ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವ ಯಶಸ್ವಿಯಾಗಿ ಮುಗಿಸಿಕೊಟ್ಟ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ತಂಡ ನಾಡಿನಿಂದ ಕಾಡಿನತ್ತ ಹೊರಟಿದ್ದು, ದಸರಾ ಆನೆಗಳ ಈ ಬೀಳ್ಕೊಡುಗೆಯು ಇಂದು ಹೃದಯಸ್ಪರ್ಶಿ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ಅರಮನೆ ಅಂಗಳದಲ್ಲಿ ಕ್ಯಾಪ್ಟನ್ ಅಭಿಮನ್ಯು ತಂಡದ 14 ಆನೆಗಳಿಗೆ ಅರ್ಚಕ ಪ್ರಹ್ಲಾದ್ ರಾವ್ ಅವರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು.
ಅರಮನೆ ಅಂಗಳದಲ್ಲಿ ಎಲ್ಲಾ ಆನೆಗಳನ್ನು ಸಾಲಾಗಿ ನಿಲ್ಲಿಸಿ ಪೂಜೆ ಸಲ್ಲಿಸಿ ಬಳಿಕ ಅವುಗಳಿಗೆ ಪ್ರಿಯವಾದ ಬೆಲ್ಲ, ಕಬ್ಬು ತೆಂಗು, ಬಾಳೆಹಣ್ಣು ನೀಡಿ ಸತ್ಕಾರ ಮಾಡಲಾಯಿತು.
ದಸರಾ ಗಜಪಡೆಗೆ ಬೀಳ್ಕೊಡುಗೆ ಸಮಾರಂಭ #MysuruDasara2024 pic.twitter.com/azskPJ3EkZ
— ರವಿ ಕೀರ್ತಿ ಗೌಡ (@ravikeerthi22) October 14, 2024
ಪೂಜೆಯ ಬಳಿಕ ಕ್ಯಾಪ್ಟನ್ ಅಭಿಮನ್ಯು ಟೀಂ ಲಾರಿಗಳ ಮೂಲಕ ಸ್ವಸ್ಥಾನದತ್ತ ತೆರಳಲು ಸಿದ್ಧವಾದವು. ಈ ವೇಳೆ ಏಕಲವ್ಯ ಎಂಬ ಆನೆ ಲಾರಿಯನ್ನೇರಲು ಕೊಂಚ ಪ್ರತಿರೋಧ ತೋರಿದನು. ಬಳಿಕ ಮಾವುತರು, ಕಾವಾಡಿಗರು ಏಕಲವ್ಯನನ್ನು ಸಂತೈಸಿ ಲಾರಿಯನ್ನೇರಿಸುವಲ್ಲಿ ಯಶಸ್ವಿಯಾದರು.
ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ದಸರಾ ಗಜಪಡೆಯು ವಿವಿಧ ಆನೆ ಶಿಬಿರಗಳತ್ತ ಸಾಗಿದವು. ಅಭಿಮನ್ಯು ನೇತೃತ್ವದ ಗಜಪಡೆಯನ್ನು ಬೀಳ್ಕೊಡಲು ಕಿಕ್ಕಿರಿದು ಜನ ಸೇರಿತ್ತು.
ಸೊಂಡಿಲನ್ನೆತ್ತಿ ಸನ್ನೆ ಮಾಡುವ ಮೂಲಕ ನಾಡಿನಿಂದ ಕಾಡಿನತ್ತ ಗಜಪಡೆ ಹೊರಟಿತ್ತು. ಆನೆಗಳ ಜೊತೆ ಮಾವುತರು ಕಾವಾಡಿಗರು ಹಾಗೂ ಕುಟುಂಬ ವರ್ಗ ಆನೆ ಶಿಬಿರಗಳತ್ತ ಪಯಣ ಬೆಳೆಸಿದವು.
ಒಟ್ಟಿನಲ್ಲಿ ಈ ದಸರಾ ಆನೆಗಳ ಬೀಳ್ಕೊಡುಗೆ ಕಾರ್ಯಕ್ರಮವು ಇಂದು ಹೃದಯಸ್ಪರ್ಶಿ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ಕಳೆದ ಒಂದೂವರೆ ಗಜಪಡೆ ತಿಂಗಳಿಂದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿತ್ತು. ಜಂಬೂಸವಾರಿ ಮೆರವಣಿಗೆಯಲ್ಲಿ ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದವು.
ಜಂಬೂಸವಾರಿ ಮೆರವಣಿಗೆ ಮುಗಿದ ಎರಡು ದಿನಗಳ ಬಳಿಕ ಸ್ವಸ್ಥಾನದತ್ತ ಗಜಪಡೆ ಹೊರಟಿದೆ. ಈ ವೇಳೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.