
ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ); ತಮಿಳುನಾಡು (Tamil Nadu) ಮತ್ತು ಪಶ್ಚಿಮ ಬಂಗಾಳ (West Bengal) ಚುನಾವಣೆ ದೇಶಾದ್ಯಂತ ಸುದ್ದಿಯಾಗಿದೆ. ತಮಿಳುನಾಡಿನಲ್ಲಿ ಟಿವಿಕೆ (TVK) ವಿಜಯ್ (Vijay) ಸದ್ದು ಮಾಡಿದರೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರದ್ದೇ (Mamata banerjee) ಸುದ್ದಿ.

ಇದೆಲ್ಲದರ ನಡುವೆ ಈ ಎರಡು ರಾಜ್ಯಗಳ ರಾಜ್ಯಪಾಲರ (Governor’s) ಸೂಚನೆ, ಆದೇಶಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ತಮಿಳುನಾಡು ರಾಜ್ಯಪಾಲರ ನಡೆ
ತಮಿಳುನಾಡು ರಾಜ್ಯಪಾಲರಾದ ರಾಜೇಂದ್ರ ಅವರನ್ನು TVK ವಿಜಯ್ ಅವರು ಭೇಟಿಯಾಗಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಆದರೆ ರಾಜ್ಯ ಪಾಲರು ಟಿವಿಕೆ ಬಳಿ, 118 ಶಾಸಕರ ಪಟ್ಟಿಯ ನ್ನಿಟ್ಟುಕೊಂಡು ಮರಳಿ ಬನ್ನಿ ಎಂದಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಕುರಿತಂತೆ ಚಿತ್ರನಟ ಕಮಲಹಾಸನ್, ಜನರ ತೀರ್ಪನ್ನು ಅವಮಾನಿಸಬೇಡಿ, ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ಬಹುಮತವನ್ನು ರಾಜಭವನದಲ್ಲಿ ಅಲ್ಲ, ವಿಧಾನಸಭೆಯಲ್ಲಿ ಸಾಬೀತುಪಡಿಸಬೇಕು’ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದು, “TVK ವಿಜಯ್ ಅವರಿಗೆ ಸರ್ಕಾರ ರಚನೆ ಮಾಡಿ ಬಹುಮತ ಸಾಬೀತುಪಡಿಸುವುದನ್ನು ತಡೆಯಲು ತಮಿಳುನಾಡಿನ ರಾಜ್ಯಪಾಲರಿಗೆ ಯಾವುದೇ ರೀತಿಯ ಅಧಿಕಾರವಿಲ್ಲ. ರಾಜ್ಯಪಾಲರ ನಡೆ ಸರಿಯಲ್ಲ”.
ರಾಷ್ಟ್ರಪತಿಗಳಾಗಿದ್ದ ನಾರಾಯಣನ್, ಅಬ್ದುಲ್ ಕಲಾಂ ಅವರೂ ಈ ರೀತಿ ಮಾಡಿದ್ದರು. ವಾಜಪೇಯಿ ಅವರಿಗೂ ಸಹ ಇದೇ ರೀತಿ ಸರ್ಕಾರ ರಚಿಸಲು ಅನುಮತಿ ನೀಡಿ ಸದನದಲ್ಲಿ ಬಹುಮತ ಸಾಬೀತಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗ ಟಿವಿಕೆಗೆ ಅವಕಾಶ ನೀಡದಿರುವುದು ತಪ್ಪು ಎಂದಿದ್ದಾರೆ.
“ಮೊದಲು ಬಹುಮತ ಸಾಬೀತಿಗೆ ಅವಕಾಶ ನೀಡಬೇಕು. ಒಂದು ರಾಜ್ಯದ ಜನರ ಭಾವನೆಗಳಿಗೆ ಬೆಲೆ ಕೊಡಬೇಕು. ಇದು ಪ್ರಜಾಪ್ರಭುತ್ವ. ಒಂದು ಮತದಿಂದ ಬಹುಮತ ಬರಬಹುದು ಅಥವಾ ಕಳೆದುಕೊಳ್ಳಬಹುದು. ವಾಜಪೇಯಿ ಅವರಿಗೆ ಇದೇ ರೀತಿ ಆಗಲಿಲ್ಲವೇ? ಒಂದೊಮ್ಮೆ ಬಹುಮತ ಸಾಬೀತು ಆಗದೇ ಹೋದರೆ ಮುಂದಿನ ಆಯ್ಕೆ ನೋಡಬಹುದು” ಎಂದು ಸಲಹೆ ನೀಡಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯಪಾಲರ ನಡೆ
ಇನ್ನೂ ಪಶ್ಚಿಮ ಬಂಗಾಳದ ಬೆಳವಣಿಗೆ ನೋಡುವುದಾದರೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲ್ಲವೆಂದು ಮಮತಾ ಬ್ಯಾನರ್ಜಿ ಹೈಡ್ರಾಮ ಸೃಷ್ಟಿಸಿರುವ ಬೆನ್ನಲ್ಲೇ, ರಾಜ್ಯಪಾಲರಾದ ಆರ್.ಎನ್.ರವಿ ಅವರು ಇಂದು ಸಂಜೆ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.
ವಿಧಾನಸಭೆ ಅವಧಿಯು ಇಂದು ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ, ರಾಜಭವನ ನಿನ್ನೆ ಹೊರಡಿಸಿದ್ದ ಪತ್ರವನ್ನು ಇಂದು ಸಂಜೆ ಅಧಿಕೃತವಾಗಿ ಪ್ರಕಟಿಸಿದೆ. ಸಂವಿಧಾನದ 174ನೇ ವಿಧಿ ಅನ್ವಯ ತಮಗೆ ನೀಡಿರುವ ಅಧಿಕಾರವನ್ನು ಬಳಸಿ ರಾಜ್ಯಪಾಲರು ಮೇ 7ರಿಂದ ಜಾರಿಗೆ ಬರುವಂತೆ ಪಶ್ಚಿಮ ಬಂಗಾಳ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.
ಆದರೆ ತಮಿಳುನಾಡು ರಾಜ್ಯಪಾಲರ ನಡೆಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲರು ಅನ್ವಯ ಮಾಡಿಕೊಂಡಿದ್ದರೆ, ನ್ಯಾಯಾಲಯದ ಆದೇಶಕ್ಕೆ ಕಾಯಬಹುದಿತ್ತಲ್ಲವೇ..? ಎಂಬ ಮಾತು ವ್ಯಾಪಕವಾಗಿ ಕೇಳಿಬಂದಿದೆ.
ಅಲ್ಲದೆ ಈ ಎರಡು ಪ್ರಕರಣಗಳಲ್ಲಿ ರಾಜ್ಯಪಾಲರು ತಮಗಿರುವ ಅಧಿಕಾರ, ವಿವೇಚನೆ ಬಳಸಿ ಆದೇಶ, ಸೂಚನೆ ನೀಡಿರುವ ನಡೆ ಸಾಮಾಜಿಕ ಜಾಲತಾಣದಲ್ಲಿ, ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಮತ್ತೊಂದೆಡೆ ರಾಜ್ಯಪಾಲರನ್ನು ನೇಮಿಸುವುದು ಕೇಂದ್ರ ಸರ್ಕಾರ, ಅವರ ಪಕ್ಷದ ಅನುಕೂಲಕ್ಕೆ ತಕ್ಕಂತೆ ರಾಜ್ಯಪಾಲರು ವರ್ತಿಸುತ್ತಾರೆ ಎಂಬ ಆರೋಪ ವ್ಯಾಪಕವಾಗಿದೆ. ಇದರ ಬೆನ್ನಲ್ಲೇ ಈ ಎರಡು ರಾಜ್ಯಗಳ ರಾಜ್ಯಪಾಲರ ನಡೆ ಮತ್ತಷ್ಟು ಚರ್ಚೆಗೆ ಆಹಾರ ಒದಗಿಸಿದೆ ಎಂಬ ಮಾತು ರಾಜಕೀಯ ವಿಶ್ಲೇಷಕರದ್ದಾಗಿದೆ.
ಸ್ಪಷ್ಟನೆ: ಈ ವರದಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ಜನಾಭಿಪ್ರಾಯವಾಗಿದ್ದು, ಹರಿತಲೇಖನಿ ಸುದ್ದಿ ಸಂಸ್ಥೆಯ ಅಭಿಪ್ರಾಯವಲ್ಲ.


