ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಇಂದು ವಿರುಪಾಕ್ಷಿಪುರ, ಮುಂಗಾಡಹಳ್ಳಿ, ಶ್ರೀನಿವಾಸಪುರ, ಬಲ್ಲಾಪಟ್ಟಣ, ಕಲರಹಳ್ಳಿ, ಅಂಚೀಪುರ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿದರು.ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಪಟಾಕಿ ಸಿಡಿಸಿ, ಹೂವಿನ ಸುರಿಮಳೆ ಸುರಿಸಿ ಅದ್ದೂರಿ ಸ್ವಾಗತಕೋರಿದರು
ಬೆಳಗ್ಗೆಯಿಂದಲೇ ಪ್ರಚಾರದಲ್ಲಿ ತೊಡಗಿದ ಅವರು; ಚನ್ನಪಟ್ಟಣದ ಕ್ಷೇತ್ರದ ವಿರುಪಾಕ್ಷಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಮನೆಗಳಿಗೆ ಭೇಟಿ ನೀಡಿ ಪ್ರಚಾರ ಮಾಡಿದರು.ಶ್ರೀನಿವಾಸಪುರ ಗ್ರಾಮದಲ್ಲಿ ಗ್ರಾಮಸ್ಥರ ಸಮಸ್ಯೆ ಆಲಿಸಿ ಪರಿಹಾರ ಕೊಡಿಸುತ್ತೇನೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ಅವರು, ಬಿಜೆಪಿ-ಜೆಡಿಎಸ್ ಮೊದಲನೇ ಬಾರಿ ಸಮ್ಮಿಶ್ರ ಸರ್ಕಾರ ಮಾಡಿತ್ತು. ಆಗ ಸಾರಾಯಿ, ಲಾಟರಿ ನಿಷೇಧ ಮಾಡಿದ್ರು. ಮಹಿಳೆಯರ ಗೌರವ ಉಳಿಸುವ ಕೆಲಸ ಮಾಡಿದ್ದರು ಈಗ ಆನ್ಲೈನ್ ಗೇಮಿಂಗ್ ಗೆ ಯುವಕರು ಬಲಿ ಆಗ್ತಿದ್ದಾರೆ.
ಅದರ ಮೇಲೆ ಹಾಕಿರೋ ಹಣ ವಾಪಸ್ಸ್ ಬರದಿದ್ದಾಗ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇದನ್ನ ನಿಲ್ಲಿಸುತ್ತೇನೆ. ನನಗೆ ಒಂದು ಅವಕಾಶ ಕೊಡಿ ಇದಕ್ಕೆ ಕಡಿವಾಣ ಹಾಕ್ತೇನೆ ಎಂದು ಮಹಿಳೆಯರರಿಗೆ ನಿಖಿಲ್ ಅವರು ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರ ಒಬ್ಬರಿಗೆ ಕೊಟ್ಟು ಇನ್ನೊಬ್ಬರ ಬಳಿ ಕಿತ್ತುಕೊಳ್ಳುತ್ತಿದೆ. ಸರ್ಕಾರ ಮಹಿಳೆಯರಿಗೆ ಎರಡು ಸಾವಿರ ಕೊಟ್ಟು, ಮದ್ಯದ ದರ ಏರಿಕೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಚನ್ನಪಟ್ಟಣದಲ್ಲಿ ನನ್ನ ಸ್ಪರ್ಧೆ ಅನಿರೀಕ್ಷಿತ. ಕ್ಷೇತ್ರದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧಿಸಿದ್ದೇನೆ ನಿಮ್ಮ ಆಶೀರ್ವಾದ ಬೆಂಬಲ ಇರಲಿ ಎಂದರು.
ಪ್ರತಿ ಹಳ್ಳಿಯಲ್ಲೂ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ
ಈಗಾಗಲೇ 110 ಹಳ್ಖಿಗಳಿಗೆ ಭೇಟಿ ನೀಡಿದ್ದೇನೆ.ಎಲ್ಲಾ ಕಡೆ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಕೆಲಸ ಮಾಡ್ತವ್ರೆ. ಮಂಡ್ಯ ಮತ್ತು ರಾಮನಗರದ ಮಧ್ಯ ಭಾಗದಲ್ಲಿ ಕಾರ್ಖಾನೆ ನಿರ್ಮಾಣಕ್ಕೆ ಸಿದ್ಧತೆ ಮಾಡ್ತಿದ್ದೇವೆ. ಕುಮಾರಸ್ವಾಮಿ ಅವರು ನರೇಂದ್ರ ಮೋದಿಯವರ ಸಂಪರ್ಕ ಮಾಡಿ ಚರ್ಚೆ ಮಾಡಿದ್ದಾರೆ. ನಿರುದ್ಯೋಗ ಸಮಸ್ಯೆಗೆ ಪರಿಹಾರ ಕೊಡುವ ಕೆಲಸ ಆಗುತ್ತೆ ಎಂದು ನಿಖಿಲ್ ಅವರು ಭರವಸೆ ನೀಡಿದರು.
ಪ್ರಚಾರ ಇಲ್ಲದೆ ಕೆಲಸ ಮಾಡಿದ್ದೇವೆ
ಚನ್ನಪಟ್ಟಣಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ತಿಳಿಸಿದರು. ಕಳೆದ 40 ವರ್ಷದಿಂದ ಈ ಭಾಗದಲ್ಲಿ ದೇವೇಗೌಡರು ಜನರ ಸಂಪರ್ಕ ಹೊಂದಿದ್ದಾರೆ.ನೀರಾವರಿ ಯೋಜನೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈಗ ಬಂದು ಪಾಪ ಯಾರೋ ನಾನು ಭಗೀರಥ ಅಂತ ಹೇಳ್ಕೊಂಡು ಓಡಾಡ್ತವ್ರೆ. ನಾವು ಪ್ರಚಾರ ತೆಗೆದುಕೊಳ್ಳದೇ ಆತ್ಮಸಾಕ್ಷಿಗೆ ಕೆಲಸ ಮಾಡಿದ್ದೇವೆ ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಕೂಪನ್ ಕಾರ್ಡ್ ಹಂಚಿ ಸೋಲಿಸಿದ್ರು
ರಾಮನಗರದಲ್ಲಿ ಕೂಪನ್ ಕಾರ್ಡ್ ಹಂಚಿ ನನ್ನ ಸೋಲಿಸಿದ್ರು. ರಾತ್ರೋರಾತ್ರಿ ಎಲ್ಲರ ಮನೆಮನೆಗೆ ಹಂಚಿದ್ರು. ಆದರೆ ಕೂಪನ್ ಗೆ ಬೆಲೆ ಇಲ್ಲ, ಯಾರಿಗೂ ಅನುಕೂಲ ಆಗಲಿಲ್ಲ. ಹಾಗಾಗಿ ಇದರ ಬಗ್ಗೆ ಜನ ಎಚ್ಚರಿಕೆ ವಹಿಸಬೇಕು.
ಎರಡು ಬಾರಿ ಪೆಟ್ಟು ತಿಂದಿದ್ದೇನೆ, ನನ್ನ ಸೋಲಿಗೆ ಕಾಂಗ್ರೆಸ್ ಕಾರಣ. ಇಲ್ಲಿ ಕರೆತಂದು ಕುತ್ತಿಗೆ ಕೂಯ್ದರು.
2019ರಲ್ಲಿ ಅವರಿಗೆ ಯಾವರೀತಿ ನಾವು ಬೆಂಬಲ ಕೊಟ್ಟಿದ್ದೆವು ನೆನಸಿಕೊಳ್ಳಿ ಎಂದು ಡಿಕೆ ಸುರೇಶ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು..
ಕುಮಾರಸ್ವಾಮಿಯವರು ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ದೇವೇಗೌಡರು ಇಗ್ಗಲೂರು ಜಲಾಶಯ ನಿರ್ಮಾಣ ಮಾಡಿದ್ದಾರೆ. ತಾಲೂಕಿನ ನೀರಾವರಿ ಯೋಜನೆಗೆ ಅವರ ಕೊಡುಗೆ ಶಾಶ್ವತವಾಗಿದೆ. ನೀರಾ ಚಳುವಳಿ ವೇಳೆ ದೇವೇಗೌಡರು ಚನ್ನಪಟ್ಟಣದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಮಾಡಿದ್ದರು ಎಂದರು ಅವರು.
ಮಂಡ್ಯ ಹಾಗೂ ರಾಮನಗರದಲ್ಲಿ ಈಗಾಗಲೇ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ಒಬ್ಬ ಯುವಕನಾಗಿ, ಯುವಕರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಅದಕ್ಕೆ ಕ್ಷೇತ್ರದ ಜನ ಅವಕಾಶ ಮಾಡಿಕೊಡಿ ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
ಶಾಸಕ ಎಸ್ ಆರ್ ವಿಶ್ವನಾಥ್, ಮಾಜಿ ಶಾಸಕ, ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷ ಜಯಮುತ್ತು, ಇಂಡವಾಳು ಸಚ್ಚಿದಾನಂದ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ.ಟಿ ಶ್ರೀಕಂಠೇಗೌಡ ಸೇರಿದಂತೆ ಬಿಜೆಪಿ ಜಿಲ್ಲಾಧ್ಯಕ್ಷ ಆನಂದ್ ಸ್ವಾಮಿ ಸೇರಿದಂತೆ ಅನೇಕ ನಾಯಕರು ನಿಖಿಲ್ ಅವರ ಜತೆಯಲ್ಲಿ ಇದ್ದರು.