
ಬೆಂಗಳೂರು: ಬಡ ಜನರ ಕೈಗೆಟಕುವ ದರದಲ್ಲಿ ಮರಳು ಒದಗಿಸಿದಲ್ಲಿ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಮರಳು ನೀತಿ ಜಾರಿಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಬಾಗಲಕೋಟೆಯ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯದೆಲ್ಲಡೆ ಅನಧಿಕೃವಾಗಿ ಮರಳು ಹಾಗೂ ಜಲ್ಲಿಕಲ್ಲು ಸಾಗಾಣಿಕೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಬರುವ ಆದಾಯ ಪೋಲಾಗುತ್ತಿದ್ದು, ನಿಯಂತ್ರಣ ಮಾಡಿದಷ್ಟು ಅನಧಿಕೃತ ಗಣಿಗಾರಿಕೆ ಹೆಚ್ಚಾಗುತ್ತಿದೆ. ಮರಳು ಉಚಿತವಾಗಿ ದೊರೆಯುವಂತೆ ಮಾಡಿದಲ್ಲಿ ಸಾಮಾನ್ಯ ಜನರಿಗೆ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಿಸಲು ಅನುಕೂಲವಾಗಲಿದೆ ಎಂದರು.
ಉಚಿತವಾಗಿ ಮರಳು ಸಿಗುವಂತೆ ಮಾಡಿದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವವರಿಗೆ ವರದಾನವಾಗಲಿದ್ದು, ಇದರಿಂದ ಮರಳು ಅಭಾವ ತಪ್ಪಿಸಬಹುದಾಗಿದೆ. ಅಲ್ಲದೇ ಸರಕಾರಕ್ಕೆ ಬರುವ ಆದಾಯ ಹೆಚ್ಚಾಗಲಿದೆ. 10 ಲಕ್ಷ ರೂ.ಗಳ ಒಳಗೆ ನಿರ್ಮಿಸುತ್ತಿರುವ ಮನೆಗಳಿಗೆ ಇದು ಅನ್ವಯವಾಗಲಿದೆ. ಹೊಸ ನೀತಿಯನ್ವಯ ಟ್ಯಾಕ್ಟರ್, ಎತ್ತಿನ ಬಂಡಿ, ದ್ವಿಚಕ್ರ ವಾಹನ, ಮರಳು ಸಾಗಣೆ ಮಾಡಿದರೆ ಕೇಸ್ ದಾಖಲಿಸುವಂತಿಲ್ಲ. ಬೇರೆ ಜಿಲ್ಲೆಗಳಿಗೆ ಸಾಗಾಣಿಕೆ ಮಾಡಿದರೆ ಮಾತ್ರ ಕೇಸ್ ದಾಖಲಿಸಲಾಗುವುದೆಂದು ತಿಳಿಸಿದರು.
ಜಿಲ್ಲೆಯಲ್ಲಿ ಜೆಲ್ಲಿ ಕ್ರಷರ್ ಘಟಕಗಳು 16 ಮಾತ್ರ ಚಾಲ್ತಿಯಲ್ಲಿದ್ದು, ನಮೂನೆ ಡಿ ವಿತರಿಸಿದ 29 ಜೆಲ್ಲಿ ಕ್ರಷರ್ ಘಟಕಗಳಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಬೇಗನೇ ಅನುಮತಿ ನೀಡಬೇಕು. ಏಕೆಂದರೆ ಘಟಕ ಸ್ಥಾಪನೆಗೆ ಬ್ಯಾಂಕಗಳ ಮೂಲಕ ಸಾಲ ಪಡೆದಿದ್ದು, ಕಂತು ತುಂಬಲು ಸಾಧ್ಯವಾಗುತ್ತಿಲ್ಲ. ಅನುಮತಿ ತುರ್ತು ನೀಡಿದಲ್ಲಿ ಕ್ರಷರ್ ಪ್ರಾರಂಭವಾದರೆ ಅವರಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದಾಗ ಇನ್ನು 15 ದಿನಗಳಲ್ಲಿ ಅನುಮತಿಗಾಗಿ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲೆಯಲ್ಲಿ ಓವರ್ ಲೋಡ್ ಆಗುತ್ತಿರುವ ಬಗ್ಗೆ ಗಣನೆಗೆ ಬಂದಿದ್ದು, ಅವುಗಳ ತಡೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಹುನಗುಂದ ತಾಲೂಕಿನ ಬಲಕುಂದಿ ಗ್ರಾಮದಲ್ಲಿ ಮೂರು ತರಹದ ಕಲ್ಲು ಸೀಗುತ್ತಿದ್ದು, ಅವುಗಳಲ್ಲಿರುವ ವ್ಯತ್ಯಾಸದಿಂದ ಹೆಚ್ಚಿನ ಲಾಭವಾಗಲಿದ್ದು, ಬೇರೆಡೆ ರಪ್ತು ಮಾಡುವಾಗ ಗಣನೆಗೆ ತೆಗೆದುಕೊಳ್ಳಲು ತಿಳಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ರೋಹಿತ ಮಾತನಾಡಿ 2 ಕಬ್ಬಿಣ ಅದಿರಿನ ಘಟಕ, 28 ಕ್ವಾರಿ, 21 ಪಿಂಕ್ ಗ್ರಾನೈಟ್ಸ್ , 15 ಮರಳು ಘಟಕ, 13 ಬಿಲ್ಡಿಂಗ್ ಸ್ಟೋನ್, 16 ಜೆಲ್ಲಿ ಕ್ರಷರ್ಗಳು ಚಾಲ್ತಿಯಲ್ಲಿರುವುದಾಗಿ ಸಭೆಗೆ ತಿಳಿಸಿದರು. ನವೀಕರಣಕ್ಕೆ ಬಂದ ಅರ್ಜಿಗಳನ್ನು ತುರ್ತಾಗಿ ಪರಿಶೀಲಿಸಿ ಅನುಮತಿಗೆ ಕ್ರಮವಹಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಸದಸ್ಯ ಹೂವಪ್ಪ ರಾಠೋಡ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಇಂಜಿನೀಯರ್ ಶಿವಶಂಕರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

