ಬೆಂಗಳೂರು: ಭಾರತದ ಆತ್ಮಶಕ್ತಿಯ ಮೇಲೆ ಮೊತ್ತ ಮೊದಲಿಗೆ ಪ್ರಹಾರ ನಡೆಸಿದ, ಪ್ರಜಾಪ್ರಭುತ್ವವನ್ನೇ ಹತ್ತಿಕ್ಕಿದ ಆ ರಾಷ್ಟ್ರವಿರೋಧಿ ಕೃತ್ಯಕ್ಕೆ ಅರ್ಧ ದಶಕ ತುಂಬಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಟ್ವೀಟ್ ಮಾಡಿದ್ದಾರೆ.
ಸ್ವಾತಂತ್ರ್ಯದ ಮೊಳಕೆಯೊಡೆದು ಪ್ರಜಾಭುತ್ವದ ಮಹಾವೃಕ್ಷದ ಫಲ ನೀಡುವ ಹೊತ್ತಿನಲ್ಲಿ ಸಂವಿಧಾನಕ್ಕೆ ಸಂಚಕಾರ ತಂದಿದ್ದ ಅಂದಿನ ಪ್ರಧಾನಿಯ ಜನವಿರೋಧಿ ನಿರ್ಧಾರವನ್ನು ರಾಷ್ಟ್ರ ಖಂಡಿಸುತ್ತಲೇ ಇದೆ, ಮುಂದೆಯೂ ಖಂಡಿಸಬೇಕು ಎಂದಿದ್ದಾರೆ.
1975ರ ಜೂನ್ 25ರಂದು ಪ್ರಜಾಪ್ರಭುತ್ವವನ್ನು, ಸಮಸ್ತ ಭಾರತೀಯರ ಆಶೋತ್ತರಗಳನ್ನು ಕಗ್ಗೊಲೆ ಮಾಡಲಾಯಿತು. ಇಂದಿರಾ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಭಾರತೀಯ ಮಹಾನ್ ಚರಿತ್ರೆಯಲ್ಲಿ ಒಂದು ಕಪ್ಪುಚುಕ್ಕೆಯನ್ನಿಟ್ಟಿತು.
ಪ್ರಜಾಪ್ರಭುತ್ವವು ಪ್ರಜೆಗಳ ಪ್ರಭುತ್ವ. ನಮ್ಮನ್ನು ನಾವೇ ಆಳ್ವಿಕೆ ಮಾಡುವ ಅನನ್ಯ ತ್ವತ್ವ. ಅಂತಹ ತತ್ವಾದರ್ಶಕ್ಕೆ ಮತ್ತೆ ಅಪಚಾರವಾಗುವುದು ಬೇಡ. ಪ್ರಜಾಪ್ರಭುತ್ವವೆಂಬುದು ಕೇವಲ ಒಂದು ವ್ಯವಸ್ಥೆ ಅಲ್ಲ. ಅದೊಂದು ಮೌಲ್ಯ, ಅದೊಂದು ಆದರ್ಶ, ಅದೊಂದು ಆತ್ಮವಿಶ್ವಾಸ, ಅದೊಂದು ಮಹೋನ್ನತ ಪರಂಪರೆ.
ನಾವೆಲ್ಲರೂ ಪಣ ತೋಡೋಣ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯೋಣ ಎಂದು ಕುಮಾರಸ್ವಾಮಿ ಕರೆ ನೀಡಿದ್ದಾರೆ.