ಬೆಂಗಳೂರು (Harithalekhani): ಬಿ.ವೈ.ವಿಜಯೇಂದ್ರ (BY Vijayendra) ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ತೆರವುಗೊಳಿಸಬೇಕೆಂದು ಹೋರಾಟ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್ ( Basana Gouda patila yatnal) ಬಣದಲ್ಲಿ ಗುರುತಿಸಿಕೊಂಡಿದ್ದ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ (GM Siddeshwara) ಹಾಗೂ ಶಾಸಕ ಬಿ.ಪಿ.ಹರೀಶ್ (BP Harish) ಅವರು ಶುಕ್ರವಾರ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರನ್ನ ಭೇಟಿಯಾಗಿ ಚರ್ಚಿಸಿದ್ದಾರೆ.
ಇದು ಮೇಲ್ನೋಟಕ್ಕೆ ಸೌಜನ್ಯದ ಭೇಟಿಯಂತೆ ಕಂಡರೂ ದೂರದೃಷ್ಟಿಯ ಯೋಜನೆಯಂತೆ ಕಾಣುತ್ತಿದೆ ಎಂಬ ಮಾತು ವ್ಯಾಪಕವಾಗಿದೆ.
ಇದೇ ಸಮಯದಲ್ಲಿ ಮುರುಗೇಶ್ ನಿರಾಣಿ ಅವರೂ ಕೂಡ ಡಿಸಿಎಂ ಅವರನ್ನು ಭೇಟಿಯಾಗಿರು ವುದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಕಂಡುಬರುತ್ತಿದೆ.
ಬಿಜೆಪಿಯ ಪ್ರಮುಖ ನಾಯಕರು ಜನಾಕ್ರೋಶ ಯಾತ್ರೆಯಲ್ಲಿರುವಾಗಲೇ ಇತ್ತ ಕೆಪಿಸಿಸಿ ಅಧ್ಯಕ್ಷರನ್ನು ಭಿನ್ನ ಬಣದ ನಾಯಕರು ಭೇಟಿಯಾದ ನಡೆ ಕುತೂಹಲ ಮೂಡಿಸಿದೆ.
ಬಿಜೆಪಿಯ ಬಣ ಬಡಿದಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದರೂ, ಈಗ ಶಾಸಕ ಎಸ್.ಟಿ.ಸೋಮಶೇಖರ್ ಪ್ರತಿಪಕ್ಷದ ನಾಯಕನ ಮೇಲೆಯೇ ತಿರುಗಿ ಬಿದ್ದಿದ್ದು, ಮತ್ತೊಂದು ಸುತ್ತಿನ ಕದನ ಆರಂಭವಾಗಲಿದೆ. ಇದೇ ವೇಳೆ ಕಮಲ ಪಾಳಯದ ಪ್ರಮುಖ ನಾಯಕರು ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡುತ್ತಿ ರುವುದು ಬಿಜೆಪಿಯಲ್ಲಿ ಪೀಕಲಾಟ ಆರಂಭವಾದಂತಿದೆ.
ಬಣ ಬಡಿದಾಟದ ವೇಳೆ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿದ ಅನೇಕ ನಾಯಕರುಗಳಿಗೆ ನೋಟಿಸ್ ಕೂಡ ನೀಡಲಾಗಿತ್ತು. ಒಂದು ಹಂತದಲ್ಲಿ ಭಿನ್ನಮತವಿಲ್ಲ ಎನ್ನುತ್ತಿರುವಾಗ ಬಿಜೆಪಿಯ ಹಿರಿಯ ಶಾಸಕ ಎಸ್.ಟಿ.ಸೋಮಶೇಖರ್ ಈಗ ಪ್ರತಿಪಕ್ಷ ನಾಯಕ ಆರ್.ಅಶೋಕ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ, ತಮ್ಮ ಹಳೆಯ ಪಕ್ಷದ ನಾಯಕರನ್ನು ಹಾಡಿ ಹೊಗಳಿದ್ದಾರೆ.
ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ನಮ್ಮೊಂದಿಗಿಲ್ಲ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ ಹೇಳಿಕೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಎಸ್.ಟಿ.ಸೋಮಶೇಖರ್, ನನ್ನ ವಿರುದ್ಧ ಷಡ್ಯಂತ್ರ ಮಾಡಿರುವುದು ಅಶೋಕ, ಕೇಂದ್ರದ ಶಿಸ್ತು ಸಮಿತಿ ಕೊಟ್ಟ ನೋಟಿಸ್ಗೆ ಉತ್ತರಿಸಲಾಗಿದ್ದು, ಅವರು ಏನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದಿದ್ದಾರೆ.
ಅಲ್ಲದೆ. ಹಿಂದಿನ ಸರಕಾರದಲ್ಲಿ ನಾನು 3 ವರ್ಷ ಮಂತ್ರಿಯಾಗಿದ್ದೆ. ಕಾಂಗ್ರೆಸ್ನಿಂದ ಬಿಜೆಪಿಗೆ ಬಂದಾಗ ನಾನು ಹೇಗಿದ್ದೆ? ಚುನಾವಣೆಯಲ್ಲಿ ನನ್ನ ಸೋಲಿಸುವ ಪ್ರಯತ್ನವಾಯಿತು. ಮೂಲ ಬಿಜೆಪಿಯವರೇ ನನ್ನನ್ನು ಸೋಲಿಸುವ ಪ್ರಯತ್ನ ಮಾಡಿದರು. ಅವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದರೆ ತೆಗೆದುಕೊಂಡಿಲ್ಲ. ಅಶೋಕ ಅವರೇ ನನಗೂ ಮಾತಾಡೋಕೆ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ನಗರದಲ್ಲಿ ಶುಕ್ರವಾರ ನಡೆದ ಕಲಿದೇವ ಕನೆನನ್ ಹಾಲ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸೋಮಶೇಖರ್, ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಮನಸಾರೆ ಕೊಂಡಾಡಿ, ಇವರು ಕರ್ನಾಟಕ ರಾಜಕೀಯದ ದಿಗ್ಗಜರು, ಧೀಮಂತ ನಾಯಕರು ಮಣ್ಣಿನ ಮಕ್ಕಳು, ಕಳು, ಒಗ್ಗಟ್ಟಾಗಿ ಬೆಂಗಳೂರು ಮತ್ತು ಕರ್ನಾಟಕ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹಾಡಿ ಹೊಗಳಿದ್ದು, ಸೋಮಶೇಖರ್ ಅವರ ಮನಸ್ಸು ಬಿಜೆಪಿ ತೊರೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.