
ದಾವಣಗೆರೆ: ಸ್ಥಳೀಯ ಸಂಸ್ಥೆಗಳು ಮತ್ತು ವಿವಿಧ ಇಲಾಖೆಗಳ ಶೇ.5 ರ ಅನುದಾನದಲ್ಲಿ ಕೇವಲ ಬೈಕು ಮತ್ತು ಹೊಲಿಗೆ ಯಂತ್ರ ನೀಡುವ ಬದಲಾಗಿ ಎಲ್ಲ ರೀತಿಯ ಅಂಗವೈಕಲ್ಯವನ್ನು ಒಳಗೊಂಡ ವಿಶೇಷಚೇತನರಿಗೆ ಅನುಕೂಲವಾಗುವ ಸಾಧನ-ಸಲಕರಣೆಗಳನ್ನು ನೀಡಬೇಕೆಂದು ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಸದಸ್ಯರು ಒತ್ತಾಯಿಸಿದರು.

ಬುಧವಾರ ಸಂಜೆ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ರ ಕಲಂ 72 ರ ಪ್ರಕಾರ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಸದಸ್ಯರು, ಶೇ.5 ರ ಅನುದಾನ ಸೇರಿದಂತೆ ಇತರೆ ಯೋಜನೆಯಡಿ ಕೆಲವೇ ವಿಶೇಷಚೇತನರಿಗೆ ಸೌಲಭ್ಯ ನೀಡಲಾಗುತ್ತಿದೆ. ಇದರಿಂದ ಇತರೆ ಅಂಗವೈಕಲ್ಯರು ಸೌಲಭ್ಯ ವಂಚಿತರಾಗುತ್ತಿದ್ದು, ಎಲ್ಲ ರೀತಿಯ ಅಂಗವಿಕಲರನ್ನು ಪರಿಗಣಿಸಿ, ಕ್ರಿಯಾ ಯೋಜನೆ ಮುನ್ನ ಸಮಿತಿ ರಚಿಸಿ ನಮ್ಮ ಅಭಿಪ್ರಾಯ ಪಡೆದು ಅಗತ್ಯವಾದ ಮತ್ತು ಗುಣಮಟ್ಟದ ಸಾಧನೆ-ಸಲಕರಣೆ ನೀಡುವಂತೆ ಮನವಿ ಮಾಡಿದರು.ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ದೈಹಿಕ ವಿಕಲಚೇತನರಿಗೆ ಬೈಕುಗಳನ್ನು ಹೆಚ್ಚಾಗಿ ಎಂಎಲ್ಎ ಅವರ ಅನುದಾನಲದಲ್ಲಿ ನೀಡಲಾಗುತ್ತಿದೆ. ಶೇ.5 ರ ಅನುದಾನದಲ್ಲಿ ಬೇಕನ್ನು ಖರೀದಿಸುತ್ತಿಲ್ಲ. ಮುಂದಿನ ಕ್ರಿಯಾ ಯೋಜನೆಯಲ್ಲಿ ಎಲ್ಲ ರೀತಿಯ ಅಂಗವೈಕಲ್ಯವನ್ನು ಒಳಗೊಂಡಂತೆ ಬೇಡಿಕೆಗನುಗುಣವಾಗಿ ಸಾಧನೆ ಸಲಕರಣೆ ನೀಡಲು ಕ್ರಮ ವಹಿಸಲಾಗುವುದು ಎಂದರು.ಅಂಗವಿಕಲರಿಗೆ ನೀಡುವ ಯುಡಿಐಡಿ ಕಾರ್ಡ್ ವಿತರಣೆಯಲ್ಲಿ ರಾಜ್ಯದಲ್ಲಿ ಜಿಲ್ಲೆ 6 ನೇ ಸ್ಥಾನದಲ್ಲಿದ್ದು ಶೇ.4277 ಜನರಿಗೆ ಕಾರ್ಡ್ ವಿತರಿಸಲಾಗಿದ್ದು, ಇನ್ನು ಮುಂದೆ ಹೆಚ್ಚಿನ ಗುರಿ ಹೆಚ್ಚಿಸಿಕೊಂಡು ಸಾಧನೆ ಮಾಡಬೇಕು ಎಂದು ಸೂಚನೆ ನೀಡಿದರು.
ಸಮಿತಿ ಸದಸ್ಯೆ ವಿಜಯಲಕ್ಷ್ಮಿ ಮಾತನಾಡಿ, ಪಾಲಿಕೆಯಲ್ಲಿ ಯುಡಿಐಡಿ ನೀಡಲು ಹಣ ಯುಅರ್ಡಬ್ಲ್ಯು ಕೇಳುತ್ತಿದ್ದಾರೆಂದು ದೂರಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಯುಡಿಐಡಿ ಕಾರ್ಡ್ ಫಲಾನುಭವಿಗಳಿಗೆ ತಲುಪವಲ್ಲಿ ವಿಆರ್ಡಬ್ಲ್ಯು, ಯುರ್ಡಬ್ಲ್ಯು ಮತ್ತು ಎಂಆರ್ಡಬ್ಲ್ಯುಗಳಿಂದ ಏನಾದರೂ ತೊಂದರೆ, ದೌರ್ಜನ್ಯ ಆಗುತ್ತಿರುವ ಬಗ್ಗೆ ದೂರು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಅವರನ್ನು ತೆಗೆದು ಬೇರೆಯವರನ್ನು ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದರು.
ಸಂಕಲ್ಪ ಸಂಸ್ಥೆಯ ಕಾರ್ಯದರ್ಶಿ ಸುರೇಶ್.ಜಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಅಂಗವಿಕಲ್ಯತೆ ಪ್ರಮಾಣ(ಶೇ.) ಸರ್ಟಿಫಿಕೇಟ್ ನೀಡಲು ಅಂಗವಿಕಲರಿಂದ ಹಣ ಪಡೆಯುತ್ತಿದ್ದಾರೆ. ಬೌದ್ದಿಕ ಅಂಗವೈಕಲ್ಯತೆ, ಇಎನ್ಟಿ, ಕೀಲು ಮೂಳೆ ತಜ್ಞರು, ಕಣ್ಣಿನ ತಜ್ಞರು ಈ ರೀತಿ ಮಾಡುತ್ತಿದ್ದು, ಇದೊಂದು ದೊಡ್ಡ ದಂಧೆಯೇ ಆಗಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದ ಅವರು ಎಸಿಬಿ ಗೆ ಕೂಡ ಈ ಬಗ್ಗೆ ದೂರು ನೀಡಲಾಗುವುದು ಎಂದರು.ಜಿಲ್ಲಾಧಿಕಾರಗಳು ಹಾಗೂ ಎಸ್ಪಿ ಯವರು ಪ್ರತಿಕ್ರಿಯಿಸಿ, ಈ ರೀತಿಯ ಪ್ರಕರಣ ಕಂಡು ಬಂದಲ್ಲಿ ತಕ್ಷಣ ತಮ್ಮನ್ನು ಸಂಪರ್ಕಿಸಬೇಕು. ಆಗ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಹಾಗೂ ಚಿಗಟೇರಿ ಆಸ್ಪತ್ರೆಯ ಈ ರೀತಿ ಅಂಗವೈಕಲ್ಯತೆ ಸರ್ಟಿಫಿಕೇಟ್ ನೀಡುವ ವೈದ್ಯರ ಕೊಠಡಿಗಳ ಮುಂದೆ ಹೆಲ್ಪ್ಲೈನ್ ಸಂಖ್ಯೆ ಹಾಗೂ ಪೊಲೀಸ್ ಸಹಾಯವಾಣಿ 112 ನ್ನು ಬರೆಸಲಾಗುವುದು. ವೈದ್ಯರು ಹಣ ಕೇಳಿದರೆ ತಕ್ಷಣ ಈ ಸಂಖ್ಯೆಗೆ ಕರೆ ಮಾಡಿದರೆ ಪೊಲೀಸರು ತಕ್ಷಣ ಪ್ರತಿಕ್ರಿಸುವರು ಎಂದರು.
ನಕಲಿ ಸರ್ಟಿಫಿಕೇಟ್ ನೀಡಿದರೆ ಕಠಿಣ ಕ್ರಮ: ಅಂಗವೈಕಲ್ಯ ಸರ್ಟಿಫಿಕೇಟ್ ವಿಷಯವಾಗಿ ಸಿಇಓ ಹಾಗೂ ಎಸ್ಪಿ ಯವರೊಂದಿಗೆ ದಿಢೀರ್ ಭೇಟಿ ನೀಡಲಾಗುವುದು. ಹಣ ಪಡೆದು ಸರ್ಟಿಫಿಕೇಟ್ ನೀಡುವುದು ಅಥವಾ ಅಂಗವಿಕಲರೇ ಇಂತಿಷ್ಟು ದುಡ್ಡು ಕೊಡುತ್ತೇವೆ ಪರ್ಸಂಟೇಜ್ ಹೆಚ್ಚಿಸಿ ಎಂದು ಆಮಿಷ ತೋರಿ ಹಣ ನೀಡಿದಾಗ ನಕಲಿ ಸರ್ಟಿಫಿಕೇಟ್ ನೀಡಿದಲ್ಲಿ ಅಂತಹವರ ವಿರುದ್ದ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದಡಿ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮನ್ವಯ ಶಿಕ್ಷಣ ಜಾರಿಗೊಳಿಸಿ : ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಜಿಲ್ಲಾ ಸಂಯೋಜಕ ರವಿ ಮಾತನಾಡಿ, ಜಿಲ್ಲೆಯಲ್ಲಿ ಸಾಮಾನ್ಯ ಮಕ್ಕಳೊಂದಿಗೆ ವಿಶೇಷ ಮಕ್ಕಳು ಕಲಿಯುವ ಸಮನ್ವಯ ಶಿಕ್ಷಣ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ದಾವಣಗೆರೆ ತಾಲ್ಲೂಕಿನಲ್ಲೇ 15 ಮಾದರಿ ಶಾಲೆಗಳಿದ್ದು ಎಡಿಪಿ ಯಿಂದ ನೀಡಲಾದ ಸಾಧನೆ ಸಲಕರಣೆಗಳ ಸಮರ್ಪಕ ಬಳಕೆಯಾಗಿಲ್ಲವೆಂದರು. ವಿಕಲಚೇತನ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕಿದೆ. ಬಿಆರ್ಸಿ ಮತ್ತು ಸಿಆರ್ಸಿ ಗಳು ಸಮನ್ವಯ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುತ್ತಿಲ್ಲ ಎಂದರು.ಜಿಲ್ಲಾ ಮಟ್ಟದ ಸಮಿತಿ ಸದಸ್ಯರು ಮತ್ತು ಸಂಜ್ಞೆ ಭಾಷೆ ತರ್ಜುಮೆದಾರರು ಜೆ ದುರಗೇಶ ಮಾತನಾಡಿ, ಯಾವ ಶಾಲೆಯಲ್ಲೂ ನುರಿತ ಸಂಜ್ಞೆ ಭಾಷೆ ತರ್ಜುಮೆದಾರರು, ಬೌದ್ದಿಕ ಅಂಗವೈಕಲ್ಯ ಸೇರಿದಂತೆ ವಿಶೇಷ ಮಕ್ಕಳಿಗೆ ಶಿಕ್ಷಣ ನೀಡುವ ಕೌಶಲ್ಯ ಶಿಕ್ಷಕರಿಗೆ ಇಲ್ಲ. ಇತರೆ ದೇಶಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಂಜ್ಞೆ ಭಾಷೆಯನ್ನು ಸಹ ಅರ್ಥ ಮಾಡಿಕೊಂಡು ಸ್ಪಂದಿಸುತ್ತಾರೆ ಎಂದರು.
ಡಿಡಿಪಿಐ ಸಿ.ಆರ್ ಪರಮೇಶ್ವರಪ್ಪ, ಈಗಾಗಲೇ 5 ಹಂತದಲ್ಲಿ ಶೇ.60 ರಷ್ಟು ಶಿಕ್ಷಕರಿಗೆ ವಿಶೇಷಚೇತನ ಮಕ್ಕಳ ಕುರಿತಾಗಿ ತರಬೇತಿ ನೀಡಲಾಗಿದೆ. ವಿಶೇಷ ಮಕ್ಕಳ ಕುರಿತು ಅಧ್ಯಯನ ಮಾಡಿದ ಶಿಕ್ಷಕರನ್ನೇ ವಿವಿಧ ಶಾಲೆಗಳಲ್ಲಿ ನೇಮಿಸಲಾಗಿದ್ದು, ವಿಶೇಷ ಮಕ್ಕಳಿಗೆ ಅಡೆತಡೆ ರಹಿತ ವಾತಾವರಣ ನಿರ್ಮಿಸಲಾಗಿದೆ ಎಂದರು.
ಡೇ ಕೇರ್ ಸೆಂಟರ್: ಸಂಕಲ್ಪ ಸಂಸ್ಥೆಯ ಕಾರ್ಯದರ್ಶಿ ಸುರೇಶ್.ಜಿ ಮಾತನಾಡಿ, ಶೇ.5 ರ ಅನುದಾನ ಅಥವಾ ವಿಶೇಷಚೇತನರ ಇನ್ನಾವುದೇ ಯೋಜನೆಯಲ್ಲಿ ಮಕ್ಕಳ ಸಲುವಾಗಿ ಅವರ ಭವಿಷ್ಯಕ್ಕಾಗಿ ಅನುದಾನ ಬಳಕೆಯಾಗುತ್ತಿಲ್ಲ. ವಿಶೇಷಚೇತನ ಮಕ್ಕಳನ್ನು ನಿರ್ವಹಿಸುವುದು ಪೋಷಕರಿಗೆ ತುಂಬಾ ಕಷ್ಟವಾಗುತ್ತದೆ. ಮೈಸೂರು ಮತ್ತು ಮಂಗಳೂರಿನಲ್ಲಿ ಸರ್ಕಾರದ ವತಿಯಿಂದ ಡೇ ಕೇರ್ ಸೆಂಟರ್ ತೆರೆಯಲಾಗಿದೆ. ಅದೇ ರೀತಿಯಲ್ಲಿ ದಾವಣಗೆರೆಯಲ್ಲಿ ಡೇ ಕೇರ್ ಸೆಂಟರ್ ತೆರೆಯುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಬುದ್ದಿಮಾಂದ್ಯ ಮಕ್ಕಳಿಗೆ ಸಂಬಂಧಿಸಿದಂತೆ ಎರಡು ಸಂಸ್ಥೆಗಳು ಕೆಲಸ ಮಾಡುತ್ತಿವೆ. ಡೇ ಕೇರ್ ಸೆಂಟರ್ ಉತ್ತಮ ಯೋಜನೆಯಾಗಿದ್ದು ಈ ಬಗ್ಗೆ ವಿವರವಾದ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
ಸಮಿತಿ ಸದಸ್ಯ ವೀರೇಶ್ ವಿಕಲಚೇತನರನ್ನು ಹಿಯಾಳಿಸುವ ಪ್ರವೃತ್ತಿ ಇದ್ದು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಗೆ ಮುಂದಾದರೆ ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಎಸ್ಸಿ/ಎಸ್ಟಿ ಗೆ ಅಟ್ರಾಸಿಟಿ ಕಾಯ್ದೆಯಡಿ ತ್ವರಿತವಾಗಿ ಸ್ಪಂದಿಸುವಂತೆ ನಮಗೂ ಸ್ಪಂದಿಸಬೇಕು. ಅಂಧರಿಗೆ ಸೌಲಭ್ಯವೆಂದರೆ ಕೇವಲ ಟಾಕಿಂಗ್ ವಾಚ್ ಮತ್ತು ವಾಕಿಂಗ್ ಸ್ಟಿಕ್ ಗೆ ಸೀಮಿತವಾಗಬಾರದು. ಬ್ರೈಲ್ ವಾಚ್ ಸೇರಿದಂತೆ ಬ್ರೈಲ್ ಕಿಟ್ ನೀಡಲು ಕ್ರಮ ವಹಿಸಬೇಕು. ತಾಲ್ಲೂಕುವಾರು ಕ್ಯಾಂಪ್ ಮಾಡಿ ವಿಕಲಚೇತನರಿಗೆ ಆಯುಷ್ಮಾನ್ ಆರೋಗ್ಯಭಾರತ ಕಾರ್ಡ್ ಮಾಡಿಸಬೇಕು. ಅಂಧರಾದ ನಾವು ಆರ್ಕೆಸ್ಟ್ರಾಗಳಿಗೆ ಬಾಡಿಗೆ ಸಂಗೀತ ಪರಿಕರ ಪಡೆಯುತ್ತಿದ್ದು, ಶೇ.5 ರ ಅನುದಾನ ಅಥವಾ ಸ್ವಯಂ ಉದ್ಯೋಗ ಕೈಗೊಳ್ಳುವ ಯೋಜನೆಯಡಿ ಅಂಧರಿಗೆ ಸಂಗೀತ ಪರಿಕರ ನೀಡಬೇಕು ಎಂದು ಮನವಿ ಮಾಡಿದರು.
ಮ್ಯಾಗ್ನಿಫೈಯರ್ ಒದಗಿಸಿ : ಸಂಪೂರ್ಣ ಅಂಧರಿಗೆ ಬೈಲ್ ಕಿಟ್ ಅನುಕೂಲ ಮಾಡಿಕೊಬೇಕು. ಹಾಗೆಯೇ ಭಾಗಶಃ ಅಂಧರಿಗೆ ಮ್ಯಾಗ್ನಿಫೈರ್ನ್ನು ನೀಡಿದಲ್ಲಿ ಅವರು ಓದಿನಲ್ಲಿ ಮುಂದೆ ಬಂದು ಸಾಧನೆ ಮಾಡಬಹುದಾಗಿರುವುದರಿಂದ ಶೇ.5 ರ ಅನುದಾನದಲ್ಲಿ ಭಾಗಶಃ ಅಂಧರನ್ನು ಗುರುತಿಸಿ ಮ್ಯಾಗ್ನಿಫೈಯರ್ಗಳನ್ನು ನೀಡಬೇಕೆಂದರು.
ಸಿಆರ್ಸಿ ನಿರ್ದೇಶಕ ಜ್ಞಾನವೇಲ್ ಮಾತನಾಡಿ, ಅಡಿಪ್ ಯೋಜನೆಯಡಿ ರೂ.25 ವೆಚ್ಚದಲ್ಲಿ ಪ್ರತಿ ವರ್ಷ ವಿವಿಧ ರೀತಿಯ ಅಂಗವಿಕಲರಿಗೆ ಸಾಧನೆ ಸಲಕರಣೆ ವಿತರಿಸಲಾಗುತ್ತಿದೆ. ಈ ಬಾರಿ ಬೌದ್ದಿಕ ಅಂಗವಿಕಲರಿಗೆ ಟಿಎಲ್ಎಂ ಕಲಿಕಾ ಸಾಮಗ್ರಿ, ಹಿಯರಿಂಗ್ ಏಡ್ಗಳನ್ನು ವಿತರಿಸಲಾಗಿದೆ ಎಂದರು.
ಡಿಹೆಚ್ಓ ಡಾ.ನಾಗರಾಜ್ ಮಾತನಾಡಿ, ಆರ್ಬಿಎಸ್ಕೆ ಯೋಜನೆಯಡಿ ಪ್ರತಿ ಶಾಲೆಗೆ ತೆರಳಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿ, ಕಡಿಮೆ ದೃಷ್ಟಿ ಇರುವ ಮಕ್ಕಳನ್ನು ಗುರುತಿಸಿ ಕನ್ನಡಕ ನೀಡಲಾಗುತ್ತಿದೆ. ಇನ್ನು ಮುಂದೆ ಮ್ಯಾಗ್ನಿಫೈಯರ್ ನೀಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸ್ವಯಂ ಉದ್ಯೋಗ ಯೋಜನೆಯಡಿ ಮಾರ್ಗಸೂಚಿಗಳನ್ವಯ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಕ್ರಿಯಾ ಯೋಜನೆ ತಯಾರಿಸಿ ಸೌಲಭ್ಯ ನೀಡುವಂತೆ ಸೂಚನೆ ನೀಡಿದರು.ಶ್ರವಣದೋಷವುಳ್ಳವರ ಸಮಿತಿ ಸದಸ್ಯ ರಾಜಶೇಖರ್ ಬಿ.ಕೆ.ಪಿ ಮಾತನಾಡಿ, ವಿವಿಧ ಇಲಾಖೆಗಳ ಶೇ.5 ರ ಅನುದಾನದಲ್ಲಿ ಕಿವುಡ ಮತ್ತು ಮೂಗರಿಗೆ ಹಿಯರಿಂಗ್ ಏಡ್ ಸೇರಿದಂತೆ ಇನ್ನಿತರೆ ಉಪಯುಕ್ತ ಸಾಧನ ಸಲಕರಣೆಗಳನ್ನು ನೀಡಬೇಕು. ಕ್ರಿಯಾ ಯೋಜನೆ ಸಮಿತಿ ರಚಿಸಿ ವಿವಿಧ ಅಂಗವೈಕಲ್ಯಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಪಡೆದು ಉಪಯುಕ್ತ ಸಾಧನ ಸಲಕರಣೆ ನೀಡುವಂತೆ ಒತ್ತಾಯಿಸಿದರು ಹಾಗೂ ಶಾಲೆಗಳಲ್ಲಿ ಸಂಜ್ಞೆ ಭಾಷೆ ತರ್ಜುಮೆದಾರರನ್ನು ನೇಮಿಸಬೇಕು ಎಂದರು.
ಹಾಗೂ ಅಂಗವಿಕಲರಿಗೆ ಏನಾದರೂ ತೊಂದರೆಯಾದಲ್ಲಿ, ಹಿಯಾಳಿಸಿದಲ್ಲಿ ಸಹಾಯವಾಣಿ ಸಂಖ್ಯೆ 112 ಕರೆ ಮಾಡುವಂತೆ ತಿಳಿಸಿದ್ದೀರಿ. ಆದರೆ ಮಾತನಾಡಲು ಬಾರದ ನಾವು ಏನು ಮಾಡಬೇಕೆಂದು ಪ್ರಶ್ನಿಸಿದ ಅವರಿಗೆ ಎಸ್ಪಿ ಯವರು 112 ಸಹಾಯವಾಣಿಗೆ ಸಂಬಂಧಿಸಿದಂತೆ ಫೇಸ್ಬುಕ್, ವಾಟ್ಸಾಪ್ ಮತ್ತು ಟ್ವಿಟರ್ ಖಾತೆ ಸಹ ಇದ್ದು ಬಳಕೆ ಮಾಡಬಹುದು ಎಂದರು.
ಸೋಷಿಯಲ್ ಆಡಿಟ್ : ಸ್ಪೂರ್ತಿ ಸಂಸ್ಥೆಯ ರೂಪ್ಲಾನಾಯ್ಕ ಮಾತನಾಡಿ, ಪ್ರತಿ ತಾಲ್ಲೂಕಿನಲ್ಲಿ ತಜ್ಞ ವೈದ್ಯರಿದ್ದು ಕ್ಯಾಂಪ್ ಮೂಲಕ ಯುಡಿಐಡಿ ಕಾರ್ಡ್ಗೆ ಸಹಕರಿಸಬೇಕು ಹಾಗೂ ಸರ್ಕಾರದಿಂದ ನೀಡುವ ಸಾಧನೆ ಸಲಕರಣೆಗಳ ಗುಣಮಟ್ಟವನ್ನು ಹೆಚ್ಚಿಸಬೇಕು. ಹಾಗೂ ಸೌಲಭ್ಯ ಪಡೆದವರೇ ಪ್ರಭಾವ ಬಳಸಿ ಮತ್ತೆ ಸೌಲಭ್ಯ ಪಡೆಯುವುದನ್ನು ತಪ್ಪಿಸಲು ಸೋಷಿಯಲ್ ಆಡಿಟ್ಗೆ ಕ್ರಮ ವಹಿಸಬೇಕೆಂದರು.
ಎಡಿಪಿ ಸಂಸ್ಥೆಯ ಜಿಲ್ಲಾ ಸಂಯೋಜಕರು ಹಾಗೂ ಇತರೆ ಸಮಿತಿ ಸದಸ್ಯರು ಅಂಗವಿಕಲರ ಇಲಾಖೆ ಮತ್ತು ವಿವಿಧ ಯೋಜನೆಗಳಡಿ ನೀಡುವ ಸಾಧನ ಸಲಕರಣೆಗಳ ಗುಣಮಟ್ಟ ಉತ್ತಮವಾಗಿಲ್ಲ. ಬಹಳ ಬೇಗ ಅನುಪಯುಕ್ತವಾಗುತ್ತಿವೆ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಸಿ ಪ್ರತಿ ತಿಂಗಳಿಗೆ ಒಮ್ಮೆ ತಾಲ್ಲೂಕುವಾರು ಅಂಗವಿಕಲರಿಗೆ ವಿಶೇಷ ಆರೋಗ್ಯ ಶಿಬಿರ ಏರ್ಪಡಿಸಲು ದಿನಾಂಕ ನಿಗದಿಗೊಳಿಸಿ, ಸಾಕಷ್ಟು ಪ್ರಚಾರ ನೀಡಬೇಕೆಂದು ಡಿಹೆಚ್ಓ ಗೆ ಸೂಚಿಸಿದರು.
ಅಲ್ಲದೇ 3 ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ಸಭೆ ಕರೆದು ಪ್ರಗತಿ ಪರಿಶೀಲನೆ ಆಗಬೇಕು. ಹಾಗೂ ಗುಣಮಟ್ಟದ ಸಾಧನ ಸಲಕರಣೆ ಖರೀದಿಗೆ ಉತ್ತಮ ಸಂಸ್ಥೆಗೆ ಟೆಂಡರ್ ನೀಡುವಂತೆ ಸೂಚಿಸಿದರಲ್ಲದೇ ಶೇ.5 ರ ಅನುದಾನದಡಿ ಎಲ್ಲ ರೀತಿಯ ಅಂಗವೈಕಲ್ಯದವರನ್ನು ಒಳಗೊಂಡು ಸೌಲಭ್ಯ ನೀಡಲು ಕ್ರಿಯಾ ಯೋಜನೆ ಸಮಿತಿ ರಚಿಸಿ ಕ್ರಮ ವಹಿಸಲಾಗುವುದು ಎಂದರು.
ರಸ್ತೆಯಲ್ಲಿ ನಮಗೆ ಸಿಗ್ನಲ್ ಸೂಚನೆಗಳು ಕಾಣದ ಕಾರಣ ಅಪಘಾತಗಳು ಸಂಭವಿಸಬಹುದಾಗಿದ್ದು ಶೀಘ್ರದಲ್ಲೇ ಸಿಗ್ನಲ್ ವ್ಯವಸ್ಥೆಯಲ್ಲಿ ಬೀಪ್ ಸೌಂಡ್ ವ್ಯವಸ್ಥೆ ಮಾಡುವಂತೆ ಕೋರಿದರು.
ಎಸ್ಪಿ ಹನುಮಂತರಾಯ, ಸ್ಮಾರ್ಟ್ ಸಿಟಿ ವತಿಯಿಂದ ಸಿಗ್ನಲ್ ಜಂಕ್ಷನ್ ಸುಧಾರಣೆ ಕೆಲಸ ಆಗುತ್ತಿದ್ದು, ಅಂಧರಿಗಾಗಿ ಸಿಗ್ನಲ್ ಬೀಪ್ ಸೌಂಡ್ ವ್ಯವಸ್ಥೆಯನ್ನು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಶೇ.5 ರ ಅನುದಾನದಡಿ ಕೆಲವೇ ಅಂಗವಿಕಲರಿಗೆ ಸೌಲಭ್ಯ ನೀಡುತ್ತಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಕ್ರಿಯಾ ಯೋಜನೆಗೂ ಮುನ್ನ ಬೇಡಿಕೆ ಸಮೀಕ್ಷೆ ನಡೆಸಿ ಕ್ರಿಯಾ ಯೋಜನೆ ತಯಾರಿಸಲಾಗುವುದು. ಇನ್ನು ಪಂಚಾಯ್ತಿಗಳಿಗೆ ವಿಆರ್ಡಬ್ಲ್ಯುಗಳಿಗೆ ಕೆಲಸ ಮಾಡಲು ಅನುಕೂಲವಾಗುವಂತೆ ಒಂದು ಆಸನ ವ್ಯವಸ್ಥೆ ಕೇಳಿದ್ದು, ಅದಕ್ಕೆ ವ್ಯವಸ್ಥೆ ಮಾಡಲಾಗುವುದು. ಸೌಲಭ್ಯ ನಿರ್ವಹಣೆಗೆ ಸೋಷಿಯಲ್ ಆಡಿಟ್ ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಕ್ರಮ ವಹಿಸಲಾಗುವುದು. ಜೊತೆಗೆ ಸಮನ್ವಯ ಶಿಕ್ಷಣಕ್ಕೆ ಒತ್ತು ಕೊಟ್ಟು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮದಲ್ಲಿ ವಿಶೇಷಚೇತನ ಮಕ್ಕಳಿಗೆ ವಿಶೇಷ ಅವಕಾಶ ಕಲ್ಪಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಶಶಿಧರ್ ಇಲಾಖೆ ವತಿಯಿಂದ ವಿಶೇಷಚೇತನರಿಗೆ ನೀಡಲಾಗುತ್ತಿರುವ ಸೌಲಭ್ಯದ ಬಗ್ಗೆ ವಿವರಿಸಿದರು. ಸಭೆಯಲ್ಲಿ ವಿನಾಯಕ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಹೆಚ್.ವಿ.ಗೋಪಾಲಪ್ಪ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ರ ಜಿಲ್ಲಾ ಮಟ್ಟದ ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

