ಬೆಂಗಳೂರು: ಆರ್ ಅಶೋಕ (R Ashoka) ವಿರೋಧ ಪಕ್ಷದ ನಾಯಕ ಆಗಿದ್ದಾರೆ, ಪ್ರತಿ ನಿತ್ಯ ಏನಾದ್ರೂ ಹೇಳಬೇಕಾಗುತ್ತೆ, ಇಲ್ಲವಾದ್ರೆ ಪಕ್ಷದ ವರಿಷ್ಠರು ಏನ್ ಮಲ್ಕೊಂಡ್ಯಾ ಅಂತ ಕೇಳ್ತಾರೆ.. ಅದಕ್ಕೆ ಏನಾದ್ರೂ ಒಂದ್ ಹೇಳ್ತಾ ಇರ್ತಾರೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (laxman savadi) ಲೇವಡಿ ಮಾಡಿದ್ದಾರೆ.
ಸಿಎಂ ಬದಲಾವಣೆ ಕುರಿತು ಆರ್ ಅಶೋಕ್ ( R Ashoka) ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಅಶೋಕ ಅವರಿಗೆ ಮನವಿ ಮಾಡ್ತಿನಿ, ನಿನ್ನ ತಟ್ಟೆಲ್ ಬಿದ್ದಿರುವ ಹೆಗ್ಗಣ ಅದುನ್ನ ತಕ್ಕೋ, ಬೇರೆಯವರ ತಟ್ಟೆಲ್ ಬಿದ್ದಿರುವ ನೋಣದ ಬಗ್ಗೆ ಚಿಂತೆಯಾಗಕ್ ಮಾಡ್ತಿಯಾ.? ಎಂದು ಸವದಿ (Savadi) ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ವಿರೋಧ ಪಕ್ಷದ ನಾಯಕ ಆಗಿರೋದ್ರಿಂದ ಪಾಪ ಏನಾದ್ರೂ ಒಂದು ಹೇಳಬೇಕಾಗುತ್ತೆ, ಇಲ್ಲವಾದ್ರೆ ಮೇಲಿನವರು ಸುಮ್ಮನೆ ಇರಲ್ಲ ಮಾತಾಡ್ತಾರೆ. ನಿನ್ ಟೆಂಟ್ ಕಿತ್ಕೊಂಡ್ ಹೋಗ್ತಾ ಇದೆ.. ಬೇರೆಯವರ ಟೆಂಟ್ ಬಗ್ಗೆ ಆಲೋಚೆನೆ ಯಾಕ್ ಮಾಡ್ತಿಯಾ..?
ಅಲ್ ಏನಾಗಿದೆ ಅಧ್ಯಕ್ಷನ ಬದಲಾಯಿಸಬೇಕು ಅನ್ನೋದ್ ಒಂದು, ಅವರು ಬದಲಾದ್ರೆ ವಿರೋಧ ಪಕ್ಷದ ನಾಯಕನ ಸ್ಥಾನ ಬದಲಾವಣೆ ಮಾಡಬೇಕು ಎಂಬ ಕೂಗು ಎದ್ದಿದೆ.
ನಾನು ಮೊದಲು ಬಿಜೆಪಿಯಲ್ಲಿದ್ದ (BJP) ಕಾರಣ ಈಗಲೂ ಅಲ್ಲಿ ಸ್ನೇಹಿತರಿದ್ದಾರೆ, ಅವರು ಹೇಳುವ ಪ್ರಕಾರ ಬಿಜೆಪಿ ನಾಯಕರು ಎರಡೂ ಸ್ಥಾನಗಳಿಗೆ ಟವೆಲ್ ಹಾಕಿದ್ದಾರೆ, ಅವರ ಕುರ್ಚಿ ಉಳಿಸಿಕೊಳ್ಳಲು, ಜನರ ದಿಕ್ಕನ್ನು ಬೇರೆ ಕಡೆ ಸೆಳೆಯಲು ಇಂತ ಕೆಲಸ ಮಾಡ್ತಾ ಇದ್ದಾರೆ.
ಅಶೋಕ ಅವರಿಗೆ ನೀಡುವ ಸಲಹೆ ಏನಂದ್ರೆ.. ಅಶೋಕಣ್ಣ ನಿನ್ ಸೀಟ್ ಭದ್ರವಾಗಿ ಇಟ್ಕೋ, ಆಮೇಲೆ ಬೇರೆಯವರ ಸೀಟ್ ಬಗ್ಗೆ ಮಾತಾಡೋಣ ಎಂದು ಕುಟುಕಿದರು.
ಬಿಜೆಪಿಯವರಿಗೆ ಮಾಡೋಕ್ ಕೆಲಸ ಇಲ್ಲ ಬೇರೆಯವರ ಬಗ್ಗೆ ಮಾತಾಡ್ತಾರೆ, ಅವರ ತಟ್ಟೆಲ್ ಬಿದ್ದಿರುವ ಹೆಗ್ಗಣ ನಾವ್ ಯಾಕ್ ತಗಿಯೋಣ, ಅವರದ್ದು ಅವರೆ ತಕ್ಕೋಬೇಕು ಎಂದು ಸವದಿ ಲೇವಡಿ ಮಾಡಿದರು.