
ದೊಡ್ಡಬಳ್ಳಾಪುರ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸಮಿತಿಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ನೆಲದಾಂಜನೆಯ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಟಾಂಗಾ ಓಡಿಸಿದರೆ, ಇತರೆ ಮುಖಂಡರು ಕತ್ತೆಗಳ ಮೆರವಣಿಗೆ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲ್ಲೂಕು ಕಛೇರಿಯ ವೃತ್ತದಲ್ಲಿ ತಹಶಿಲ್ದಾರ್ ಟಿ.ಎಸ್.ಶಿವರಾಜ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೇಸರಿ ಶಾಲು ಹೊದ್ದು ಗೋರಕ್ಷಣೆ ಹೆಸರಲ್ಲಿ ಪುಂಡ ಪೋಕರಿಗಳು ರೈತರ ಮೇಲೆ ಹಲ್ಲೆ: ಮಾಜಿ ಸಚಿವ ಕೃಷ್ಣಾಬೈರೇಗೌಡ ಮಾತನಾಡಿ, ಇಂದು ಪೆಟ್ರೋಲ್ ಡಿಸೇಲ್ ಮತ್ತು ಗ್ಯಾಸ್ ಬೆಲೆ ದಿನೇ ದಿನೇ ಏರಿಕೆಯಾಗುತ್ತಿರುವುದಲ್ಲದೆ, ದೇಶದ ರೈತರ ವಿರೋಧಿ ನೀತಿಗಳನ್ನು ಜಾರಿ ಮಾಡಿ, ಭಾರತದ ಇತಿಹಾಸದಲ್ಲೇ ಎಲ್ಲಾ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದಕ್ಕೆ ಮೋದಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕಾಗಿದೆ.
ಪ್ರಪಂಚದ 192 ದೇಶಗಳಲ್ಲಿ ಇರದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಮ್ಮಲ್ಲೇ ಜಾಸ್ತಿ ಇರುವುದು ಭಾರತೀಯರಾದ ನಮಗೆ ಶೋಚನೀಯ. ಪೆಟ್ರೋಲ್ ಮತ್ತು ಡೀಸೆಲ್ ಸರ್ಕಾರಕ್ಕೆ ತಗಲುವ ಬೆಲೆ ಕೇವಲ 30ರೂ ಆದರೂ ಸಹ ಜನರಿಗೆ 60ರೂ ಟ್ಯಾಕ್ಸ್ ವಿಧಿಸಿ 100ರೂ ಆಸು ಪಾಸಿನಲ್ಲಿ ವಿತರಿಸುತ್ತಿರುವ ಸರ್ಕಾರ ಎಲ್ಲರಿಗೂ ಹೊರೆಯಾಗಿಸಿದೆ. ಅಡಿಗೆ ಅನಿಲದ ಬೆಲೆಯೂ ಸಹ ಸಬ್ಸಿಡಿ ಹೆಸರಿನಲ್ಲಿ ಪದೇ ಪದೇ ಹೆಚ್ಚಿಸುತ್ತಿದ್ದು 400ರೂ ಇದ್ದ ಸಿಲಿಂಡರ್ ಬೆಲೆಯನ್ನು 800ರ ಗಡಿಗೆ ತಲುಪಿದೆ, ಈಗಿನ ಕಾಲಮಾನದಲ್ಲಿ ಪೆಟ್ರೋಲ್ ಡಿಸೇಲ್ ಮತ್ತು ಗ್ಯಾಸ್ ಎಲ್ಲಾ ಜನಸಾಮಾನ್ಯರು ಬಳಸುವ ಪ್ರತಿ ನಿತ್ಯ ಅಗತ್ಯ ವಸ್ತುಗಳಾಗಿವೆ, ಅಂಬಾನಿ ಮತ್ತು ಆಧಾನಿ ಯಂತಹ ವ್ಯಾಪಾರಿಗಳಿಗೆ ಸುಂಕ ವಿಧಿಸದೆ ಕೇವಲ ಬಡವರ ಮೇಲೆ ಮಾತ್ರ ವಿಧಿಸುತ್ತಾ ಬಡವರ ಮತ್ತು ಜನಸಾಮಾನ್ಯರ ರಕ್ತ ಹೀರುವ ಸರ್ಕಾರವಾಗಿದೆ.
ಕರೊನಾ ಎಂಬ ಮಹಾಮಾರಿಯಿಂದ ಹಲವಾರು ಕಾರ್ಖಾನೆಗಳು ಮತ್ತು ವ್ಯವಹಾರಗಳು ನಷ್ಟ ವಾಗಿದ್ದರೂ ಸಹ ಅಂಬಾನಿ ಮತ್ತು ಆಧಾನಿರವರು ಮಾತ್ರ ಹಾಗೆ ಇದ್ದಾರೆಂದರೆ ಕಾರಣ ಕೇಂದ್ರ ಸರ್ಕಾರ. ಇದು ಮೋದಿ ಸರ್ಕಾರವಲ್ಲ ಅಂಬಾನಿ ಮತ್ತು ಅದಾನಿ ಸರ್ಕಾರ ಎಂದು ಆರೋಪಿಸಿದರು.
ಕರೊನಾ ಸಂಕಷ್ಟದಿಂದ ಜನಸಾಮಾನ್ಯರಿಗೆ ಜೀವನ ನಡೆಸುವುದೇ ಕಷ್ಟವಾದ ಸಂದರ್ಭ ಎದುರಾಗಿದ್ದರು ಈ ದಿನಬಳಕೆ ವಸ್ತುಗಳ ಏರಿಕೆ ಬಡವರಿಗೆ ಮಾರಕವಾಗಿದೆ,ರೈತರು ಬೆಳೆದ ಬೆಳೆಗಳಿಗೆ ಎಪಿಎಂಸಿ ತಿದ್ದುಪಡಿ ಕಾಯ್ದೆ ತಂದು ಸಂದಿಗ್ದ ಪರಿಸ್ಥಿತಿ ಏರ್ಪಾಡಾಗಿದೆ, ಪ್ರತಿಭಟನೆಯಲ್ಲಿ ನವದೆಹಲಿ ಮತ್ತು ಪಂಜಾಬ್ ನಲ್ಲಿ 200 ಕ್ಕೂ ಹೆಚ್ಚು ರೈತರು ಸಾವನಪ್ಪಿರುವುದು ಸರ್ಕಾರಕ್ಕೆ ಕಾಣಲಿಲ್ಲ, ನೇಗಿಲಯೋಗಿ ಅನ್ನದಾತರ ಜೀವನವನ್ನು ಹಾಳುಮಾಡಿ, ರೈತರ ಮನೆಯ ದೀಪ ಆರಿಸುವಲ್ಲಿ ಯಶಸ್ವಿಯಾಗಿದೆ.
ಗೋ ಹತ್ಯೆ ನಿಷೇಧ ಕಾನೂನು ಸಹ ರೈತರಿಗೆ ಹೊರೆಯಾಗಿದೆ ಹಸು, ಕರು,ಎಮ್ಮೆಯಂತಹ ಗಂಡು ಕರುಗಳನ್ನು ಹಾಗೂ ವಯಸ್ಸಾದ ಜಾನುವಾರುಗಳನ್ನು ಸಹ ಮಾರುವಂತಿಲ್ಲ ಎಂಬ ಕಾನೂನು ಬಂದಿದ್ದು ರೈತರಿಗೆ ಹೊರೆಯಾಗಿದೆ, ಕೇಸರಿ ಶಾಲು ಹೊದ್ದು ಗೋರಕ್ಷಣೆ ಹೆಸರಲ್ಲಿ ಪುಂಡ ಪೋಕರಿಗಳು ರೈತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ನಂತರ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ನಮ್ಮ ದೇಶದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಚ್ಛೇದಿನ್ ಎಂದು ಇಂದು ದೇಶಕ್ಕೆ ಮಾರಕವಾಗಿದೆ, ದೇಶದ ಬ್ರಿಟೀಷ್ ಆಡಳಿತ ನೆನಪಿಸುವಂಥಹ ಸರ್ಕಾರ ನಮ್ಮ ಮುಂದಿದೆ. ಪ್ರಜಾಪ್ರಭುತ್ವ ಮರೆತು ಸರ್ವಾಧಿಕಾರ ಧೋರಣೆ ತೋರುತ್ತಿರುವ ಸರ್ಕಾರ ಇದಾಗಿದೆ. ದೇಶಕ್ಕೆ ಸಾಲವೆಂಬ ಹೊರೆ ಹೊರಿಸುವುದು ಬಿಟ್ಟರೆ ಯಾವುದೇ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡುತ್ತಿಲ್ಲ, ಎಷ್ಟೋ ಕಾರ್ಖಾನೆಗಳು ಮುಚ್ಚಿ ಹೋಗಿ ನಿರುದ್ಯೋಗಿಗಳಾಗಿ ಜನತೆ ಪರದಾಡುತ್ತಿದ್ದಾರೆ, ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುತ್ತಿರುವ ಬಿಜೆಪಿ ಸರ್ಕಾರ ದೇಶ ರಾಜ್ಯದ ಅಭಿವೃದ್ಧಿ ಮನೆ ಮನೆ ಗೆ ಮುಟ್ಟುವ ಕಾರ್ಯ ಮಾಡುವಲ್ಲಿ ಕಾಂಗ್ರೆಸ್ ಪಕ್ಷ ಶ್ರಮಿಸಿದ ಎಲ್ಲ ಕಾರ್ಯಗಳನ್ನು ನೆನೆಗುದಿಯುವಂತೆ ಮಾಡಿದೆ ಎಂದರು.
ವಿಧಾನ ಪರಿಷತ್ ಸದಸ್ಯ ರವಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕರಾಳ ಶಾಸನಗಳು ಹಾಗೂ ಜನವಿರೋಧಿ ಕಾರ್ಯಗಳನ್ನು ಉಗ್ರವಾಗಿ ಖಂಡಿಸಬೇಕಿದೆ. ಈ ಸರ್ಕಾರಗಳು ಜನರ ಮನದಲ್ಲಿ ಹತಾಶೆ ಭಾವನೆಗಳನ್ನು ಮೂಡಿಸಿದೆ, ರಾಮರಾಜ್ಯದ ಧ್ಯೇಯವಿಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇಂದು ಬಡ ಕಾರ್ಮಿಕರ, ಕೂಲಿ ಕಾರ್ಮಿಕರ ಬಾಳನ್ನು ಹದಗೆಡಿಸಿದೆ. ಅಧಿಕಾರ ಮತ್ತು ಹಣದ ಆಸೆಯಿಂದ ಸಂವಿಧಾನ ವಿರೋಧಿ ನೀತಿಗಳನ್ನೇ ಜಾರಿಮಾಡಿಕೊಂಡು ಜನಸಾಮಾನ್ಯರ ಭಾವನೆಗಳಿಗೆ ಕೊಳ್ಳಿ ಇಟ್ಟು ಸರ್ವಾಧಿಕಾರ ಆಡಳಿತವನ್ನು ನಡೆಸುತ್ತಿದೆ. ಅಚ್ಛೇದಿನ್ ಎಂಬ ಭರವಸೆಯ ಮರೀಚಿಕೆಯನ್ನು ಜನರಿಗೆ ತೋರಿಸಿ ಜನರನ್ನು ಸಂಕಷ್ಟಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದೆ ವಿದ್ಯಾರ್ಥಿಗಳ ಹಾದಿಯಾಗಿ ಎಲ್ಲರಿಗೂ ಈ ಸರ್ಕಾರ ವಿರೋಧ ನೀತಿಗಳನ್ನೇ ಜಾರಿಗೊಳಿಸಿದೆಯೇ ಹೊರತು ಯಾವುದೇ ಜನರಿಗೆ ಉಪಕಾರವಾಗಿಲ್ಲ. ಜನಸಾಮಾನ್ಯರ ದೇಶವನ್ನು ವ್ಯಾಪಾರಿಗಳಿಗೆ ಮಾರುತ್ತಿದೆ. ರೈತ ವಿರೋಧಿ ಕಾನೂನುಗಳು ಜಾರಿತಂದು ರೈತರನ್ನು ಬೀದಿಗಿಳಿಸಿ ರೈತರ ಪ್ರತಿಭಟನೆಗೆ ಕಿಂಚಿತ್ತೂ ಬೆಲೆ ಕೊಡದೆ ತನ್ನದೇ ಆದ ನಿಲುವು ಪ್ರದರ್ಶನ ಮಾಡುತ್ತಿರುವ ಸರ್ಕಾರದ ವಿರುದ್ದ ಇಂದು ಎಲ್ಲರೂ ಒಂದಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ನಗರ ಘಟಕದ ಅಧ್ಯಕ್ಷ ಅಂಜನಮೂರ್ತಿ, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್, ಜಿಪಂ ಸದಸ್ಯ ಚುಂಚೇಗೌಡ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್ ಮುಖಂಡರಾದ ತಿ.ರಂಗರಾಜು, ಕೃಷ್ಣಮೂರ್ತಿ, ಕುಮುದಾ, ರಾಮಾಂಜಿನಪ್ಪ ಸೇರಿದಂತೆ ವಿವಿಧ ಘಟಕಗಳ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಮೂಲಕ ಫಾಲೋ ಮಾಡಿ. ನಮ್ಮೋಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

