ಬೆಂಗಳೂರು: ನಾರಿ ಶಕ್ತಿ ವಂದನಾ ಅಧಿನಿಯಮ ಹಾಗೂ ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಈ ಹಿಂದೆ ಮಸೂದೆಯನ್ನು ಸ್ವಾಗತ ಮಾಡುತ್ತೇವೆಂದು ಹೇಳಿ ಈಗ ಕಿತಾಪತಿ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರೀಗ ಧರ್ಮಾಧಾರಿತ ಮೀಸಲು ನೀಡಬೇಕೆಂದು ಆಗ್ರಹ ಮಾಡುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಿಗೆ ಅವಕಾಶವಿಲ್ಲ. ದೇಶದ ಎಲ್ಲ ಮಹಿಳೆಯರು ಈ ಮಸೂದೆಗೆ ಬೆಂಬಲ ನೀಡುತ್ತಿದ್ದಾರೆ ಎಂದರು.

ತಮಿಳುನಾಡು ಸಿಎಂ ಸ್ಟಾಲಿನ್ಗೆ ಬುದ್ಧಿ ಕಡಿಮೆ ಇದೆ. ಇದೇ ರೀತಿ ಕಾಂಗ್ರೆಸ್ ನಾಯಕರು ಕೂಡ ಅನ್ಯಾಯ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಿಂದೆ ಲೋಕಸಭೆ ಕ್ಷೇತ್ರ ಎಷ್ಟಿರಬೇಕೆಂದು ಕಾಂಗ್ರೆಸ್ ನಾಯಕರೇ ತೀರ್ಮಾನ ಮಾಡಿದ್ದರು. ಜನಸಂಖ್ಯೆ ಆಧಾರಿತವಾಗಿಯೇ ಕ್ಷೇತ್ರ ಮರುವಿಂಗಡಣೆ ಮಾಡಲಾಗುತ್ತಿತ್ತು. ರಾಜ್ಯದಲ್ಲಿ 28 ಲೋಕಸಭೆ ಕ್ಷೇತ್ರಗಳು 42 ಆಗುತ್ತಿವೆ. ಇಲ್ಲಿ ಕ್ಷೇತ್ರಗಳು ಕಡಿಮೆಯಾಗುವುದಿಲ್ಲ. ಕೇರಳದಲ್ಲಿ 20 ಕ್ಷೇತ್ರಗಳಿಂದ 30 ಕ್ಕೆ, ತಮಿಳುನಾಡಿನಲ್ಲಿ 39 ರಿಂದ 59 ಕ್ಕೆ ಏರಿಕೆಯಾಗಲಿದೆ. ಆದರೂ ವಿರೋಧ ಮಾಡುತ್ತಿದ್ದಾರೆ. ಇದನ್ನು ಜಾರಿ ಮಾಡಿದರೆ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಿ ಎಲ್ಲರೂ ಟೆಂಟ್ ಕಟ್ಟಿಕೊಂಡು ಹೋಗಬೇಕಾಗುತ್ತದೆ ಎಂಬ ಭಯ ವಿರೋಧ ಪಕ್ಷಗಳ ನಾಯಕರಲ್ಲಿದೆ.
ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯ ಆಗುತ್ತಿಲ್ಲ. ಯಾವುದೇ ರಾಜ್ಯಗಳಲ್ಲಿ ಸ್ಥಾನಗಳು ಕಡಿಮೆಯಾಗುತ್ತಿಲ್ಲ. ವಿರೋಧ ಪಕ್ಷಗಳ ನಾಯಕರಿಗೆ ಅಭಿವೃದ್ಧಿ ಬೇಕಿಲ್ಲ. ಕಾಂಗ್ರೆಸ್ನ ವಂಶಾಡಳಿತಕ್ಕೆ ಪೂರಕವಾಗಿ ಎಲ್ಲರೂ ಮಾತಾಡುತ್ತಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಹಿಳಾ ಮೀಸಲಾತಿ ತರುವ ಮೂಲಕ ಮಹಿಳಾ ಸಮಾನತೆ ತರುತ್ತಿದೆ. ಕಾಂಗ್ರೆಸ್ ನಾಯಕರು ಈ ಹಿಂದೆ ಇಂತಹ ಪ್ರಯತ್ನ ಮಾಡಿದರೂ ಸಫಲವಾಗಿರಲಿಲ್ಲ.
ನಾರಿ ಶಕ್ತಿ ವಂದನಾ ಅಧಿನಿಯಮ ಹೊಸ ಇತಿಹಾಸವನ್ನು ಸೃಷ್ಟಿಸಿದ್ದು, ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸಿಗಲಿದೆ. ಇದರ ಜೊತೆಗೆ ಜನಸಂಖ್ಯೆಗೆ ಪೂರಕವಾಗಿ ಕ್ಷೇತ್ರ ಮರುವಿಂಗಡಣೆ ಆಗಲಿದೆ. ಇದರಿಂದ ಎಲ್ಲರಿಗೂ ಪ್ರಾತಿನಿಧ್ಯ ಸಿಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಸ್ವಾಗತಾರ್ಹ ತೀರ್ಪು
ಮಾಜಿ ಸಚಿವ ವಿನಯ್ ಕುಲಕರ್ಣಿ ಮಾಡಿಸಿದ ಕೊಲೆ ಪ್ರಕರಣದಲ್ಲಿ, ಇಬ್ಬರು ಸಾಕ್ಷಿ ಹೇಳಿದ್ದಾರೆ. ರಾಜಕಾರಣಿಗಳ ಮಾತು ಕೇಳಿಕೊಂಡು ಕೊಲೆ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಸಿಬಿಐ ತನಿಖೆ ನಡೆಯದೇ ಇದ್ದಿದ್ದರೆ ಪೊಲೀಸ್ ಇಲಾಖೆ ಕೇಸನ್ನು ಮುಚ್ಚಿಹಾಕುತ್ತಿತ್ತು. ಈಗ ಎಲ್ಲವೂ ಸಾಬೀತಾಗಿದ್ದು, ತಪ್ಪಿತಸ್ಥರು ಯಾರೆಂದು ಗೊತ್ತಾಗಿದೆ. ವಿನಯ್ ಕುಲಕರ್ಣಿಯೇ ಕೊಲೆ ಮಾಡಿಸಿದ್ದು ಎಂದು ಕೋರ್ಟ್ ತೀರ್ಪು ನೀಡಿದೆ. ರಾಜಕೀಯ ಕ್ಷೇತ್ರದಲ್ಲಾಗುವ ಕೊಲೆಗಳಿಗೆ ಇದು ತಿಲಾಂಜಲಿ ನೀಡಲಿದೆ. ಇದು ಸ್ವಾಗತಾರ್ಹ ತೀರ್ಪು ಎಂದರು.
ತುಘಲಕ್ ದರ್ಬಾರ್
ರಾಜ್ಯದ ಮಕ್ಕಳು ಹಿಂದಿ ಓದುವ ಮೊದಲೇ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಪರೀಕ್ಷೆಯ ಸಮಯದಲ್ಲಿ ತುಘಲಕ್ ದರ್ಬಾರ್ ಮಾಡುವ ಅಗತ್ಯವಿರಲಿಲ್ಲ. ನಾನು ಕೂಡ ಕನ್ನಡದ ಹೋರಾಟಗಾರನಾಗಿದ್ದು, ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿ ಪೊಲೀಸರ ಲಾಠಿ ಏಟಿನಿಂದ ಕಾಲಿಗೆ ಗಾಯವಾಗಿ ಆಸ್ಪತ್ರೆ ಸೇರಿದ್ದೆ. ಹೊಸೂರಿನಲ್ಲಿ ಹೆಚ್ಚಿನವರು ಕನ್ನಡ ಮಾತಾಡುತ್ತಾರೆ. ಕಾಸರಗೋಡಿನಲ್ಲೂ ಕನ್ನಡಿಗರು ಹೆಚ್ಚಿದ್ದಾರೆ. ಅಲ್ಲಿ ಕನ್ನಡ ಇಲ್ಲವೆಂದರೆ ಸಮಸ್ಯೆಯಾಗುತ್ತದೆ. ಉರ್ದು ಶಾಲೆಗಳಲ್ಲಿ ಮೊದಲಿಗೆ ಉರ್ದು, ಎರಡನೇ ಭಾಷೆಯಾಗಿ ಇಂಗ್ಲಿಷ್ ಓದುತ್ತಾರೆ. ಕೊನೆಯ ಭಾಷೆಯಾಗಿ ಕನ್ನಡ ಓದುತ್ತಾರೆ. ತ್ರಿಭಾಷಾ ಸೂತ್ರ ಇಲ್ಲವೆಂದರೆ ಅಲ್ಲಿ ಕನ್ನಡವೂ ಇರುವುದಿಲ್ಲ.
ವಿದ್ಯಾರ್ಥಿಗಳ ವಿಚಾರ ಬಂದಾಗ ಸದನ ಸಮಿತಿ ರಚಿಸಿ ಚರ್ಚೆ ಮಾಡಬೇಕಿತ್ತು ಅಥವಾ ವಿಧಾನಸಭೆ ಅಧಿವೇಶನ ಕರೆದು ಚರ್ಚಿಸಬೇಕಿತ್ತು. ಅದನ್ನು ಬಿಟ್ಟು ಏಕಾಏಕಿ ತೀರ್ಮಾನ ಮಾಡಿರುವುದು ಸರಿಯಲ್ಲ. ಕನ್ನಡಕ್ಕೆ ಆದ್ಯತೆ ನೀಡಬೇಕೆಂಬುದು ನಮ್ಮ ಆಗ್ರಹ. ದ್ವಿಭಾಷಾ ಸೂತ್ರದಿಂದಲೇ ಕನ್ನಡ ಬೆಳೆಯುತ್ತದೆ ಎನ್ನಲು ಸಾಧ್ಯವಿಲ್ಲ. ತ್ರಿಭಾಷಾ ನೀತಿ ಕುರಿತು ದೀರ್ಘ ಚರ್ಚೆ ನಡೆಯಬೇಕಿತ್ತು ಎಂದರು.
ಸಿಎಂ ಸ್ಥಾನ ಕುರಿತು ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಎಲ್ಲರೂ ದೆಹಲಿಗೆ ಹೋಗುತ್ತಿರುವುದರಿಂದ ಸರ್ಕಾರ ಸತ್ತುಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಹಾಗೂ ಎಲ್ಲ ಸಚಿವರ ಮಕ್ಕಳು ನಮ್ಮಪ್ಪನೇ ಸಿಎಂ ಎಂದು ಹೇಳಿಕೆ ನೀಡುತ್ತಿದ್ದಾರೆ. ಪ್ರತಿ ಮನೆಯಲ್ಲೂ ಇಂದು ಕ್ಯಾಬಿನೆಟ್ ರಚನೆಯಾಗಿದೆ. ಕಾಂಗ್ರೆಸ್ ಈಗ ಒಡೆದ ಮನೆಯಾಗಿ ಜನರ ಪಾಲಿಗೆ ಸತ್ತಿದೆ. ಬಜೆಟ್ನಲ್ಲಿ ಒಂದೂವರೆ ಲಕ್ಷ ಕೋಟಿ ರೂ. ಸಾಲ ಮಾಡಿ, ಕರ್ನಾಟಕವನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ. ಸರ್ಕಾರವೀಗ ತ್ರಿಶಂಕು ಸ್ಥಿತಿಯಲ್ಲಿದೆ ಎಂದರು.
ದಾವಣಗೆರೆಯಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿದೆ
ದಾವಣಗೆರೆಯಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿರುವುದಕ್ಕೆ ಮುಸ್ಲಿಮ್ ಮುಖಂಡರು ಕಾಂಗ್ರೆಸ್ ವಿರುದ್ಧ ಮಾತಾಡುತ್ತಿದ್ದಾರೆ. ಸಚಿವ ಜಮೀರ್ ಅಹ್ಮದ್ ಅವರನ್ನೂ ಟಾರ್ಗೆಟ್ ಮಾಡಲಾಗುತ್ತಿದೆ. ಇಡೀ ಪಕ್ಷ ಹಾಗೂ ಸರ್ಕಾರ ಸಂಪೂರ್ಣ ಗೊಂದಲದಲ್ಲಿದೆ.
ಇಂದೇ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಬರಲಿದೆ.
ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಬಿಜೆಪಿ ಗೆಲ್ಲಲಿದೆ. ನರೇಂದ್ರ ಮೋದಿ ಪ್ರಧಾನಿಯಾಗಿದ್ದಕ್ಕೆ ನಮಗೇನೂ ಸಮಸ್ಯೆಯಾಗಿಲ್ಲ, ಬಿಜೆಪಿ ಬೆಂಬಲಿಸುತ್ತೇವೆ ಎಂದು ಮುಸ್ಲಿಮರು ಹೇಳಿದ್ದಾರೆ. ಅವರ ಈ ನಡೆಯನ್ನು ಸ್ವಾಗತಿಸುತ್ತೇನೆ ಎಂದರು.
CBSE: ದೊಡ್ಡಬಳ್ಳಾಪುರದ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಗೆ ಶೇ.100 ಫಲಿತಾಂಶ

ದೊಡ್ಡಬಳ್ಳಾಪುರ: ಏ.16ರಂದು ಪ್ರಕಟವಾದ
ಸಿಬಿಎಸ್ಇ (CAB) 10ನೇ ತರಗತಿ ಫಲಿತಾಂಶದಲ್ಲಿ ನಗರದ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆ (SDUIRS) ಶೇ.100 ರಷ್ಟು ಸಾಧನೆ ಮಾಡಿದೆ.
2025-26ನೇ ಸಾಲಿನ ಸಿ.ಬಿ.ಎಸ್.ಇ (ಕೇಂದ್ರೀಯ ಪರೀಕ್ಷಾ ಮಂಡಳಿ) ಹತ್ತನೇ ತರಗತಿ ಫಲಿತಾಂಶದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರತಿಷ್ಠತ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯು
ಶೇ.100ರಷ್ಟು ಫಲಿತಾಂಶ ಪಡೆದ ಸಾಧನೆ ಮತ್ತೊಮ್ಮೆ ಗಮನ ಸೆಳೆದಿದೆ.
ಈ ಬಾರಿ ಒಟ್ಟು 112 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದು 112 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪೋಷಕರಿಗೆ ಹಾಗೂ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
16 ಮಕ್ಕಳು ಅತ್ಯುನ್ನತ್ತ ಶ್ರೇಣಿಯಲ್ಲಿ ಹಾಗೂ 77 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಮಕ್ಕಳ ಈ ಫಲಿತಾಂಶದ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಜಿ.ಎಚ್.ನಾಗರಾಜ, ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಕಾರ್ಯದರ್ಶಿ
ಕೆ.ಜಿ.ಹನುಮಂತರಾಜು, ಆಡಳಿತ ಮಂಡಳಿಯ ಸದಸ್ಯರು (G.C. Members),ಹಾಗೂ ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿದರು.
ಈ ಕುರಿತು ಪ್ರಕಟಣೆ ನೀಡಿದ್ದು, ಶಾಲೆಯ ಶೇ.100 ಫಲಿತಾಂಶವನ್ನು ಸಾಧಿಸುವುದು ನಮ್ಮ ಶಾಲೆಯ ಗುಣಮಟ್ಟದ ಶಿಕ್ಷಣ ಹಾಗೂ
ಕಾರ್ಯದಕ್ಷತೆಯ ಪ್ರತೀಕವಾಗಿದೆ. ಮಕ್ಕಳ
ಈ ಸಾಧನೆ ನಮ್ಮ ಶಾಲೆಗೆ ಕೀರ್ತಿ ತಂದಿದೆ, ಮಕ್ಕಳಿಗೆ ಹಾಗೂ ವಿದ್ಯೆ ಕಲಿಸಿದ ಗುರು
ವೃಂದಕ್ಕೆ ನಮ್ಮ ಮನಃಪೂರ್ವಕವಾದ ಅಭಿನಂದನೆಗಳು ಎಂದು ಮುಕ್ತ ಕಂಠದಿಂದ ಹಾರೈಸಿದ್ದಾರೆ
ಈ ವಿಶಿಷ್ಟ ಸಾಧನೆಗೆ ಶಿಕ್ಷಕರ ಸಮರ್ಪಣೆ- ಮಾರ್ಗದರ್ಶನ, ಪೋಷಕರ ಸಹಕಾರ, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಾಲೆಯ ಶಿಸ್ತಿನ
ವಾತಾವರಣ ಪ್ರಮುಖ ಕಾರಣಗಳಾಗಿವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಈ ಸಾಧನೆಯೊಂದಿಗೆ, ಶಾಲೆಯು ಸಿಬಿಎಸ್ಇ ಪಠ್ಯಕ್ರಮದಲ್ಲಿ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಮುಂದಿನ
ವರ್ಷಗಳಲ್ಲಿಯೂ ಇದೇ ಸಾಧನೆಯನ್ನು ಮುಂದುವರಿಸುವ ವಿಶ್ವಾಸ ವ್ಯಕ್ತವಾಗಿದೆ.
ಫಲಿತಾಂಶದ ವಿವರ
ಸುರ್ಜಿತ್ ಕುಶ್ವಾಹ 95.4%
ಸಂಪ್ರೀತ್ ರಾಜ್.ಕೆ.ಎಸ್ – 95.4%.
ಅಮೃತ.ಆರ್ 89.8%
ಚುಕ್ಕಿ ಎಚ್ ಪ್ರಸಾದ್ -89.8%
ಹಿತೈಷಿ ಜೆ ನವೀನ್ 89.6%
ಚೇತಸ್.ಬಿ – 89.4%
ರಿತಿಕಾ ಅಗರ್ವಾಲ್ 89%
ಎಮ್.ಸ್ವರೂಪ್ ಗೌಡ 88.2%
ಆರ್ಯ.ಎಮ್.ಎ 87.6%
ಗೌರಿ ದದೀಚ್ 86.6%
ಯಶಸ್ವಿನಿ.ಸಿ.ಜಿ 86.2%
ಚಿಂತನಾ.ಕೆ,ಹೆಚ್ – 86.2%
ಸನತ್ ಕುಮಾರ್ ಜಿ ನಾಯಕ್ 86%
ಶ್ರಾವಣಿ.ಕೆ.ಬಿ – 85.8%
ಸಾತ್ವಿಕ್.ಟಿ 85.2%
ಗಮನ ಜಿ ಗೌಡ 85%.
ಮನಿಷ.ಎನ್ – 84.6%
ಪ್ರಜನ್ ಗೌಡ .ಟಿ.ಎಸ್ 83.8%
ಮೋನಿಷ.ಹೆಚ್.ಎಸ್ – 83.8%
ಇಂಚರ.ಪಿ – 83.8%
ಜಾನ್ಸಿ.ಡಿ.ಟಿ 83.6%
ವಿಸ್ಮಯ್ ಗೌಡ.ಟಿ.ಎ 83.4%
ಶಿವಾಂಗಿ ಯಾದವ್ 83.2%
ಇಂಚರ.ಎಮ್.ಹೆಚ್ 82.8%
ಯಶಸ್ 81.6%
ಗಾನವಿ.ಜೆ 81.4%.
