ಚನ್ನಪಟ್ಟಣ: ಉಪ ಚುನಾವಣೆಯ (channapatna by election) ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಅವರ ಧರ್ಮಪತ್ನಿ ರೇವತಿ ಕುಮಾರಸ್ವಾಮಿ ಅವರು ಪಟ್ಟಣದಲ್ಲಿ ಪ್ರಚಾರ ನಡೆಸಿದರು.
ಸೋಮವಾರ ಬೆಳಗ್ಗೆ 9 ಗಂಟೆಗೆ ಪಟ್ಟಣದ ಬಸ್ ನಿಲ್ದಾಣ ಹಾಗೂ ಪದವಿ ಕಾಲೇಜಿನ ಸಮೀಪ ಅವರು ನಿಖಿಲ್ ಅವರ ಪರವಾಗಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳು, ಪಟ್ಟಣದ ಸಾರ್ವಜನಿಕರನ್ನು ಭೇಟಿಯಾದ ರೇವತಿ ಅವರು, ಕರಪತ್ರಗಳನ್ನು ನೀಡಿ ಎನ್ ಡಿಎ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿದರು. ವಿದ್ಯಾರ್ಥಿಗಳು ರೇವತಿಯವರ ಜೊತೆಗೆ ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು. ಎಲ್ಲರನ್ನೂ ಅತ್ಯಂತ ಆತ್ಮೀಯತೆಯಿಂದ ಮಾತನಾಡಿಸಿದ ಅವರು, ಅವರ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದುಕೊಂಡು ಅವರ ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು.
ರೇವತಿ ಅವರ ಸರಳತೆ ಕಂಡು ವಿದ್ಯಾರ್ಥಿಗಳು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ನಿಖಿಲ್ ಅವರು ಗೆದ್ದೆ ಗೆಲ್ಲುತ್ತಾರೆ
ಈ ವೇಳೆ ಪದವಿ ವಿದ್ಯಾರ್ಥಿನಿಯೊಬ್ಬರು, ಈ ಚುನಾವಣೆಯಲ್ಲಿ ನಿಖಿಲ್ ಅಣ್ಣನ ಗೆಲುವು ಶತಸಿದ್ಧ. ಅಣ್ಣ ಚನ್ನಪಟ್ಟಣ ಕ್ಷೇತ್ರದಿಂದ ಶಾಸಕರಾಗಿ ವಿಧಾನಸಭೆಗೆ ಹೋಗುತ್ತಾರೆ. ಯಾವುದೇ ಭಯಬೇಡ, ಇಡೀ ಯುವ ಸಮುದಾಯ ನಿಖಿಲ್ ಅಣ್ಣನ ಬೆನ್ನಿಗೆ ಇದೆ ಎಂದು ಭರವಸೆ ನೀಡಿದರು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಪ್ರೀತಿ ಹಾಗೂ ವಿಶ್ವಾಸಕ್ಕೆ ರೇವತಿ ಅವರು ಸಂತಸ ವ್ಯಕ್ತಪಡಿಸಿದರು. ರೇವತಿ ಅವರೊಂದಿಗೆ ರಾಜ್ಯ ಮಹಿಳಾ ಜನತಾದಳ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಹಾಗೂ ಜೆಡಿಎಸ್ ಮಹಿಳಾ ಘಟಕದ ಅನೇಕ ನಾಯಕರು ಜತೆಯಲ್ಲಿ ಇದ್ದರು.