
ಕಳೆದ ವಾರದ ಅಂಕಣದಲ್ಲಿ ಜಾತಿ,ಮೀಸಲಾತಿ, ಮತಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು “ಸರ್ವಸಂಗ ಪರಿತ್ಯಾಗಿ ಕಾವಿಧಾರಿ”ಗಳ ಬಗ್ಗೆ ಬರೆದಿದ್ದೆ. ಅದರ ಮುಂದುವರಿದ ಭಾಗವಾಗಿ ಇಂದು ಖಾದಿದಾರರ ಬಗ್ಗೆ ಒಂದಿಷ್ಟು ಬರೆಯುವ ಇಂಗಿತ ನನ್ನದು.

ಪ್ರಜಾತಂತ್ರ ವ್ಯವಸ್ಥೆಯ ಪ್ರಮುಖ ಭಾಗ ಚುನಾವಣೆ. ಈ ಚುನಾವಣೆಗಳಲ್ಲಿ ಐದು ವರ್ಷಗಳಿಗೊಮ್ಮೆ ನಮ್ಮೂರಿನ/ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಒಂದು ಸಮರ್ಥ ನಾಯಕತ್ವವನ್ನು ಆಯ್ಕೆ ಮಾಡುವ ಮಹತ್ತರ ಅವಕಾಶ ನಮಗೆ/ಪ್ರಜೆಗಳಿಗೆ ಒದಗಿ ಬರುತ್ತದೆ. ಹಾಗೆ ಆಯ್ಕೆ ಆಗುವ ನಾಯಕನನ್ನು ಸಾಂವಿಧಾನಿಕವಾಗಿ
“ಜನಪ್ರತಿನಿಧಿ” ಎನ್ನಲಾಗುತ್ತದೆ. ನಮ್ಮ ಸಹಜವಾಚನದಲ್ಲಿ “ರಾಜಕಾರಣಿ” ಎನ್ನುತ್ತೇವೆ. ಸಹಜವಾಗಿ ಚುನಾವಣೆಯಲ್ಲಿ ಚುನಾಯಿತರಾದ ಜನಪ್ರತಿನಿಧಿಗಳು “ಸಂವಿಧಾನದ ಆಶಯಗಳಿಗೆ ತಕ್ಕಂತೆ ಜಾತಿ ಬೇಧವಿಲ್ಲದೆ ಸರ್ವರ ಏಳಿಗೆಗಾಗಿ ಶ್ರಮಿಸುತ್ತೇವೆ ಎಂದು ಅಂತಃಕರಣವನ್ನು ಸಾಕ್ಷಿಯಾಗಿರಿಸಿ ಪ್ರಮಾಣ ಮಾಡುತ್ತಾರೆ”.
ಆದರೆ ವಾಸ್ತವವಾಗಿ ಯಾವ ರಾಜಕಾರಣಿಯೂ ಸಹ ಶೇಕಡಾ ನೂರರಷ್ಟು ನುಡಿದಂತೆಯೇ ನಡೆಯುವುದಿಲ್ಲ, ನಡೆಯಲಾಗುವುದೂ ಇಲ್ಲ.
ಯಾಕೆಂದರೆ, ನಮ್ಮ ಈಗಿನ ವ್ಯವಸ್ಥೆಯೇ ಹಾಗಿದೆ. ಸಂವಿಧಾನ ಶಿಲ್ಪಿಯ ಆಶಯಗಳು ಎಲ್ಲಿಯೂ ಒಂದಂಶವೂ ಸಾಕಾರವಾಗದಂತೆ ತಡೆಹಿಡಿಯುವಲ್ಲಿ ವರ್ತಮಾನದ ರಾಜಕೀಯ ವ್ಯವಸ್ಥೆ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಜಾತಿ ಗೀತಿಗಳ ಮೀರಿ ಸರ್ವ ಜನಜೀವನ ಉತ್ತಮಗೊಳಿಸುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸುವ ರಾಜಕಾರಣಿಗಳು ಅದೇ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚಿ ಅದೇ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುತ್ತಾರೆ. ಇದರಲ್ಲಿ ಆಡಳಿತ, ವಿರೋಧ ಪಕ್ಷಗಳೆಂಬ ಯಾವ ವ್ಯತ್ಯಾಸವೂ ಇಲ್ಲ. ಬೇರಿನಿಂದ ಚಿಗುರಿನವರೆಗೂ ಎಲ್ಲಾ ಕ್ಷೇತ್ರಗಳಲ್ಲೂ ಸೇರಿದಂತೆ ಇಡೀ ಆಡಳಿತ ವ್ಯವಸ್ಥೆಯಲ್ಲಿ ” ಜಾತಿ” ಎಂಬ ವಿಷವರ್ತುಲ ಅಧಿಕೃತವಾಗಿ ಸುತ್ತಿಕೊಂಡಿದೆ. ಮಹಾಮಾರಿ ಕೋವಿಡ್ ಸಂಕಷ್ಟದಲ್ಲಿ ಉದ್ಯೋಗ, ವ್ಯಾಪಾರಗಳನ್ನು ಕಳೆದುಕೊಂಡ ಅನೇಕ ಮಧ್ಯಮ ವರ್ಗದ ಎಲ್ಲಾ ಜಾತಿಯ ಕುಟುಂಬಗಳು ತಿನ್ನಲು ತುತ್ತು ಅನ್ನವಿಲ್ಲದೇ ಬೀದಿಯಲ್ಲಿ ನರಳುತ್ತಿರುವಾಗ, ಅದೇ ಎಲ್ಲಾ ಜಾತಿಯ ಜನಗಳಿಂದ ಮತ ಪಡೆದು ಆಯ್ಕೆಯಾಗಿರುವ ಶಾಸಕ,ಸಂಸದರನೇಕರು
(ಮಂತ್ರಿಗಳೂ ಸೇರಿ) ತಮ್ಮ ತಮ್ಮ ಜಾತಿಗಳಿಗೆ ಮೀಸಲಾತಿ ಗಿಟ್ಟಿಸಿಕೊಳ್ಳುವಲ್ಲಿ busy ಆಗಿದ್ದಾರೆ. ಜಾತಿಗಳಿಗೆ ಮೀಸಲಾತಿ ಕೇಳುವ ಬದಲಾಗಿ ಜಾತಿ ಬೇಧವಿಲ್ಲದೆ ತುತ್ತು ಅನ್ನಕ್ಕಾಗಿ ಮೀಸಲಾತಿಗೆ ಬೇಡಿಕೆ ಇಟ್ಟಿದ್ದರೆ, ಇದೇ ಜನಪ್ರತಿನಿಧಿಗಳು ಇವತ್ತು ಬಡವರ ಪಾಲಿನ ದೇವತೆಗಳಾಗಿಬಿಡುತ್ತಿದ್ದರು.
ಇಂತಹ ರಾಜಕಾರಣಿಗಳು ಧೈರ್ಯವಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಧೈರ್ಯವಿದ್ದರೆ, “ನಮ್ಮ ಜಾತಿಗೆ ಮೀಸಲಾತಿ ತರುವ ಸಲುವಾಗಿ ಶ್ರಮಿಸುತ್ತಿದ್ದೇನೆ. ನಮ್ಮ ಜಾತಿಯವರು ಮಾತ್ರ ನನಗೆ ಮತ ನೀಡಿ” ಎಂದು ಹೇಳುತ್ತಾರೆಯೇ..!? ಕಾದು ನೋಡೋಣ ಇಂತಿ ನಿಮ್ಮವ..ಜಿ.ಎನ್.ಪ್ರದೀಪ್
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

