ನವದೆಹಲಿ: ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳ ಪ್ರಮುಖ ಬೆಳೆಯಾದ, ಜಿ.ಐ. (GI) ಟ್ಯಾಗ್ ಹೊಂದಿರುವ ‘ಬೆಂಗಳೂರು ಗುಲಾಬಿ ಈರುಳ್ಳಿ’ ಬೆಳೆಗಾರರು ಎದುರಿಸುತ್ತಿರುವ ತೀವ್ರ ಮಾರುಕಟ್ಟೆ ಬಿಕ್ಕಟ್ಟಿನ ಕುರಿತು ಸಂಸದ ಡಾ. ಕೆ. ಸುಧಾಕರ್ (Dr.K. Sudhakar) ಅವರು ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.

ಕುಸಿದ ಬೆಲೆ – ಸಂಕಷ್ಟದಲ್ಲಿ ಅನ್ನದಾತ
ಗಲ್ಫ್ ರಾಷ್ಟ್ರಗಳಲ್ಲಿ ಉಂಟಾಗಿರುವ ಭೌಗೋಳಿಕ ರಾಜಕೀಯ ಸಂಘರ್ಷಗಳಿಂದಾಗಿ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ರಫ್ತು ಆಧಾರಿತ ಬೆಳೆಯ ಮಾರುಕಟ್ಟೆ ಕುಸಿದಿದೆ. ಹಿಂದೆ ಪ್ರತಿ ಚೀಲಕ್ಕೆ ₹1,200 ರಿಂದ ₹1,500 ಇರುತ್ತಿದ್ದ ಬೆಲೆ ಈಗ ₹100ಕ್ಕಿಂತ ಕೆಳಕ್ಕೆ ಇಳಿದಿರುವುದು ರೈತರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ. ಮಾರಾಟವಾಗದ ಈರುಳ್ಳಿ ರಾಶಿಗಳು ಮಳೆಯಿಂದ ಕೊಳೆಯುವ ಭೀತಿಯಲ್ಲಿದ್ದು, ಪರಿಸ್ಥಿತಿ ಗಂಭೀರವಾಗಿದೆ.

ಕೇಂದ್ರ ಸಚಿವರಿಗೆ ಪತ್ರ
ಈ ಬಿಕ್ಕಟ್ಟನ್ನು ಪರಿಹರಿಸಲು ಡಾ. ಸುಧಾಕರ್ ಅವರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದಾರೆ. ರೈತರು ಅನಿವಾರ್ಯವಾಗಿ ಸಂಕಷ್ಟದ ಮಾರಾಟಕ್ಕೆ (Distress Sale) ಮುಂದಾಗುವುದನ್ನು ತಪ್ಪಿಸಲು ತಕ್ಷಣವೇ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ ಅಥವಾ ನೇರ ಖರೀದಿ ಪ್ರಕ್ರಿಯೆ ಆರಂಭಿಸಬೇಕೆಂದು ಅವರು ಕೋರಿದ್ದಾರೆ.
ಅಲ್ಲದೆ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿರುವ ಅವರು, ಪರ್ಯಾಯ ರಫ್ತು ಮಾರುಕಟ್ಟೆಗಳನ್ನು ಹುಡುಕುವುದು, ರಫ್ತು ಉತ್ತೇಜಕ ಸೌಲಭ್ಯ ನೀಡುವುದು ಹಾಗೂ ಅಗತ್ಯವಿರುವ ಲಾಜಿಸ್ಟಿಕ್ಸ್ ನೆರವು ನೀಡುವ ಮೂಲಕ ಈ ಬೆಳೆಯ ಆರ್ಥಿಕ ಲಾಭದಾಯಕತೆಯನ್ನು ಕಾಪಾಡಬೇಕೆಂದು ವಿನಂತಿಸಿದ್ದಾರೆ.
ದೀರ್ಘಕಾಲೀನ ಪರಿಹಾರಕ್ಕೆ ಆಗ್ರಹ
ಕೇವಲ ತಾತ್ಕಾಲಿಕ ಕ್ರಮಗಳಷ್ಟೇ ಅಲ್ಲದೆ, ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆಯಡಿ (PMKSY) ಈ ಭಾಗದಲ್ಲಿ ಈರುಳ್ಳಿ ನಿರ್ಜಲೀಕರಣ (Dehydration) ಮತ್ತು ಉಪ್ಪಿನಕಾಯಿ ತಯಾರಿಕಾ ಘಟಕಗಳಂತಹ ಸಂಸ್ಕರಣಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು. ಇದರಿಂದ ರೈತರು ಕೇವಲ ಹಸಿ ಈರುಳ್ಳಿಯ ರಫ್ತಿನ ಮೇಲೆ ಅವಲಂಬಿತವಾಗುವುದು ತಪ್ಪುತ್ತದೆ ಎಂದು ಸುಧಾಕರ್ ಸಲಹೆ ನೀಡಿದ್ದಾರೆ.
ನಮ್ಮ ಅನ್ನದಾತರ ಶ್ರಮಕ್ಕೆ ನ್ಯಾಯ ಸಿಗಬೇಕು ಮತ್ತು ಅವರ ಜೀವನೋಪಾಯಕ್ಕೆ ಧಕ್ಕೆಯಾಗಬಾರದು. ಕೇಂದ್ರ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿ, ಕೂಡಲೇ ಬೆಳೆಗಾರರ ರಕ್ಷಣೆಗೆ ಧಾವಿಸಲಿದೆ ಎಂಬ ವಿಶ್ವಾಸವನ್ನು ಡಾ.ಸುಧಾಕರ್ ವ್ಯಕ್ತಪಡಿಸಿದ್ದಾರೆ.
