ದೊಡ್ಡಬಳ್ಳಾಪುರ: ರಾಷ್ಟ್ರಾಭಿವೃದ್ಧಿಯಲ್ಲಿ ಅಪೌಷ್ಠಿಕತೆಯು ಒಂದು ತೊಡಕಾಗಿದ್ದು, ಇದನ್ನು ಹೋಗಲಾಡಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಈ ದಿಸೆಯಲ್ಲಿ ಮಹಿಳೆಯರಿಗೆ ಪೌಷ್ಠಿಕತೆಯ ಕುರಿತಾಗಿ ಜಾಗೃತಿ ಮೂಡಬೇಕಾದ ಅಗತ್ಯವಿದೆ ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನಿತಾ ಲಕ್ಷ್ಮೀ ತಿಳಿಸಿದರು.
ತಾಲೂಕಿನ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇಫ್ಕೋ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸಹಯೋಗದಲ್ಲಿ ರಾಷ್ಟ್ರೀಯ ಪೌಷ್ಟಿಕ ಮಾಸದ ಅಂಗವಾಗಿ ನಡೆದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ರೈತ ಮಹಿಳೆಯರಿಗೆ ಪೌಷ್ಠಿಕ ಆಹಾರದ ಬಗ್ಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರದೆಲ್ಲೆಡೆ ಸೆಪ್ಟೆಂಬರ್ ತಿಂಗಳನ್ನು ರಾಷ್ಟ್ರೀಯ ಪೌಷ್ಠಿಕ ಮಾಹೆಯಾಗಿ ಆಚರಣೆಯಾಗುತ್ತಿದ್ದು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು, ಕುಟುಂಬಗಳಲ್ಲಿ ಅರಿವು ಮೂಡಿಸುವ ಜವಾಬ್ದಾರಿ ಹೊರುವಲ್ಲಿ ಹಾಗೂ ರೂಡಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಮರ್ಥರು ಎಂದು ಭಾವಿಸಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದ ಅವರು ಪೌಷ್ಠಿಕ ಆಹಾರದ ಅಗತ್ಯತೆ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಉದ್ಧೇಶದಿಂದ ಮಿತವಾಗಿ ತಿನ್ನಿ, ಹಿತವಾಗಿ ತಿನ್ನಿ ಎನ್ನುವುದು ಈ ವರ್ಷದ ಆಚರಣೆಯ ಧ್ಯೇಯ ವಾಕ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಪಿ. ಮಲ್ಲಿಕಾರ್ಜುನ ಗೌಡ ಮಾತನಾಡಿ, ಈಗ ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬನೆಯನ್ನು ಹೊಂದಿದ್ದು, ಪೋಷಕಾಂಶಗಳ ಭದ್ರತೆ ಬಗ್ಗೆ ಇನ್ನು ಸಾಧಿಸಬೇಕಾಗಿರುವುದು ಬಹಳಷ್ಟಿದೆ. ಉತ್ತಮ ಆರೋಗ್ಯಕ್ಕೆ ಬೇಕಾಗುವ ಸಮತೋಲನ ಪೌಷ್ಠಿಕ ಆಹಾರದ ಸೇವನೆಯ ಅಗತ್ಯವಾಗಿದೆ. ಅಪೌಷ್ಠಿಕತೆಯಿಂದ ಕಾಡುವ ಸಮಸ್ಯೆಗಳು ಮತ್ತು ಅವುಗಳ ನಿವಾರಣೆ ಹಾಗೂ ಶರೀರದ ಅವಶ್ಯಕತೆಗಳನ್ನು ಪೂರೈಸುವ ಆಹಾರ ಪದಾರ್ಥಗಳ ಬಗ್ಗೆ ಅರಿಯಬೇಕಿದೆ ಎಂದರು.
ಇಫ್ಕೋ ಕ್ಷೇತ್ರಾಧಿಕಾರಿ ಎಚ್.ಎಂ.ಸತೀಶ್ ಕುಮಾರ್ ಮಾತನಾಡಿ, ವಿಶ್ವದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್-19 ವೈರಾಣುವನ್ನು ನಿಯಂತ್ರಿಸಲು ವೈಯುಕ್ತಿಕ ಸ್ವಚ್ಚತೆಯ ಬಗ್ಗೆ ತಿಳಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಮಾಸ್ಕ್ ಮತ್ತು ತರಕಾರಿ ಬೀಜಗಳ ಕಿಟ್ಗಳನ್ನು ವಿತರಿಸಿದರು.
ತಾಂತ್ರಿಕ ಸಮಾವೇಶದಲ್ಲಿ ಪೌಷ್ಟಿಕ ಕೈತೋಟದ ಮಾದರಿಗಳು, ಪೌಷ್ಟಿಕಾಂಶ ಭದ್ರತೆಗಾಗಿ ಸಮತೋಲನ ಆಹಾರ ಪದ್ಧತಿ ಮತ್ತು ಪೋಷಣೆಗಾಗಿ ಜೈವಿಕ ಬಲವರ್ಧಕಗಳು, ಹಣ್ಣು ಮತ್ತು ತರಕಾರಿ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪೋಷಣ್ ಅಭಿಯಾನ ಯೋಜನಾ ಸಹಾಯಕ ಲಕ್ಷ್ಮಿಪತಿ, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.

