
ಬೆಂಗಳೂರು: ದುಷ್ಮನೋಂಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ ಎಂದು ಬಾಲ್ಯದಲ್ಲೇ ಪ್ರತಿಜ್ಞೆ ಮಾಡಿ, ಬ್ರಿಟಿಷರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ, ಪೊಲೀಸರಿಗೆ ಸಿಗದೇ, ಬ್ರಿಟಿಷರಿಗೆ ಸಿಂಹ ಸ್ವಪ್ನರಂತೆ ಕಾಡಿದವರು ಅಜೇಯ ಕ್ರಾಂತಿಕಾರಿ ಚಂದ್ರಶೇಖರ ಆಜಾದ್. ಅಕ್ಷರಶ ಅದನ್ನೇ ಕೊನೆಯತನಕ ಪಾಲಿಸಿದರು.
ಚಂದ್ರಶೇಖರ ಆಜಾದ್ ಅಥವಾ ‘ಆಜಾದ್’ ಎಂಬ ಹೆಸರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಜರಾಮರ. ಭಗತ್ ಸಿಂಗ್ ರನ್ನು ಮಾರ್ಗದರ್ಶಕರನ್ನಾಗಿಸಿಕೊಂಡು ಕ್ರಾಂತಿಕಾರಿಯಾಗಿ ಸ್ವಾತಂತ್ರ್ಯ ಸಂಗ್ರಾಮ ನಡೆಸಿದ ಚಂದ್ರಶೇಖರ ಸೀತಾರಮ್ ತಿವಾರಿ ಅಲಿಯಾಸ್ ಆಜಾದ್ ಅವರ ಸಂಸ್ಮರಣಾ ದಿನವನ್ನು ಪ್ರತಿವರ್ಷ ಫೆಬ್ರವರಿ 27ರಂದು ಆಚರಿಸಲಾಗುತ್ತದೆ.
ಚಂದ್ರಶೇಖರ ಆಜಾದ್ರವರು 23 ಜುಲೈ 1906ರಂದು (ಮಿಥ್ಯಾಕಲ್ಪನೆ :ಉನ್ನಾವೋ ಜಿಲ್ಲೆ – ಬಾದರ್ಕಾ ಉತ್ತರಪ್ರದೇಶ) ಮಧ್ಯಪ್ರದೇಶದ ಝ/ಜಬುವಾ ಜಿಲ್ಲೆಯಲ್ಲಿರುವ ಭಾ/ಭವ್ರಾ ಎಂಬ ಹಳ್ಳಿಯಲ್ಲಿ ಜನಿಸಿದರು.ಅವರ ತಂದೆ ಪಂ.ಸೀತಾರಾಮ್ ತಿವಾರಿಯವರಾಗಿದ್ದರೆ ಜಾಗ್ರಣೀ ದೇವಿಯವರು ಅವರ ತಾಯಿಯಾಗಿದ್ದರು. ಭಾವರಾ ಮತ್ತು ವಾರಾಣಸಿಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ವಿದ್ಯಾರ್ಥಿದೆಸೆಯಲ್ಲಿಯೇ ಮಹಾತ್ಮಾ ಗಾಂಧಿಯವರ ಮೋಡಿಗೊಳಗಾಗಿ ಕಾಂಗ್ರೆಸ್ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
1919ರಲ್ಲಿ ಜಲಿಯಾನ್ ವಾಲಾ ಬಾಗ್ ಹತ್ಯಾಕಾಂಡದ ವಿರುದ್ಧ ಪ್ರತೀಕಾರಕ್ಕೆ ಹಾತೊರೆಯುತ್ತಿದ್ದ ಆಜಾದ್ ಅವರು ಸರ್ಕಾರಿ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಕೋರ್ಟ್ ಕಟಕಟೆ ಏರಿದಾಗ, ತಮ್ಮ ಹೆಸರು ಆಜಾದ್ ಎಂದು ನ್ಯಾಯಾಧೀಶರ ಮುಂದೆ ಘೋಷಿಸಿದರು. ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಎಂಬ ಸಂಘವನ್ನು ಆರಂಭಿಸಿದ ಅಜಾದ್ ಅವರ ಜತೆಗೆ ಭಗತ್ ಸಿಂಗ್, ಸುಖ್ ದೇವ್, ಬಟುಕೇಶ್ವರ್ ದತ್, ರಾಜ್ ಗುರು ಸಾಥ್ ನೀಡಿದರು.
ತಮಗೆ ಸಿಂಹಸ್ವಪ್ನವಾಗಿದ್ದ ಚಂದ್ರಶೇಖರ್ ಆಜಾದ್ರನ್ನು ಪೊಲೀಸರ ವಾಂಟೆಡ್ ಲಿಸ್ಟ್’ನಲ್ಲಿ ಸೇರಿಸಿ ಬ್ರಿಟಿಷರು, ಜೀವಂತವಾಗಿ ಅಥವಾ ಕೊಂದಾದರೂ ಸರಿ ಅವರನ್ನು ಬಂಧಿಸುವ ಕಾರ್ಯಕ್ಕೆ ಕೈ ಹಾಕಿದರು.
1931ರ ಫೆಬ್ರವರಿ 27ರಂದು ಅಲಹಾಬಾದ್ನ ಆಲ್ಫ್ರೆಡ್ ಪಾರ್ಕ್ಗೆ ಆಜಾದ್ ಬರುವ ಸುಳಿವನ್ನು ಪಡೆದ ಬ್ರಿಟಿಷ್ ಪೊಲೀಸರು ಪಾರ್ಕನ್ನು ಸುತ್ತುವರಿದು, ಅಜಾದ್ಗೆ ತಮ್ಮ ವಶವಾಗುವಂತೆ ಎಚ್ಚರಿಸಿದರು. ಆದರೆ, ಬ್ರಿಟೀಷರ ಎಚ್ಚರಿಕೆಗೆ ಮಣಿಯದ ಆಜಾದ್, ವೀರನಂತೆ ಹೋರಾಡಿ ಮೂವರು ಪೊಲೀಸರನ್ನು ಬಲಿ ತೆಗೆದುಕೊಂಡರು.ಏಕಾಂಗಿಯಾಗಿದ್ದರೂ ಎದುರಾಳಿಗಳಿಗೆ ತಕ್ಕ ಉತ್ತರ ನೀಡಿದರು. ಅಜಾದರಿಗೆ ತನ್ನ ಪಿಸ್ತೂಲಿನಲಿದ್ದ ಗುಂಡುಗಳ ಲೆಕ್ಕವಿತ್ತು. ಅಂತಹ ಆತಂಕದ ಪರಿಸ್ಥಿತಿಯಲ್ಲಿಯು ಅವರ ಸಮಯ ಪ್ರಜ್ಞೆ ಕಾರ್ಯ ಪ್ರವೃತವಾಗಿತ್ತು.
ಬಾಲ್ಯದಲ್ಲಿ ತಾನೇ ಹೇಳಿದಂತೆ “ನನ್ನ ಜೀವಂತ ದೇಹದ ಮೇಲೆ ಕೈ ಹಾಕುವ ಪೊಲೀಸ್ ಇನ್ನೂ ಜನ್ಮ ತಾಳಿಲ್ಲ. ಆಜಾದ್ ಹೀ ರಹೇಂಗೆ.. ಆಜಾದ್ ಹೀ ಮರೇಂಗ್” ಎನ್ನುತ್ತ ತನ್ನ ಪಿಸ್ತೂಲಿನಲಿದ್ದ ಕೊನೆಯ ಗುಂಡನ್ನು ತನ್ನ ತಲೆಗೆ ಗುರಿಯಾಗಿಸಿಟ್ಟುಕೊಂಡರು. ಯಾವ ಪರಕೀಯ ಸೈನಿಕನಿಗೂ ಶರಣಾಗದೆ ತಮ್ಮ ತಲೆಗೆ ಗುಂಡು ಹೊಡೆದುಕೊಂಡು ಭಾರತ ಮಾತೆಯ ಮುಡಿಗೆ ತಮ್ಮ ಪ್ರಾಣ ಅರ್ಪಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

