ಬೆಂಗಳೂರು, (ಆಗಸ್ಟ್ 28): ಪತ್ನಿಯನ್ನು ಕೊಲೆ ಮಾಡಿ, ಆಕೆಯನ್ನು ಯಾರೋ ಹತ್ಯೆ ಮಾಡಿದ್ದಾರೆ ಎಂದು ನಾಟಕವಾಡುತ್ತಿದ್ದ ಪತಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಮೂಲದ ಮೆಹಬೂಬ್ ಪಾಷಾ (50) ಬಂಧಿತ ಆರೋಪಿಯಾಗಿದ್ದು, ಪತ್ನಿ ಮುಮ್ತಾಜ್ ಎಂಬಾಕೆಯನ್ನು ಕಬ್ಬಿಣದ ವಸ್ತುವಿನಿಂದ ಹೊಡೆದು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ಬಂಧಿತನಿಗೆ ಇಬ್ಬರು ಪತ್ನಿಯರಿದ್ದು, ಕೂಲಿ ಕೆಲಸ ಮಾಡಿಕೊಂಡು ತನ್ನ ಎರಡನೇ ಪತ್ನಿ ಮುಮ್ತಾಜ್ ಜೊತೆ ಬಾಗಲೂರಿನ ರಜಾಕ್ ಸಾಬ್ ಪಾಳ್ಯದಲ್ಲಿ ವಾಸವಿದ್ದನಂತೆ.
ಆಗಸ್ಟ್ 25ರಂದು ಬಾಗಲೂರು ಪೊಲೀಸ್ ಠಾಣೆಗೆ ಬಂದಿದ್ದ ಆರೋಪಿ, ಆಗಸ್ಟ್ 24ರಂದು ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮದ ನಿಮಿತ್ತ ನಾನು ಕೋಲಾರಕ್ಕೆ ಹೋಗಿದ್ದೆ. ಪತ್ನಿಗೆ ಕರೆ ಮಾಡಿದಾಗ ಆಕೆ ಸ್ವೀಕರಿಸಲಿಲ್ಲ. ಬೆಳಗ್ಗೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿಯೂ ಇರಲಿಲ್ಲ. ನಾನು ಕೆಲಸ ಮಾಡುತ್ತಿದ್ದ ಸೀಬೆ ತೋಟದಲ್ಲಿ ಯಾರೋ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ದೂರು ನೀಡಿದ್ದ.
ತನಿಖೆ ನಡೆಸಿದ ಪೊಲೀಸರು, ಆರೋಪಿಯ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬಯಲಾಗಿದೆ.
ಪತ್ನಿಯ ಮೇಲೆ ಅನುಮಾನ ಹೊಂದಿದ್ದ ಆರೋಪಿ ಆಗಸ್ಟ್ 24ರಂದು ಆಕೆಯನ್ನು ತಾನು ಕೆಲಸ ಮಾಡುತ್ತಿದ್ದ ಸೀಬೆ ತೋಟಕ್ಕೆ ಕರೆದೊಯ್ದು ಕಬ್ಬಿಣದ ವಸ್ತುವಿನಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನಂತೆ
ಬಳಿಕ ಆಕೆಯ ಶವವನ್ನು ಅಲ್ಲಿಯೇ ಬಿಟ್ಟು ರಾತ್ರಿಯಿಡಿ ಮನೆಗೆ ಹೋಗದೇ ಹೊರಗಡೆಯೇ ಉಳಿದಿದ್ದ. ಬೆಳಗ್ಗೆ ಮನೆಗೆ ತೆರಳಿ, ಏರಿಯಾದಲ್ಲಿ ಯಾರಿಗೂ ಅನುಮಾನ ಬಾರದಂತೆ ತಾನೇ ಬಂದು ದೂರು ನೀಡಿದ್ದ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….