ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಬಿಜೆಪಿ ‘ಗ್ರಾಮ ಸ್ವರಾಜ್ಯ’ ಸಮಾವೇಶಗಳನ್ನು ನಡೆಸುತ್ತಿದೆ. ಗಾಂಧೀಜಿ ಪರಿಕಲ್ಪನೆಗೆ ಬಿಜೆಪಿ ಮನ್ನಣೆಕೊಟ್ಟಿದ್ದು ಸಂತೋಷದಾಯಕ. ಸಂಘಟನೆ ಉದ್ದೇಶದ ಈ ಸಮಾವೇಶಗಳು ಗ್ರಾಮಗಳನ್ನು ವಿಶ್ವಾಸಕ್ಕೆ ಪಡೆಯುಲು, ಸಮಸ್ಯೆಗಳನ್ನು ಪರಿಹರಿಸಲು ಬಳಕೆಯಾಗಲಿ. ಈ ಮೂಲಕ ಗ್ರಾಮ ಸ್ವರಾಜ್ಯದ ನಿಜ ಉದ್ದೇಶ ಸಾಕಾರವಾಗಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಕಾರ್ಯಕ್ರಮವನ್ನು ಬೆಂಬಲಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಬಿಜೆಪಿಯ ಗ್ರಾಮಸ್ವರಾಜ್ಯ ಎಂಬುದು ಸಂಘಟನೆ ಉದ್ದೇಶದ ಸಮಾವೇಶವಾದರೂ, ಅವುಗಳನ್ನು ಹಳ್ಳಿಗಳ ಹಂತಕ್ಕೆ ಕೊಂಡೊಯ್ಯಬೇಕು ಎಂದು ನಾನು ಒತ್ತಾಯಿಸುತ್ತೇನೆ. ಆಮೂಲಕವಾದರೂ ನಮ್ಮ ಹಳ್ಳಿಗಳ ಜ್ವಲಂತ ಸಮಸ್ಯೆಗಳು ಬಿಜೆಪಿ ಸಚಿವರು, ಶಾಸಕರು ಮತ್ತು ಸರ್ಕಾರದ ಅರಿವಿಗೆ ಬರಲಿ. ಹಾಗಾದರೂ ಹಳ್ಳಿ ಜನರ ಸಮಸ್ಯೆಗಳು ಶಾಶ್ವತವಾಗಿ ನೀಗಲಿ ಎಂದು ಆಶಿಸುತ್ತೇನೆ.
‘ಗ್ರಾಮ ಸ್ವರಾಜ್ಯ’ ಸಮಾವೇಶಗಳು ಕೇವಲ ಪಕ್ಷ ಸಂಘಟನೆಗಷ್ಟೇ ಸೀಮಿತವಾದರೆ ಅದು ಸ್ವಾರ್ಥವಾಗುತ್ತದೆ. ಗ್ರಾಮಗಳನ್ನು ಸಶಕ್ತಗೊಳಿಸಲು ಈ ಕಾರ್ಯಕ್ರಮವನ್ನು ಬಿಜೆಪಿ ಬಳಸಿಕೊಂಡಿದ್ದೇ ಆದರೆ, ಗ್ರಾಮ ಸ್ವರಾಜ್ಯದ ಹೆಸರಿಗೆ ಅರ್ಥ ಸಿಗುತ್ತದೆ. ಹಳ್ಳಿ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂಬುದು ನನ್ನ ಅನಿಸಿಕೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಲಿ.
ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಗ್ರಾಮ ಸ್ವರಾಜ್ಯ ಕಾರ್ಯಕ್ರಮಗಳು ನೆರೆ ಪೀಡಿತ ಗ್ರಾಮಗಳನ್ನು ಕೇಂದ್ರೀಕರಿಸುವುದು ಅಗತ್ಯ. ಬಿಜೆಪಿ ನಾಯಕರು ಆ ಗ್ರಾಮಗಳಿಗೆ ಭೇಟಿ ನೀಡಲಿ. ಅಲ್ಲಿನ ಸಮಸ್ಯೆಗಳು, ಮನೆಗಳನ್ನು ಕಳೆದುಕೊಂಡ ನಿರಾಶ್ರಿತರ ಪರದಾಟ, ದುಃಖ ದುಮ್ಮಾನಗಳನ್ನು ಕಣ್ಣಾರೆ ಕಂಡು ಅವರಿಗೆ ಪರಿಹಾರ ಒದಗಿಸಬೇಕೆಂದು ಬಯಸುತ್ತೇನೆ ಎಂದಿದ್ದಾರೆ.
ಕ್ಷಣ ಕ್ಷಣದ ತಾಜಾ ಸುದ್ದಿ, ಮಾಹಿತಿಗಾಗಿ Harithalekhaniಯನ್ನು Facebook / Twitterಗಳಲ್ಲಿ ಫಾಲೋ ಮಾಡಿ

