ಚಿಕ್ಕಬಳ್ಳಾಪುರ: ನಗರ ಹೊರವಲಯದ ಚಿತ್ರಾವತಿ ಶ್ರೀ ಸುಬ್ರಹ್ಮಣ್ಯೇಶ್ವರ (Sri Subrahmanyeshwar) ಬ್ರಹ್ಮ ರಥೋತ್ಸವ ಮತ್ತು ಜಾತ್ರೆ ವಿಜೃಂಭಣೆಯಿಂದ ಸೋಮವಾರ ನೆರವೇರಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವರ ದರ್ಶನವನ್ನು ಪಡೆದು ಹರಕೆಗಳನ್ನು ಸಮರ್ಪಿಸಿದರು.
ಚಿಕ್ಕಬಳ್ಳಾಪುರ ಹೊರ ವಲಯದ ಇತಿಹಾಸ ಪ್ರಸಿದ್ಧ ಚಿತ್ರಾವತಿಯ ಶ್ರೀ ಸುಬ್ರಹ್ಮಣ್ಯೇಶ್ವರನಿಗೆ ಪ್ರತಿ ಮಾಘ ಮಾಸದ ಕುಮಾರಷಷ್ಟಿಯಂದು ಬ್ರಹ್ಮ ರಥೋತ್ಸವ ಮತ್ತು ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ.
ಸುಮಾರು 20 ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಜಾತ್ರೆಗೆ ಆಗಮಿಸಿ ಹರಕೆ ಸಮರ್ಪಿಸಿ ಅಲ್ಲಿನ ಹುತ್ತಕ್ಕೆ ಹಾಲೆರೆಯುತ್ತಾರೆ.
ಮದ್ಯಾಹ್ನ ನಡೆದ ಬ್ರಹ್ಮ ರಥೋತ್ಸವಕ್ಕೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಚಾಲನೆ ನೀಡಿದರು. ಸಹಸ್ರಾರು ಭಕ್ತರು ರಥ ಎಳೆದರು.
ಮುಂಜಾನೆಯಿಂದ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತರು, ಚಿತ್ರಾವತಿ ಶ್ರೀ ಸುಬ್ರಹ್ಮಣ್ಯೇಶ್ವರ ದರ್ಶನ ಪಡೆದು ಹರಕೆ ತೀರಿಸಿಕೊಂಡು ಹುತ್ತಕ್ಕೆ ಹಾಲೆರೆದರು.
ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಪನ್ನೀರು ಪತ್ರೆ, ಬಾಳೆಹಣ್ಣು ಎಸೆದು ದೇವರ ಕೃಪೆಗೆ ಪಾತ್ರರಾದರು.
ಜಾತ್ರೆಗೆ ಬಂದ ಭಕ್ತಾದಿಗಳಿಗೆ ಉಪಹಾರ, ಪಾನಕ, ಮಜ್ಜಿಗೆ ಮತ್ತು ಕೋಸಂಬರಿಯನ್ನು ಹೊನ್ನೇನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಏರ್ಪಡಿಸಿದ್ದರು.
ಯಾವುದೇ ಕಳ್ಳತನ ಪ್ರಕರಣಗಳು ನಡೆಯದಂತೆ ಗ್ರಾಮಾಂತರ ಪೊಲೀಸರು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಕ್ಷಣಕ್ಷಣಕ್ಕೆ ಧ್ವನಿವರ್ಧಕಗಳ ಮುಖಾಂತರ ಮಾಹಿತಿ ಕೊಡುತ್ತಿದ್ದರು.
ಕುಕ್ಕೆ ಸುಬ್ರಮಣ್ಯ, ಘಾಟಿ ಸುಬ್ರಮಣ್ಯ ದೇವಾಲಯಗಳಲ್ಲಿ ಬ್ರಹ್ಮ ರಥೋತ್ಸವ ಕಾರ್ಯಕ್ರಮಗಳು ನಡೆದ ನಂತರ ಪ್ರತಿ ವರ್ಷ ಮಾಘ ಮಾಸದಲ್ಲಿ ಷಷ್ಟಿ ಪ್ರಯುಕ್ತ ನಡೆಯುವ ಚಿತ್ರಾವತಿ ಜಾತ್ರೆಯು ವಿಶೇಷತೆಯನ್ನು ಪಡೆದುಕೊಂಡಿದೆ.
ಜಾತ್ರೆ ಇನ್ನೂ ಒಂದು ವಾರ ಇದೆ ಎನ್ನುವಾಗ ದನಗಳ ಸಂತೆಯೂ ನಡೆಯುತ್ತದೆ. ಇದರಲ್ಲಿ ರಾಜ್ಯ ಮಾತ್ರವಲ್ಲದೇ ತಮಿಳುನಾಡು, ಆಂಧ್ರ ಸೇರಿದಂತೆ ವಿವಿಧೆಡೆಯಿಂದ ರೈತರು ಭಾಗವಹಿಸುತ್ತಿದ್ದರು.
ಸಂತೆಯಲ್ಲಿ ತಾವು ಚೆನ್ನಾಗಿ ಸಾಕಿದ ದನಗಳನ್ನು ಮಾರಾಟ ಮಾಡಿ ಆರ್ಥಿಕ ಲಾಭವನ್ನು ಪಡೆಯುತ್ತಿದ್ದರು. ಆದರೆ ಈ ಬಾರಿ ದನಗಳ ಜಾತ್ರೆಗೆ ಬಾರದಿರುವುದು ಸ್ವಲ್ಪ ಮಟ್ಟಿಗೆ ಜಾತ್ರೆಯ ಮೇಲೆ ಪ್ರಭಾವ ಬೀರಿದೆ.
ನೂರಾರು ವರ್ಷಗಳಿಂದ ಅದ್ಧೂರಿಯಾಗಿ ನಡೆಯುತ್ತಾ ಬಂದಿರುವ ಚಿತ್ರಾವತಿ ಜಾತ್ರಾ ಮಹೋತ್ಸವಕ್ಕೆ ಜಾನುವಾರುಗಳೇ ಪ್ರಮುಖ ಆಕರ್ಷಣೆ.
ವ್ಯತಿರಿಕ್ತ ಪ್ರಭಾವ
ಚಿತ್ರಾವತಿ ಜಾತ್ರೆ ಜಾನುವಾರುಗಳ (ದನಗಳ) ಜಾತ್ರೆಯಂದೇ ಹೆಸರುವಾಸಿಯಾಗಿತ್ತು. ರಾಜ್ಯ, ಹೊರರಾಜ್ಯಗಳಿಂದ ಲಕ್ಷಾಂತರ ಬೆಲೆಬಾಳುವ ಜಾನುವಾರುಗಳು ಜಾತ್ರೆಯಲ್ಲಿ ಸೇರುತ್ತಿದ್ದರಿಂದ ವ್ಯಾಪಾರ ಭರದಿಂದ ಸಾಗುತ್ತಿತ್ತು.
ಜಾನುವಾರುಗಳನ್ನು ಮಾರುವವರು, ಕೊಳ್ಳುವವರು ಸ್ಥಳೀಯ ಸಾರ್ವಜನಿಕರಿಂದ ಜಾತ್ರೆ ತುಂಬಿ ತುಳುಕುತ್ತಿತ್ತು. ಆದರೆ ಈ ಬಾರಿ ದನಗಳ ಜಾತ್ರೆಗೆ ಜಾನುವಾರುಗಳು ಭಾರದಿರುವುದು ಜಾತ್ರಾ ಮಹೋತ್ಸವದ ಮೇಲೆ ವ್ಯತಿರಿಕ್ತ ಪ್ರಭಾವ ಬೀರಿದೆ.
ಪ್ರತೀ ವರ್ಷ ಜಾತ್ರೆಯಲ್ಲಿ ಸೇರುವ ಜಾನುವಾರುಗಳಿಗೆ ತಾಲೂಕು ಆಡಳಿತದಿಂದಲೇ ಮೇವು, ನೀರಿನ ವ್ಯಸವ್ಥೆ ಕಲ್ಪಿಸಲಾಗುತ್ತಿತ್ತು. ಈ ಬಾರಿಯ ಚಿತ್ರಾವತಿ ಜಾತ್ರೆಗೆ ಜಾನುವಾರುಗಳನ್ನು ರೈತರು ತರಲೇ ಇಲ್ಲಾ.
ರಾಸುಗಳ ವ್ಯಾಪಾರ ಸೇರಿದಂತೆ ಜಾತ್ರೆಯಲ್ಲಿ ತಲೆ ಎತ್ತುತ್ತಿದ್ದ ಸಾಲು ಸಾಲು ಸಿಹಿ ತಿನಿಸುಗಳ, ತಂಪುಪಾನೀಯಗಳು, ಮಕ್ಕಳ ಆಟಿಕೆ, ಮನರಂಜನಾ ಆಟಗಳು ಸೇರಿದಂತೆ ಲಕ್ಷಾಂತರ ರೂಪಾಯಿಗಳ ವ್ಯಾಪಾರ ವಹಿವಾಟಾಗುತಿತ್ತು. ಜಾತ್ರೆಗೆ ಒಂದು ವಾರದ ಮುಂಚೆಯಿಂದಲೇ ನೂರಾರು ಅಂಗಡಿಗಳು ಬಂದು ಸೇರುತ್ತಿದ್ದವು.
ಈ ಬಾರಿ ದನಗಳ ಜಾತ್ರಗೆ ಜಾನುವಾರುಗಳು ಬಾರದಿರುವುದರಿಂದ ವ್ಯಾಪಾರ ವಹಿವಾಟುಗೂ ತೀವ್ರ ಪೆಟ್ಟಾಗಿದ್ದು, ವ್ಯಾಪಾರಸ್ಥರಿಗೆ ಬಂದ ದಾರಿಗೆ ಸುಂಕವಿಲ್ಲದಂತಾಗಿದೆ.
ತಾಲೂಕು ಆಡಳಿತ ರಥೋತ್ಸವಕ್ಕೆ ಭರದ ಸಿದ್ಧತೆ ನಡೆಸಿ ಕೊಂಡಿದ್ದು, ಕಲ್ಯಾಣಿ ಹಾಗೂ ಜಾತ್ರಾ ಸ್ಥಳದ ಸ್ವಚ್ಛತೆ, ದೇವಾಲಯಗಳಿಗೆ ಸುಣ್ಣ, ಬಣ್ಣ, ಪೂಜೆ ಪುನಸ್ಕಾರಗಳು, ರಥ ನಿರ್ವಹಣೆ, ಭಾಗವಹಿಸುವ ಜನರಿಗೆ ಭದ್ರತೆ, ಕುಡಿವ ನೀರಿನ ವ್ಯವಸ್ಥೆ ಸೇರಿದಂತೆ ನಾನಾ ರೀತಿಯಲ್ಲಿ ಸಿದ್ಧತೆಗಳು ಮಾಡಿ ಕೊಂಡಿತ್ತು.