ದೊಡ್ಡಬಳ್ಳಾಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರಿಗೆ ಬೇಡವಾದ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗುವ ಯಾವುದೇ ಪಕ್ಷ ಹೆಚ್ಚು ದಿನ ಆಡಳಿತದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಪ್ರಾಂತ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಸವರಾಜು ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುಂತೆ ರೈತ-ಕಾರ್ಮಿಕ-ದಲಿತ ಹಾಗೂ ಕನ್ನಡ ಪರ ಸಂಘಟನೆಗಳ ವತಿಯಿಂದ ಸೋಮವಾರ ನಗರದ ಸಿದ್ದಲಿಂಗಯ್ಯ ವೃತ್ತದಿಂದ ಆರಂಭವಾದ ಜನ ಜಾಗೃತಿ ಜಾಥಾ ಸಭೆಯಲ್ಲಿ ಮಾತನಾಡಿದರು.
ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಇತ್ತೀಚೆಗೆ ಜಾರಿಗೆ ತರುತ್ತಿರುವ ಎಲ್ಲಾ ಕಾಯ್ದೆಗಳು ಜನ ವಿರೋಧಿಯಾಗಿವೆ. ಬಹು ಸಂಖ್ಯಾತ ಜನರಿಗೆ ಅಗತ್ಯವಿಲ್ಲದ ಕಾನೂನುಗಳನ್ನು ಜಾರಿಗೆ ತರುವುದರ ಉದ್ದೇಶವಾದರು ಏನಿದೆ ಎಂದು ಪ್ರಶ್ನಿಸಿದ ಅವರು, ಕೃಷಿ ಕಾಯ್ದೆಗಳು ರೈತರ ಅನುಕೂಲಕ್ಕಾಗಿ ರೂಪಿತವಾಗಿಲ್ಲ. ಕಲವೇ ಕೆಲವು ಖಾಸಗಿ ಕಂಪನಿಗಳನ್ನು ಮತ್ತಷ್ಟು ಶ್ರೀಮಂತವಾಗಿಸುವ ಗುರಿ ಹೊಂದಿವೆ. ದೆಹಲಿಯ ಗಡಿ ಪ್ರದೇಶದಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕೇಂದ್ರ ಸರ್ಕಾರ ತಕ್ಕ ಬೆಲೆ ತೆರಲೇಬೇಕಿದೆ. ದೇಶದ ಇತಿಹಾಸದಲ್ಲೇ ರೈತರು ನಡೆಸುತ್ತಿರುವ ಬೃಹತ್ ಧರಣಿ ಇದಾಗಿದೆ. ರೈತರ ನಿರಂತರ ಧರಣಿಯ ಶ್ರಮ ವಿಫಲವಾಗುವುದಿಲ್ಲ ಎನ್ನುವ ವಿಶ್ವಾಸ ಇದೆ ಎಂದರು.
ಜಾಗೃತಿ ಜಾಥಾ ಉದ್ಘಾಟನೆಯಲ್ಲಿ ಭಾಗಹಿಸಿದ್ದ ಶಾಸಕ ಟಿ.ವೆಂಕಟರಮಣಯ್ಯ, ಕೃಷಿ ಕಾಯ್ದೆಗಳ ವಿರುದ್ಧ ನಮ್ಮ ದೇಶದಲಷ್ಟೇ ಅಲ್ಲದೆ ವಿದೇಶಿಯರು ಸಹ ದ್ವನಿ ಎತ್ತಿದ್ದಾರೆ. ಇಷ್ಟಾದರು ಸಹ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಮಕ್ಕಳು ಹಠ ಮಾಡುವಂತೆ ಕಾಯ್ದೆಗಳನ್ನು ಜಾರಿಗೆ ತರುವ ಮಾತನ್ನೇ ಹೇಳುತ್ತಿದ್ದಾರೆ. ಅಲ್ಲದೆ ಪ್ರಾಮಾಣಿಕ ಸತ್ಯಾಗ್ರಹಿಸಿಗಳ ವಿರುದ್ದ ಅಪಪ್ರಚಾರ ನಡೆಸುವುದು ಖಂಡನೀಯ. ಬಿಜೆಪಿ ಅಧಿಕಾರಕ್ಕೆ ಬಂದರೆ ದಿನ ಬಳಕೆ ವಸ್ತುಗಳು, ಪೆಟ್ರೋಲ್,ಡೀಸೆಲ್ ಬೆಲೆ ಅತ್ಯಂತ ಕಡಿಮೆಯಾಗಲಿವೆ ಎನ್ನುವ ಪ್ರಚಾರ ಮಾಡಲಾಗುತಿತ್ತು. ಆದರೆ ಮತದಾರರಿಗೆ ಈಗ ಅರ್ಥವಾಗಿದೆ ಯಾವ ಪಕ್ಷದ ಆಡಳಿತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಎಷ್ಟು ಇತ್ತು ಎನ್ನುವುದು. ಮತದಾರರನ್ನು ಸದಾ ಕಾಲವು ವಂಚಿಸಲು ಸಾಧ್ಯವಾಗುವುದಿಲ್ಲ ಎಂದರು.
ಕೃಷಿ ಕಾಯ್ದೆಗಳ ವಿರುದ್ಧದ ಜಾಗೃತಿ ಜಾಥಾ ಉದ್ಘಾಟನೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡರಾದ ಕೆ.ಸುಲೋಚನಮ್ಮವೆಂಕಟರೆಡ್ಡಿ, ಜಿಲ್ಲಾ ಅಧ್ಯಕ್ಷ ಪ್ರಸನ್ನ, ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಕನ್ನಡ ಪಕ್ಷದ ಅಧ್ಯಕ್ಷ ಸಂಜೀವನಾಯ್ಕ್, ಕಾರ್ಯದರ್ಶಿ ಡಿ.ಪಿ.ಆಂಜನೇಯ,ಬಿಎಸ್ಪಿ ಮುಖಂಡ ಪುರುಷೋತ್ತಮ, ದಲಿತ ಸಂಘಟನೆಯ ರಾಜುಸಣ್ಣಕ್ಕಿ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.

