ಬೆಂಗಳೂರು: ನಗರದ ಹೊರವಲಯದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಡಬಲ್ ಮರ್ಡರ್ ಮಾಡಿರುವ ಆರೋಪಿಯನ್ನು ಈ ಹಿಂದೆ ಪ್ರಕರಣ ವೊಂದರಲ್ಲಿ ಕನ್ನಡ ಚಿತ್ರರಂಗದ ನಟ ದುನಿಯಾ ವಿಜಯ್ (Duniya vijay) ಜೈಲಿಂದ ಬಿಡಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
ಆದರೆ, ದುನಿಯಾ ವಿಜಿ ಅವರ ಆಶಯವನ್ನು ಕೊಲೆ ಪಾತಕಿ ವ್ಯರ್ಥ ಮಾಡಿದ್ದಾನೆ. ಜೈಲಿಂದ ಬಿಡುಗಡೆ ಬಳಿಕ ಮಾರ್ಕೆಟ್ನಲ್ಲಿ ಕೊತ್ತಂಬರಿ ಸೊಪ್ಪು ಮಾರಾಟ ಮಾಡಿ ಸುರೇಶ್ ಜೀವನ ಸಾಗಿಸುತ್ತಿದ್ದ.
ಸುರೇಶ್ ಸಂಬಂಧಿಯಿಂದ ಶೆಡ್ನಲ್ಲಿ ಕೆಲಸ ಪಡೆದುಕೊಂಡಿದ್ದ. ಗುಜರಿ ಮಾರುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಕೊಲೆಯಾದ ನಾಗೇಶ್ ಮತ್ತು ಮಂಜುನಾಥ್, ನೀನು ಕಳ್ಳ, ಕೊಲೆಗಾರ ಅಂತಾ ಹೀಯಾಳಿಸಿದ್ದರು. ಹೀಗಾಗಿ, ಈಚೆಗೆ ಇಬ್ಬರನ್ನೂ ಆರೋಪಿ ಸುರೇಶ್ ಕೊಲೆ ಮಾಡಿದ್ದ. ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಾಗಲೂರು ಡಬಲ್ ಮರ್ಡರ್ ಆರೋಪಿ ಸುರೇಶ್ಗೆ ಈ ಹಿಂದೆ ಪ್ರಕರಣವೊಂದರಲ್ಲಿ ಶೂರಿಟಿ ಹಣ ನೀಡಿ ದುನಿಯಾ ವಿಜಯ್ ಬಿಡಿಸಿದ್ದರು.
ಈ ಹಿಂದೆ ಡಬಲ್ ಮರ್ಡರ್ ಪ್ರಕರಣ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸುರೇಶ್ ಜೈಲು ಸೇರಿದ್ದ. ಹಣ ಕಟ್ಟಲಾಗದ ಅಪರಾಧಿಗಳಿಗೆ ತಲಾ ಮೂರು ಲಕ್ಷದಂತೆ ಶೂರಿಟಿ ಹಣವನ್ನು ನಟ ವಿಜಯ್ ಕಟ್ಟಿದ್ದರು.
ಈ ವೇಳೆ ಸುರೇಶ್ಗೂ ಮೂರು ಲಕ್ಷ ಶೂರಿಟಿ ಹಣ ನೀಡಿ ಜೈಲಿಂದ ಬಿಡುಗಡೆಗೊಳಿಸಿದ್ದರು. ಅಲ್ಲದೆ ಎಲ್ಲರಿಗೂ ಅವರು ಜೈಲಿನಿಂದ ಹೊರಗೆ ಬಂದಾಗ ಹೇಳುತ್ತಿದ್ದ ಮಾತು, ಮತ್ತೆ ತಪ್ಪು ಮಾಡಬೇಡಿ. ಒಳ್ಳೆಯ ಜೀವನ ಕಟ್ಟಿಕೊಳ್ಳಿ, ಒಳ್ಳೆಯದಾಗಲಿ ಎಂದು ಹೇಳುತ್ತಿದ್ದರು ಆದರೆ, ಈ ಆರೋಪಿ ಅವರ ಒಳ್ಳೆಯ ಆಲೋಚನೆಗೆ ಕಪ್ಪು ಮಸಿ ಬಳಿದಂತೆ ಮಾಡಿದ್ದಾನೆ.