ದೊಡ್ಡಬಳ್ಳಾಪುರ, (ಡಿ.28); ದೇಶ ಸೇವೆಗಾಗಿ ಹುಟ್ಟಿಕೊಂಡಿರುವ ಸೇವಾದಳ ಶಿಸ್ತು, ದೇಶಭಕ್ತಿ, ಸೇವಾ ಮನೋಭಾವ ಮೂಡಿಸಲು ಸಹಕಾರಿಯಾಗಿದ್ದು, ಭಾರತ ಸೇವಾದಳ ಸ್ಥಾಪನೆಯ ಶತಮಾನೋತ್ಸವ ಆಚರಣೆ ಅಂಗವಾಗಿ ಶಾಲೆಗೊಂದು ಸೇವಾದಳ ಶಾಖೆ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಭಾರತ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಲಕ್ಷ್ಮೀಪತಿ ಹೇಳಿದರು.
ಭಾರತ ಸೇವಾದಳದ ಜಿಲ್ಲಾ ಸಮಿತಿ ವತಿಯಿಂದ ನಗರದ ಕೊಂಗಾಡಿಯಪ್ಪ ವಿದ್ಯಾಸಂಸ್ಥೆಯಲ್ಲಿ ನಡೆದ ಭಾರತ ಸೇವಾದಳದ ಶತಮಾನೋತ್ಸವ ಸ್ಮರಣೆ ಮತ್ತು ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರ ಗೀತೆ, ರಾಷ್ಟ್ರ ಧ್ವಜ ಸೇರಿದಂತೆ ರಾಷ್ಟ್ರೀಯ ಐಕ್ಯತೆಯನ್ನು ಬೆಳೆಸುವಲ್ಲಿ ಸೇವಾದಳ ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಕೆಲಸ ಮಾಡುತ್ತಲೇ ಬರುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶಭಕ್ತರನ್ನು ಹುಟ್ಟು ಹಾಕಿದ ಸಂಸ್ಥೆ ಸ್ವಾತಂತ್ರ್ಯ ಚಳುವಳಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರಿಗೆ ಜೊತೆಯಾಗಿದ್ದ ಸಂಸ್ಥೆಯಾಗಿದೆ.
ಭಾರತ ಸೇವಾದಳ ಜಿಲ್ಲಾ ಘಟಕದ ಕಾರ್ಯಾಲಯವನ್ನು ದೇವನಹಳ್ಳಿ ತಾಲೂಕಿನ ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ನಿರ್ಮಿಸಲು ಉದ್ದೇಶಿಸಲಾಗಿದ್ದು, ಪ್ರಕ್ರಿಯೆಗಳು ನಡೆಯುತ್ತಿವೆ. ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸಮಿತಿಯಿಂದ 25 ಲಕ್ಷ ರೂ ನೆರವಿನ ಭರವಸೆ ದೊರೆತಿದೆ. ಭಾರತ ಸೇವಾದಳದ ತತ್ವ ಸಿದ್ದಾಂತಗಳಿಗೆ ಬದ್ದರಾಗಿ, ಸಂಘಟನೆಯನ್ನು ಸದೃಢಗೊಳಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.
ಸೇವಾದಳದ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಜಿ.ಸುರೇಶ್ ಭಾರತ ಸೇವಾದಳ ಇತಿಹಾಸ ಕುರಿತು ಮಾತನಾಡಿ, ಕನ್ನಡಿಗರಾದ ಡಾ.ನಾ.ಸು.ಹರ್ಡಿಕರ್ ಅವರಿಂದ 1923ರಲ್ಲಿ ಸ್ಥಾಪಿತವಾದ ಭಾರತ ಸೇವಾದಳ ಮಹತ್ವದ ಇತಿಹಾಸವನ್ನು ಹೊಂದಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ದೇಶವನ್ನು ಮುನ್ನೆಡೆಸುವ ಶಕ್ತಿ ಇರುವುದು ಎನ್ನುವುದನ್ನು ಮನಗಂಡ ಅವರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಕೇಂದ್ರೀಕರಿಸಿ, ಸಂಘಟನೆಯನ್ನು ಬಲಗೊಳಿಸಿದರು.
ಭಾರತ ಸೇವಾದಳವನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಟ್ಟಿ ಬೆಳೆಸುವ ಮೂಲಕ ಯುವ ಸಮುದಾಯದಲ್ಲಿ ರಾಷ್ಟ್ರ ಪ್ರೇಮ ಬೆಳೆಯುವಂತೆ ಮಾಡುವಲ್ಲಿ ನಾ.ಸು.ಹರ್ಡಿಕರ್ ಅವರೊಂದಿಗೆ ದೊಡ್ಡಬಳ್ಳಾಪುರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಟಿ.ಎಸ್.ಸಿದ್ದಲಿಂಗಯ್ಯ, ರುಮಾಲೆ ಚನ್ನಬಸವಯ್ಯ, ಮುಗುವಾಳಪ್ಪ ಅವರ ಸೇವೆ ಸ್ಮರಣೀಯವಾಗಿದೆ.
ಭಾರತ ಸೇವಾದಳ ನಮ್ಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲಿದೆ. ಭಾರತ ಸೇವಾದಳಕ್ಕೆ ಶಿಕ್ಷಕರೇ ಅಡಿಗಲ್ಲಾಗಿದ್ದು, ಅದನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆಯನ್ನು ಹೊರಬೇಕು. ಸೇವಾದಳ ಸಮಿತಿಯು ಹಲವಾರು ಶಿಬಿರಗಳನ್ನು ಆಯೋಜಿಸುವ ಮೂಲಕ ಸಕ್ರಿಯವಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಮಿತಿ ಸದೃಢವಾಗಲಿದೆ ಎಂದರು.
ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯ ನಿಸ್ವಾರ್ಥ ಸೇವೆಯಂತಹ ಉದಾತ್ತ ಗುಣಗಳನ್ನು ಮೂಡಿಸುತ್ತಿರುವ ಭಾರತ ಸೇವಾದಳ ಕಾರ್ಯ ಶ್ಲಾಘನೀಯ ಎಂದರು.
ಕೊಂಗಾಡಿಯಪ್ಪ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ರಾಮಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕೊಂಗಾಡಿಯಪ್ಪ ವಿದ್ಯಾಸಂಸ್ಥೆಯ ಗೌ.ಕಾರ್ಯದರ್ಶಿ ಎಸ್.ಪ್ರಕಾಶ್, ಉಪಾಧ್ಯಕ್ಷ ಎಸ್.ಪ್ರಕಾಶ್, ನಿರ್ದೇಶಕ ರಮೇಶ್, ಕೊಂಗಾಡಿಯಪ್ಪ ಪ.ಪೂ.ಕಾಲೇಜಿನ ಪ್ರಾಂಶುಪಾಲ ಎನ್.ಆನಂದ ಮೂರ್ತಿ, ಭಾರತ ಸೇವಾದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ,ಸಂಚಾಲಕ ರಾಜು, ಶಾಖಾ ನಾಯಕ ಎಸ್.ಬೋರಪ್ಪ, ಜಿಲ್ಲಾ ನಿರ್ದೇಶಕರಾದ ಕೆಂಪೇಗೌಡ, ಬೊಮ್ಮಕ್ಕ, ಟಿ.ಕೆ.ಸಾವಿತ್ರಮ್ಮ, ಎಂ.ಮುನಿರಾಜು, ಎಸ್.ಪಿ. ವೆಂಕಟಾಚಲಯ್ಯ, ಪರಮೇಶ್ವರಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಹಮಾಮ್ ವೆಂಕಟೇಶ್, ನಿರ್ದೇಶಕ ಜ್ಯೋತಿ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….