ದೊಡ್ಡಬಳ್ಳಾಪುರ: ಕಲಾವಿದರು (Artists) ಮಾಸಾಶನ ಪಡೆಯಲು ವರ್ಷಗಟ್ಟಲೇ ವಿಳಂಬವಾಗುತ್ತಿದ್ದು, ಈ ದಿಸೆಯಲ್ಲಿ ಕಲಾವಿದರ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು, ಕಲಾವಿದರಿಗೆ ನೆರವು ನೀಡಲು ಸರ್ಕಾರ ಮುಂದಾಗಬೇಕಿದೆ ಎಂದು ಕಲಾವಿದರ ಸಂಘದಿಂದ ಒತ್ತಾಯಿಸಲಾಗುತ್ತಿದೆ ಎಂದು ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘ ಒತ್ತಾಯಿಸಿದೆ.
ನಗರದ ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದ ಕಾರ್ಯಾಲಯ ಕಲಾಭವನದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಪ್ರಮುಖರು, ಕಲಾವಿದರು ಈಗಾಗಲೇ ಪಡೆಯುತ್ತಿರುವ ಬೇರೆ ರೀತಿಯ ಮಾಸಾಶನ ನಿಲ್ಲಿಸಿ, ಕಲಾವಿದರ ಮಾಸಾಶನ ಪಡೆಯಲು ಸಹ ವರ್ಷಗಟ್ಟಲೇ ಕಾಯಬೇಕಿದ್ದು, ಯಾವುದೇ ರೀತಿಯ ಮಾಸಾಶನ ದೊರೆಯದೇ ಕಲಾವಿದರು ಮಾಸಾಶನದಿಂದ ವಂಚಿತರಾಗಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ
ಸರ್ಕಾರ ಕಲಾವಿದರಿಗೆ 2500 ರೂ.ಗಳ ಮಾಸಾಶನ ನೀಡುತ್ತಿದೆ. ಇದಕ್ಕೆ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 58 ವರ್ಷ ತುಂಬಿದ ನಂತರ ಅರ್ಜಿ ಹಾಕಬೇಕು. ಮಾಸಾಶನಕ್ಕೆ ಅರ್ಜಿ ಹಾಕಿದ ಮೂರ್ನಾಲ್ಕು ವರ್ಷದ ನಂತರ ಮಾಸಾಶನ ಮಂಜೂರು ಅಗುತ್ತಿದೆ. ಅದರೆ ಅರ್ಜಿ ಹಾಕುವಾಗಲೇ ಇಲಾಖೆಯವರು ಕಂದಾಯ ಇಲಾಖೆಯಿಂದ ನಿಡುವ ವೃದ್ಧಾಪ್ಯ ವೇತನ ಪಡೆಯಬಾರದೆಂದೂ, ಒಂದು ವೇಳೆ ಪಡೆಯುತ್ತಿದ್ದರೂ ಅದನ್ನು ನಿಲ್ಲಿಸಿ, ಅರ್ಜಿ ಹಾಕಬೇಕೆಂದೂ ಹೇಳಿದ್ದಾರೆ.
ಇತ್ತ ಕಲಾವಿದರ ಮಾಸಾಸನವೂ ಇಲ್ಲದೆ ವೃದ್ಧಾಪ್ಯ ವೇತನವೂ ಇಲ್ಲದೆ ಕಲಾವಿದರು ತೊಂದರೆ ಅನುಭವಿಸುತ್ತಿದ್ದಾರೆ.
ಅರ್ಜಿ ಹಾಕಿದ ನಾಲ್ಕೈದು ವರ್ಷದ ನಂತರ ಮಾಸಾಶನ ಮಂಜೂರಾಗುತ್ತಿದೆ. ಈ ದಿಸೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಮಂಜೂರು ಮಾಡಿದ ನಂತರ. ವೃದ್ಧಾಪ್ಯ ವೇತನ ನಿಲ್ಲಿಸಿ, ನಂತರ ಕಲಾವಿದರಿಗೆ ಮಾಸಾಶನ ಬಿಡುಗಡೆ ಮಾಡಬೇಕೆಂದು ಕಲಾವಿದರ ಸಂಘ ಒತ್ತಾಯಿಸುತ್ತಿದೆ.
ಕಲಾವಿದರ ಮಾಸಾಶನಕ್ಕೆ ಅರ್ಜಿ ಹಾಕುವ ಮೊದಲೇ ಕಂದಾಯ ಇಲಾಖೆಯಿಂದ ನೀಡುವ 1,200 ವೃದ್ಧಾಪ್ಯ ವೇತನ ನಿಲ್ಲಿಸುವ ನಿಯಮ ಬದಲಿಸಬೇಕು. ಈ ಬಗ್ಗೆ ಇಲಾಖೆಯ ನಿರ್ದೆಶಕರು ಹಾಗೂ ಸಚಿವರು ಪರಿಸೀಲಿಸಿ ಮರು ಅದೇಶ ಮಾಡಬೇಕು ಎಂದರು.
ಶೀಘ್ರ ಸಂದರ್ಶನ ನಡೆಸಿ
ಕಲಾವಿದರ ಮರಣಾ ನಂತರ ಕಲಾವಿದರ ಪತ್ನಿಯರಿಗೆ ನೀಡುವ ವಿಧವಾ ವೇತನ. ಕೇವಲ 500 ಮಾತ್ರ ಆದರೆ ಅದೇ ಕಂದಾಯ ಇಲಾಖೆಯು ನೀಡುವ ವಿಧವಾ ವೇತನ 1,200 ರೂ ಆಗಿದೆ. ಗ್ಯಾರಂಟಿ ಯೋಜನೆಯ ಎಲ್ಲಾ ಮಹಿಳೆಯರಿಗೂ 2,000 ಬರುತ್ತಿದ್ದು, ಇದರಿಂದ ಕಲಾವಿದರ ಪತ್ನಿಯರಿಗೆ ನೀಡುವ ವಿಧವಾ ವೇತನ ಬಹಳ ಕಡಿಮೆ ಇದ್ದು, ಯಾರೂ ಸಹ ವಿಧವಾವೇತನ ಪಡೆಯಲು ಅರ್ಜಿಗಳನ್ನೇ ಸಲ್ಲಿಸದಂತಾಗಿದ್ದು, ಕಲಾವಿದರಿಗೆ ಅವಮಾನ ಮಾಡಿದಂತೆ ಅಗಿದೆ.
ಈ ದಿಸೆಯಲ್ಲಿ ಸರ್ಕಾರ ಗಮನ ಹರಿಸಿ ಕಲಾವಿದರಿಗೆ ನೀಡುವ ಮಾಸಾಶನದ ಮೊತ್ತ 2,500 ಗಳನ್ನೇ ಕಲಾವಿದರ ಮರಣದ ನಂತರ. ಅವರ ಪತ್ನಿಯರಿಗೂ ನೀಡುವ ಬಗ್ಗೆ ಸರ್ಕಾರ ಮರು ಆದೇಶ ಮಾಡಬೇಕು. ಇನ್ನು ಬಹಳಷ್ಟು ಕಲಾವಿದರು ಅನಾರೋಗ್ಯಕ್ಕೆ ತುತ್ತಾಗಿ, ಸಂಕಷ್ಟದಲ್ಲಿರುತ್ತಾರೆ. ಅಂತಹವರು, ಸಲ್ಲಿಸಿರುವ ಅರ್ಜಿಗಳು ಮಂಜೂರು ಮಾಡಲು ವರ್ಷಗಳೇ ಕಳೆಯುತ್ತವೆ.
ಇತ್ತ ವೃದ್ಯಾಪ್ಯ ವೇತನವೂ ಇಲ್ಲ ಅತ್ತ ಮಾಸಾಶನವೂ ಇಲ್ಲವಾಗಿ ಕಲಾವಿದರು ತ್ರಿಶಂಕು ಸ್ಥಿತಿಯಲ್ಲಿ ಇರಬೇಕಾದ ಸ್ಥಿತಿ ಬಂದಿದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಮಾಸಾಶನಕ್ಕೆ ಅರ್ಜಿಗಳನ್ನು ಹಾಕಿರುವ ಕಲಾವಿದರು ಅದು ಮಂಜೂರಾಗಿ ಬರುವ ಮುಂಚೆಯೇ ಕಲಾವಿದರು ನಿಧನರಾಗಿರುವ ಉದಾಹರಣೆಗಳಿವೆ.
ಅರ್ಜಿ ಹಾಕಿರುವ ಕಲಾವಿದರಿಗೆ ಶೀಘ್ರ ಸಂದರ್ಶನಗಳನ್ನು ನಡೆಸಿ, ಅರ್ಹರಿಗೆ ಕೂಡಲೇ ಮಾಸಾಶನ ಮಂಜೂರು ಮಾಡಲು ಕ್ರಮ ಕೈಗೊಳ್ಳುವ ಮೂಲಕ ಸರ್ಕಾರ ಕಲಾವಿದರ ಹಿತ ಕಾಯಬೇಕೆಂದು ಕಲಾವಿದರ ಸಂಘದಿಂದ ಮನವಿ ಮಾಡಲಾಗುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎನ್ನುವ ಕಲಾವಿದರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೂನ್ 3ರಂದು ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಒಕ್ಕೂಟದಿಂದ ಹಮ್ಮಿಕೊಂಡಿರುವ ವಿಧಾನ ಸೌಧ ಚಲೋ ಬೃಹತ್ ಸಾಂಸ್ಕೃತಿಕ ಹೋರಾಟಕ್ಕೆ ಸಂಘವು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಾಗುತ್ತಿದೆ ಎಂದರು.
ಕಲೆಯನ್ನು ನಂಬಿರುವ ಕಲಾವಿದರು
ಕಲೆಯನ್ನು ನಂಬಿರುವ ಬಹುತೇಕ ಕಲಾವಿದರು ಬಡ ಹಾಗೂ ಆರ್ಥಿಕವಾಗಿ ಹಿಂದುಳಿದವರು, ಹಿಂದುಳಿದ ಸಮುದಾಯದವರಾಗಿದ್ದಾರೆ. ಕಲಾವಿದರು ಹತ್ತಾರು ಸಾವಿರ ಖುರ್ಚು ಮಾಡಿಕೊಂಡು ಕಲಾ ಪ್ರದರ್ಶನ ನೀಡಬೇಕಾಗಿದೆ.
ಕಲಾವಿದರು ಅನಾರೋಗ್ಯಗೊಂಡರೆ ಅವರಿಗೆ ಯಾವುದೇ ನೆರವು ಇರುವುದಿಲ್ಲ. ಈ ದಿಸೆಯಲ್ಲಿ ಸರ್ಕಾರ ಮಾಸಾಶನದ ವಯಸ್ಸನ್ನು 50 ವರ್ಷಕ್ಕೆ ಸೀಮಿತವಾಗಿಸಬೇಕು. ಕಲಾವಿದರಿಗೆ 3 ಸಾವಿರ ರೂ ನೀಡುವ ಭರವಸೆ ಇನ್ನೂ ಈಡೇರಿಲ್ಲ. ಇಂದಿನ ಪರಿಸ್ಥಿತಿಗೆ ತಕ್ಕಂತೆ ಮಾಸಾಶನ 5 ಸಾವಿರ ರೂಗೆ ಏರಿಸಬೇಕು ಎಂದರು.
ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ. ಸಂಘಗಳಿಗೆ ಧನ ಸಹಾಯಗಳು ಸಹ ಬರುತ್ತಿಲ್ಲ. ಕಲಾವಿದರು ಮರಣ ಹೊಂದಿದಾಗಲೂ ಸಹ ಹಣಕ್ಕೆ ಕೊರತೆಯಾಗುವ ಸ್ಥಿತಿ ಇದ್ದು, ಅಂತ್ಯಕ್ರಿಯೆಗೆ 10 ಸಾವಿರ ರೂ ನೀಡಬೇಕಿದೆ ಎಂದು ಕಲಾವಿದರು ಒತ್ತಾಯಿಸಿದರು.