ಕಾರವಾರ: ಆಸ್ತಿ ವಿಚಾರಕ್ಕೆ ಮಗಳ ಪತಿಯ ಮನೆಯ ನಾಲ್ವರನ್ನು ಹತ್ಯೆಗೈದಿದ್ದು ( Murder) ಸಾಬೀತಾದ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕು ಹಲ್ಯಾಣಿಯ ವಿನಯ ಭಟ್ಟ (40) ಎಂಬಾತನಿಗೆ ಮರಣ ದಂಡನೆ ಮತ್ತು ಆತನ ತಂದೆ ಶ್ರೀಧರ ಭಟ್ಟ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ 2.10 ಲಕ್ಷ ದಂಡ ವಿಧಿಸಿ ಇಲ್ಲಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
2023ರ ಫೆಬ್ರವರಿ 24ರಂದು ಭಟ್ಕಳ ತಾಲೂಕಿನ ಓಣಿಬಾಗಿಲು ಗ್ರಾಮದ ಕೃಷಿಕ ಶಂಭು ಭಟ್ಟ (70 ವರ್ಷ), ಅವರ ಪತ್ನಿ ಮಾದೇವಿ (60 ವರ್ಷ), ಪುತ್ರ ರಾಘವೇಂದ್ರ ಯಾನೆ ರಾಜು ಭಟ್ (40 ವರ್ಷ) ಹಾಗೂ ಸೊಸೆ ಕುಸುಮಾ (35 ವರ್ಷ) ಎಂಬುವರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು.
ಹತ್ಯೆಯಾದ ಶಂಭು ಭಟ್ಟ ಹಾಗೂ ಅಪರಾಧಿ ಶ್ರೀಧರ ಭಟ್ಟ ಬೀಗರಾಗಿದ್ದು, ಅಪರಾಧಿಯ ಪುತ್ರಿ ವಿದ್ಯಾ ಭಟ್ಟ ಪಾಲಿನ ಆಸ್ತಿ ಕಲಹದ ವಿಷಯಕ್ಕೆ ಹತ್ಯೆ ನಡೆದಿತ್ತು ಎಂಬುದು ಸಾಬೀತಾಗಿದೆ.
ಹತ್ಯೆ ನಡೆದ ದಿನ ಮನೆಯೊಳಗೆ ಮಲಗಿದ್ದ ಸಣ್ಣ ಮಗು ಮತ್ತು ಪಕ್ಕದ ಮನೆಗೆ ಆಡಲು ಹೋಗಿದ್ದ ಇನ್ನೊಬ್ಬ ಮಗ ಪಾರಾಗಿದ್ದರು. ಇಬ್ಬರೂ ಮಕ್ಕಳು ಅನಾಥರಾಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಹಿರಿಯ ಸರಕಾರಿ ಅಭಿಯೋಜಕಿ ತನುಜಾ ಬಿ.ಹೊಸಪಟ್ಟಣ ವಾದ ಮಂಡಿಸಿದ್ದರು ಎಂದು ವರದಿಯಾಗಿದೆ.