
ಬೆಂಗಳೂರು: ವಿದೇಶಿ ಶೈಲಿಯಲ್ಲಿ ಪ್ರೇಮ ನಿವೇದನೆ ಮಾಡುವೆ ಎಂದು ಹೇಳಿದ ಪ್ರಿಯತಮೆ (Lover), ಪ್ರಿಯಕರನ ಕೈಕಾಲು ಕಟ್ಟಿ, ಕಣ್ಣಿಗೆ ಬಟ್ಟೆ ಸುತ್ತಿ ಪೆಟ್ರೋಲ್ ಸುರಿದು ಆತನಿಗೆ ಬೆಂಕಿ ಇಟ್ಟು ಹತ್ಯೆ ಮಾಡಿರುವ ಭೀಕರ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ಮೃತ ಕಿರಣ್ ಮತ್ತು ಆರೋಪಿ ಯುವತಿ ಪ್ರೇರಣಾ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಮಂಗಳವಾರ ಪ್ರೇರಣಾ ತನ್ನ ಪ್ರಿಯಕರ ಕಿರಣ್ನನ್ನು ಮನೆಗೆ ಕರೆದಿದ್ದಳು. ಅಂದು ಆಕೆಯ ತಾಯಿ ಮತ್ತು ಅಣ್ಣ ಮನೆಯಲ್ಲಿ ಇಲ್ಲದಿದ್ದನ್ನು ನೋಡಿ, ಕಿರಣ್ ಮನೆಗೆ ಬಂದಿದ್ದನಂತೆ. ಇದೇ ಸಂದರ್ಭದಲ್ಲಿ ಯುವತಿ ಪ್ರೇರಣಾ ‘ನಿನಗೆ ವಿದೇಶಿ ಶೈಲಿಯಲ್ಲಿ ಪ್ರಪೋಸ್ ಮಾಡುತ್ತೇನೆ’ ಎಂದು ಹೇಳಿ ಕಿರಣ್ನ ಕಣ್ಣಿಗೆ ಬಟ್ಟೆ ಕಟ್ಟಿ, ಕೈಕಟ್ಟಿ, ಕೈ-ಕಾಲುಗಳನ್ನು ಹಗ್ಗದಿಂದ ಬಿಗಿದಿದ್ದಾಳೆ.
ಕಿರಣ್ ‘ಯಾಕೆ ಇಷ್ಟು ಟೈಟ್ ಆಗಿ ಕಟ್ಟುದ್ದೀಯಾ?’ ಎಂದು ಕೇಳಿದಾಗ, ‘ಇದು ಫಾರಿನ್ ಶೈಲಿ, ಸುಮ್ಮನಿರು’ ಎಂದು ನಂಬಿಸಿದ್ದಾಳೆ. ಕಿರಣ್ ಕೈಕಾಲು ಬಿಡಿಸಿಕೊಳ್ಳಲಾಗದೇ ಸಂಪೂರ್ಣ ಅಸಹಾಯಕನಾದ ಮೇಲೆ ಆಕೆ ಆತನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲಾಗದೆ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಭೀಕರ ಕೃತ್ಯ ನಡೆಯುವ ದೃಶ್ಯವನ್ನು ಯುವತಿ ತನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾಳೆ.
ಬಳಿಕ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಕಿರಣ್ ಬೈಕ್ನಲ್ಲಿ ಬಂದಾಗ ಯಾವುದೇ ಪೆಟ್ರೋಲ್ ಕ್ಯಾನ್ ತಂದಿರಲಿಲ್ಲ ಎಂಬುದು ತಿಳಿದುಬಂದಿದೆ. ಇದರಿಂದಾಗಿ ಪೆಟ್ರೋಲ್ ಅನ್ನು ಯುವತಿ ಮೊದಲೇ ತಂದಿಟ್ಟಿದ್ದಳು ಎಂಬ ಅನುಮಾನ ದಟ್ಟವಾಗಿದೆ. ಹೀಗಾಗಿ ಯುವತಿಯನ್ನು ಬ್ಯಾಡರಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ಪ್ರಕಾರ, ಯುವತಿ ಪ್ರೇರಣಾ ತನ್ನ ಪ್ರಿಯಕರ ತನ್ನನ್ನು ಬೇಕೆಂದೇ ದೂರವಿಡುತ್ತಿದ್ದಾನೆ ಎಂದು ಅನುಮಾನಗೊಂಡಿದ್ದಳು. ತನಗೆ ಸಮಯ ನೀಡುತ್ತಿಲ್ಲ. ತನ್ನೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ. ತನ್ನ ಪ್ರೀತಿಯನ್ನು ನಿರ್ಲಕ್ಷಿಸುತ್ತಿದ್ದಾನೆ ಎಂದು ಕೋಪಗೊಂಡಿದ್ದಳು. ಇದೇ ಕಾರಣಕ್ಕೆ ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ.
ದೊಡ್ಡಬಳ್ಳಾಪುರ: ಹಾಡಹಗಲೇ 2 ಮನೆ ಬೀಗ ಒಡೆದು ಒಡವೆ, ನಗದು ಕಳ್ಳತನ.. ಮಹಿಳೆಯ ಮಾಂಗಲ್ಯ ಸರ ಕಸಿದ ದುಷ್ಕರ್ಮಿಗಳು

ದೊಡ್ಡಬಳ್ಳಾಪುರ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಮನೆ ಬೀಗ ಒಡೆದು, ಒಡವೆ, ನಗದು ( jewellery, cash) ಕಳ್ಳತನ ನಡೆಸಿರುವ ಪ್ರಕರಣಗಳು ವರದಿಯಾಗಿದ್ದು, ತಾಲೂಕಿನ ಜನರನ್ನು ಆತಂಕಕ್ಕೆದೂಡಿದೆ.
ಹೌದು ಸೋಮವಾರವಷ್ಟೆ ತಾಲೂಕಿನ ಎಸ್.ನಾಗೇನಹಳ್ಳಿ ಗ್ರಾಮದ ಬೊಮ್ಮರಾಜುರವರ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿರುವ ದುಷ್ಕರ್ಮಿಗಳು, ಮನೆಯಲ್ಲಿದ್ದ ಬೀರುಗಳನ್ನು ಹೊಡೆದು, ಚಿನ್ನಾಭರಣ ಮತ್ತು ಹಣ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ನಾಗೇನಹಳ್ಳಿಯಲ್ಲಿ ನಡೆದಿದೆ.
ಬೊಮ್ಮರಾಜು ಅವರ ಕೆಲಸದ ನಿಮಿತ್ತ ಹಾಗೂ ಮೆನೆಯವರು ತೋಟದ ಕೆಲಸಕ್ಕೆ ಹೋಗಿರುವಾಗ, ಮನೆಯ ಬಾಗಿಲು ಮುರಿದು ಒಳ ನುಗ್ಗಿ, ಬೀರುವಿನಲ್ಲಿದ್ದ ಚಿನ್ನಾಭರಣಗಳು ಹಾಗೂ 1.39 ಲಕ್ಷ ರೂ ನಗದು ದೋಚಿ ಪರಾರಿಯಾಗಿದ್ದಾರೆ.
ಆಲಹಳ್ಳಿ ಮನೆ ಕಳವು..!
ಮತ್ತೊಂದು ಪ್ರಕರಣದಲ್ಲಿ ಮಂಗಳವಾರ ಆಲಹಳ್ಳಿಯ ಆಶಾ ನಾಗೇಶ್ ಎನ್ನುವವರು ಜಮೀನಿಗೆ ತೆರಳಿದ್ದ ವೇಳೆ ಮನೆ ಬೀಗ ಮುರಿದು ಮನೆ ನುಗ್ಗಿರುವ ದುಷ್ಕರ್ಮಿಗಳು, ಒಡವೆ, ನಗದು ದೋಚಿ ಪರಾರಿಯಾಗಿದ್ದಾರೆ.
ಈ ವೇಳೆ ಸುಮಾರು ಒಂದುವರೆ ಲಕ್ಷ ಮೌಲ್ಯದ, ಚಿನ್ನ, ಬೆಳ್ಳಿ ಹಾಗೂ ನಗದನ್ನು ದೋಚಿದ್ದಾರೆ.
ಚಿನ್ನದ ಮಾಂಗಲ್ಯ ಸರ ದೋಚಿದ ದುಷ್ಕರ್ಮಿಗಳು
ಇನ್ನೊಂದು ಪ್ರಕರಣದಲ್ಲಿ ವಾಕಿಂಗ್ ಗೆಂದು ತೆರಳಿದ್ದ ಮಹಿಳೆಯ ಹಿಂಬಾಲಿಸಿದ ದುಷ್ಕರ್ಮಿ, ಸುಮಾರು 69 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಸಿದು ಪರಾರಿಯಾಗಿರುವ ಘಟನೆ ತಾಲೂಕಿನ ಕೊನಘಟ್ಟದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಕೊನಘಟ್ಟ ಗ್ರಾಮದ ಗಾಯತ್ರಿ ಎನ್ನುವ ಮಹಿಳೆ ವಾಕಿಂಗ್ಗೆಂದು ಇಂದು ಬೆಳಗ್ಗೆ ತೆರಳುಚ ವೇಳೆ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿ, ಮಾಂಗಲ್ಯ ಸರ ಕಸಿದು, ಮತ್ತೋರ್ವ ತಂದಿದ್ದ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
