ದೊಡ್ಡಬಳ್ಳಾಪುರ: ಮೇ.25ರಂದು ನಡೆಯಲಿರುವ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (Bamul) ನಿರ್ದೇಶಕ ಸ್ಥಾನದ ಚುನಾವಣೆ ಎರಡು ದಿನಗಳು ಮಾತ್ರ ಉಳಿದಿದ್ದು, ಅಚ್ಚರಿ ಎಂಬಂತೆ ಈ ಚುನಾವಣೆಗೆ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಮೈತ್ರಿ ಮಿತ್ರರ (ಕಮಲ-ದಳ) ನಡುವೆಯೇ ರಾಜಕೀಯ ಸಮರ ನಡೆಯುತ್ತಿದೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ನಿರ್ದೇಶಕ ಬಿಸಿ ಆನಂದ್ ಕುಮಾರ್ ಅವರು ಮತ್ತೊಮ್ಮೆ ಸ್ಪರ್ಧೆಗಿಳಿದಿದ್ದಾರೆ, ಮತ್ತೊಂದೆಡೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಹುಸ್ಕೂರ್ ಆನಂದ್ ಅವರು ಕಣಕ್ಕಿಳಿಯುವ ಮೂಲಕ ದೊಡ್ಡಬಳ್ಳಾಪುರ ನಿರ್ದೇಶಕ ಸ್ಥಾನದ ಚುನಾವಣೆ ಆನಂದಮಯವಾಗಿದೆ.
ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ನಾಮಪತ್ರ ಹಿಂಪಡೆದು, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ. ಇದು ಬಿಜೆಪಿಗೆ ಆತಂಕಕ್ಕೆ ಕಾರಣವಾದರು, ಬಿಸಿ ಆನಂದ್ ಅವರು ಕೈಗೊಂಡಿರುವ ರೈತಪರ ಕಾರ್ಯಗಳು, ಡೈರಿಗಳ ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ ಸಿಗುವ ವಿಶ್ವಾಸ ಹೆಚ್ಚಾಗಿದೆ.
ಇನ್ನೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಹುಸ್ಕೂರು ಆನಂದ್ ಅವರಿಗೆ ಕಾಂಗ್ರೆಸ್ ಬೆಂಬಲ ದೊರಕಿರುವುದು ಆನೆ ಬಲ ದೊರತಂತಾಗಿದೆ, ಹುಸ್ಕೂರು ಆನಂದ್ ಅವರು ಹಲವು ರಾಜಕೀಯ ಚಟುವಟಿಕೆ, ಸಮಾಜ ಸೇವೆಗಳ ಮೂಲಕ ಜನರಿಗೆ ಪರಿಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಮಗೆ ರೈತರ ಆಶೀರ್ವಾದ ದೊರಕುವ ವಿಶ್ವಾಸದಲ್ಲಿದ್ದಾರೆ.
ಒಳೇಟಿನ ಆತಂಕ
ಮೈತ್ರಿ ಮಿತ್ರರ ನಡುವೆಯೇ ಚುನಾವಣೆ ಕದನಕ್ಕೆ ಸಾಕ್ಷಿಯಾಗಿರುವ ದೊಡ್ಡಬಳ್ಳಾಪುರ ಬಮೂಲ್ ನಿರ್ದೆಶಕ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಒಳೇಟಿನ ಆತಂಕ ಎರಡು ಪಕ್ಷದ ಬೆಂಬಲಿಗರಲ್ಲಿ ಕಾಡುತ್ತಿದೆ.
ಕಾಂಗ್ರೆಸ್ ಜತೆ ಮೈತ್ರಿ ಕುರಿತು ಕೆಲ ಜೆಡಿಎಸ್ ನಾಯಕರಲ್ಲಿ ಅಸಮಾಧಾನ ಕೇಳಿಬಂದಿದೆ. ಬಿಸಿ ಆನಂದ್ ಅವರು ಪಕ್ಷಾತೀತವಾಗಿ ಮುಖಂಡರು, ಡೈರಿ ಅಧ್ಯಕ್ಷರ ವಿಶ್ವಾಸ ಹೊಂದಿರುವ ಕಾರಣ ಪಕ್ಷದಲ್ಲಿರುವವರೇ ಒಳೇಟು ನೀಡ್ತಾರ ಎಂಬ ಆತಂಕ ಜೆಡಿಎಸ್ ಬೆಂಬಲಿಗರದ್ದಾಗಿದೆ.
ಅಂತೆಯೇ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಹೊಂದಿದ್ದರು, ದೊಡ್ಡಬಳ್ಳಾಪುರ ಜೆಡಿಎಸ್ ನಾಯಕರ ವಿಶ್ವಾಸಕ್ಕೆ ಪಡೆಯದೆ ಹೋಗಿದ್ದು, ಜೆಡಿಎಸ್ ಸ್ಪರ್ಧೆಗೆ ಇಳಿದಿರುವುದು, ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸ್ ಬೇಷರತ್ ಬೆಂಬಲ ನೀಡಿರುವುದು ಬಿಜೆಪಿಯಲ್ಲಿ ತಲ್ಲಣವನ್ನು ಸೃಷ್ಟಿಸಿದೆ.
ಗಂಭೀರ ವಿಷಯವೆಂದರೆ ಬಿಸಿ ಆನಂದ್ ಅವರ ಬೆಳವಣಿಗೆಯನ್ನು ಪಕ್ಷದಲ್ಲಿರುವ ಕೆಲವರು ಸಹಿಸುತ್ತಿಲ್ಲ. ಈ ಮುಂಚೆ ವಿಧಾನಸಭೆ ಚುನಾವಣೆ ವೇಳೆ ಬಿಸಿ ಆನಂದ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ವೇಳೆ ಅನೇಕರ ಅಸಮಾಧಾನ ಕಂಡುಬಂದಿತ್ತು. ಅಂತವರು ಈಗ ಮತ್ತೆ ಒಳೇಟನ್ನು ನೀಡಬಹುದೇ ಎಂಬ ಆತಂಕ ಬಿಸಿ ಆನಂದ್ ಅವರ ಬೆಂಬಲಿಗರಲ್ಲಿ ಕಾಡುತ್ತಿದೆ.
ಮತ್ತೊಂದೆಡೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ದೊಡ್ಡಬಳ್ಳಾಪುರ ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಗೆ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಿದ್ದು, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದು ಕೆಲ ಕಾಂಗ್ರೆಸ್ ಪಕ್ಷ ನಿಷ್ಠಾವಂತರ ಬೇಸರಕ್ಕೆ ಕಾರಣವಾಗಿದೆ.
ಸೈದ್ದಾಂತಿಕ ವಿರೋಧ, ದೊಡ್ಡಬಳ್ಳಾಪುರ ತಾಲೂಕಿನ ಬಿಜೆಪಿ ಆಡಳಿತ ವಿರುದ್ಧದ ಬೇಸರ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ವೆಂಕಟರಮಣಯ್ಯ ಅವರಿಗೆ ಆದ ಒಳೇಟಿನ ಪೆಟ್ಟಿಗೆ ತಿರುಗೇಟು ನೀಡಲು ಕಾಂಗ್ರೆಸ್ ಮುಖಂಡರಲ್ಲಿರುವ ಒಗ್ಗಟ್ಟು ಕಂಡುಬರುತ್ತಿದ್ದು, ಜೆಡಿಎಸ್ ಅಭ್ಯರ್ಥಿ ಹುಸ್ಕೂರು ಆನಂದ್ ಅವರಿಗೆ ವರವಾಗಬಹುದಾದರು, ಆದರೆ ಬಿಸಿ ಆನಂದ್ ಅವರು ಈ ಮುಂಚೆ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದವರಾದ ಕಾರಣ ಎಷ್ಟು ಮತಗಳನ್ನು ಸೆಳೆಯುತ್ತಾರೋ ಎಂಬ ಆತಂಕ ಕೂಡ ಕಾಂಗ್ರೆಸ್ ಮುಖಂಡರಲ್ಲಿಯೂ ಇದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಐದು ಹೋಬಳಿಗಳ ಪೈಕಿ ಮಧುರೆ ಹೋಬಳಿ ಬೆಂಗಳೂರು ಉತ್ತರ ತಾಲ್ಲೂಕಿಗೆ ಸೇರಿದೆ. ಉಳಿದಂತೆ ತೂಬಗೆರೆ, ಕಸಬಾ, ದೊಡ್ಡಬೆಳವಂಗಲ ಹಾಗೂ ಸಾಸಲು ಹೋಬಳಿ ದೊಡ್ಡಬಳ್ಳಾಪುರ ಬಮೂಲ್ ನಿರ್ದೇಶಕ ಕ್ಷೇತ್ರಕ್ಕೆ ಸೇರಿದೆ.
ನಿರ್ದೇಶಕ ಸ್ಥಾನಕ್ಕೆ ಮತ ಚಲಾಯಿಸುವ ಹಕ್ಕನ್ನು 202 ಜನ ಹೊಂದಿದ್ದಾರೆ. ತಾಲ್ಲೂಕಿನಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಒಬ್ಬ ನಿರ್ದೇಶಕ ಅಥವಾ ಅಧ್ಯಕ್ಷರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಮತದಾರರ ಓಲೈಕೆಗೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಒಳೇಟನ್ನು ತಡೆಯಲು ಎರಡು ಪಕ್ಷದ ಮುಖಂಡರು ಯಾವ ರೀತಿ ತಡೆದು ಯಶಸ್ವಿಯಾಗುತ್ತಾರೆ ಎಂಬ ಫಲಿತಾಂಶಕ್ಕಾಗಿ ಮೇ.25 ರ ಭಾನುವಾರದ ಸಂಜೆಯವರೆಗೆ ಕಾಯಬೇಕಿದೆ.