಪುರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತರಾದ ವೆಂಕಟೇಶ್ ಎನ್ನುವವರು ತಾಲೂಕಿನ ಮುಖಂಡರ ಬಗ್ಗೆ ಬೇಸರ ವ್ಯಕ್ತಪಡಿಸಿ ಜೆಡಿಎಸ್ ಶಾಲನ್ನು ಬಿಚ್ಚಿಟ್ಟು ಪಕ್ಷಕ್ಕೆ ಗುಡ್ಬೈ ಹೇಳುವುದಾಗಿ ಹೇಳಿ ಹೊರನಡೆದರು.
ಸಭೆಯಲ್ಲಿ ಜೆಡಿಎಸ್ ಚಿಕ್ಕಬಳ್ಳಾಪುರ ಘಟಕದ ಅಧ್ಯಕ್ಷ ಮುನಿಯಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೇವರಾಜಮ್ಮ, ಯುವಘಟಕದ ಜಿಲ್ಲಾ ಧ್ಯಕ್ಷ ಸುನಿಲ್ ಕುಮಾರ್, ನಗರಸಭೆ ಉಪಾಧ್ಯಕ್ಷ ಎಂ. ಮಲ್ಲೇಶ್, ಸದಸ್ಯ ಟಿ.ಎನ್.ಪ್ರಭುದೇವ್, ವಿ.ಎಸ್. ರವಿಕುಮಾರ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಡಾ.ಎಚ್.ಜಿ.ವಿಜಯ ಕುಮಾರ್, ಮುಖಂಡರಾದ ಚಿಕ್ಕರಾಮಕೃಷ್ಣಪ್ಪ, ನಾಗರಾಜ್, ಕೆಂಪರಾಜು, ರಾಮಚಂದ್ರಪ್ಪ, ಆಂಜನ ಗೌಡ, ಶಿವಕುಮಾರ್, ಶಾಂತಿನಗರ ಪ್ರವೀಣ್, ಮೆಳೇಕೋಟೆ ನಾಗೇಶ್, ಪುಟ್ಟರಾಜು, ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.