ದೊಡ್ಡಬಳ್ಳಾಪುರ: ರಾಜಕೀಯ ಭಾಷಣ, ಸಂಗೀತದ ರೀತಿ ಸಾಹಿತ್ಯಕ್ಕೆ ಅಂತರ್ಲೀನವಾಗುವ ಗುಣ ಇರುವುದಿಲ್ಲ. ಸಾಹಿತ್ಯದ ಯುಟಿಲಿಟಿ ದೇಶ ಕಾಲವನ್ನು ಮೀರಿರುತ್ತದೆ.ಅದು ಓದುಗನಲ್ಲಿ ನಿರಂತರವಾಗಿ ವಿಕಾಸವಾಗುತ್ತದೆ. ಸ್ಪಂದನಗಳ ಅಲೆಗಳನ್ನು ಎಬ್ಬಿಸುತ್ತಲೇ ಇರುತ್ತದೆ ಎಂದು ಉಪನ್ಯಾಸಕ ಕೆ.ವೆಂಕಟೇಶ್ ಹೇಳಿದರು.

ಅವರು ನಗರದ ಕೊಂಗಾಡಿಯಪ್ಪ ಕಾಲೇಜಿನ ಕನ್ನಡ ವಿಭಾಗ ಏರ್ಪಡಿಸಿದ್ದ ರಾಜ್ಯ ಮಟ್ಟದ ವೆಬಿನಾರ್ನಲ್ಲಿ ‘ಸಾಹಿತ್ಯ ಸಂವಹನದ ತೊಡಕುಗಳು’ ಕುರಿತು ಮಾತನಾಡಿದರು.

ಸಂವಹನದ ತಾಂತ್ರಿಕ ಸಲಕರಣೆಗಳ ವ್ಯಾಪಕ ಬಳಕೆಯಿಂದ ನಾವು ಹೆಚ್ಚು ಮಾತನಾಡುತ್ತಿದ್ದೇವೆ ಎನಿಸಿದರೂ ನಿಜಕ್ಕೂ ಮಾತನಾಡುತ್ತಿಲ್ಲ. ಅಂತರಂಗವನ್ನು ತೆರೆದುಕೊಳ್ಳುತ್ತಿಲ್ಲ.ಮನಃಶಾಸ್ತ್ರಜ್ಞರಲ್ಲಿ ಮಾತ್ರ ಮನಸ್ಸು ಬಿಚ್ಚಿ ಮಾತನಾಡುತ್ತೇವೆ ಎನ್ನುವ ವಾತಾವರಣವಿದೆ. ನಮ್ಮ ಸುತ್ತಮುತ್ತಲಿನ ಸಮೂಹ ಮಾಧ್ಯಮಗಳು, ರಾಜಕೀಯ ಭಾಷಣಗಳು, ವಿವಿಧ ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ ಮನರಂಜನೆ ಕಾರ್ಯಕ್ರಮಗಲ್ಲಿ ಅನುಭವದ ರೋಚಕೀಕರಣ ಮತ್ತು ಅತಿರೇಖ ಮುಖ್ಯವಾಗಿದ್ದು,ಇವು ಅಭಿರುಚಿಯನ್ನು ಭ್ರಷ್ಟಗೊಳಿಸಿವೆ. ಇದರೊಂದಿಗೆ ಏನೇ ಆಗಲಿ ತಕ್ಷಣ ಅರ್ಥವಾಗಬೇಕು ಎನ್ನುವ ಧೋರಣೆ ಹಾಗೂ ಏನು ಉಯೋಗ ಎನ್ನುವ ಪ್ರಶ್ನೆಗಳು ಸಾಹಿತ್ಯ ಸಂವಹನದ ದೊಡ್ಡ ತೊಡಕುಗಳಾಗಿವೆ. ಕತೆ,ಕಾದಂಬರಿ,ಕವಿತೆ, ಹಾಡು ಸೇರಿದಂತೆ ಕಲೆ ಎನ್ನುವುದು ಅಂತರಂಗದ ಅಗತ್ಯ. ನಮ್ಮ ಯಾಂತ್ರಿಕ ದೈನಿಕಗಳನ್ನು ಮೀರಿಕೊಳ್ಳುವುದಕ್ಕೆ ಇದರ ಮೊರೆ ಹೋಗಿರುತ್ತೇವೆ. ಇದೊಂದು ಬೌದ್ಧಿಕ, ಮತ್ತು ಭಾವುಕ ವಿಸ್ತಾರವನ್ನು ತಂದುಕೊಡುತ್ತದೆ. ಸಾಹಿತ್ಯ ಅತ್ಯುತ್ತಮ ಮೌಲ್ಯಗಳನ್ನು ನೆಲೆಗೊಳಿಸುತ್ತದೆ, ಬದುಕಿನ ವಿವೇಕವನ್ನು ಹೇಳಿಕೊಡುತ್ತದೆ. ಅತ್ಯುತ್ತಮ ಸಾಹಿತ್ಯ ಕೃತಿಗಳು ಓದುಗರಿಗೆ ಹೊಸ ಕಣ್ಣು ಕೊಡುತ್ತವೆ. ನಮ್ಮನ್ನು ನಾವೇ ಪರಿಷ್ಕರಣೆ ಮಾಡಿಕೊಳ್ಳುವುದಕ್ಕೆ ಒತ್ತಾಸೆ ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಭಾಷೆ ಮತ್ತು ಬದುಕು ವಿಷಯ ಕುರಿತು ಮಾತನಾಡಿದ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಭಾಷಾಶಾಸ್ತ್ರಜ್ಞ ಡಾ.ಮೇಟಿಮಲ್ಲಿಕಾರ್ಜುನ, ಭಾಷೆ ಎನ್ನುವುದನ್ನು ಕೇವಲ ಸಂವಹನ ಸಾಧನ ಎಂದು ಮಾತ್ರ ನೋಡುತ್ತೇವೆ. ಭಾಷೆ ಎನ್ನುವುದು ಬದುಕೂ ಆಗಿರುತ್ತದೆ. ಕನ್ನಡವನ್ನು ಇಂಗ್ಲಿಷ್ಗೆ ಎದುರಾಗಿ ಇರಿಸಿ ಇದರ ಶಕ್ತಿ ಮತ್ತು ಮಿತಿಯನ್ನು ಹೇಳುವ ಪರಿಪಾಠವಿದೆ. ಇದು ದೊಡ್ಡ ಅಪಕಲ್ಪನೆ. ಕನ್ನಡಕ್ಕೆ ಜಗತ್ತಿನ ಯಾವುದೇ ಸಂಕೀರ್ಣ ವಿಷಯಗಳನ್ನು ಅಭಿವ್ಯಕ್ತಿಸುವ ಸಾಮರ್ಥ್ಯವಿದೆ. ಕನ್ನಡದ ತಿಳಿವು ಅಂದರೆ ಕನ್ನಡದ ಅರ್ಥಶಾಸ್ತ್ರ, ಸಮಾಜಶಾಸ್ತ್ರ,ವಾಸ್ತು, ವಿವಿಧ ಕಸುಬುಗಳ ಕೌಶಲವೇ ಆಗಿದೆ. ಆದರೆ ಇದು ನಮ್ಮ ಶಿಕ್ಷಣದ ಅಧಿಕೃತ ನೆಲೆಗೆ ದಾಟಿಕೊಳ್ಳದ ಕಾರಣಕ್ಕೆ ಇಂಗ್ಲಿಷ್ ಜ್ಞಾನದ ಭಾಷೆ, ಅನ್ನದ ಭಾಷೆ ಎನ್ನುವ ಮಿತ್ಗಳು ಉಂಟಾಗಿವೆ. ಯಾವ ಭಾಷೆಯೂ ಅನ್ನದ ಭಾಷೆಯಲ್ಲ. ಕೌಶಲ ಎನ್ನುವುದು ಭಾಷೆಯಲ್ಲಿ ಪ್ರವೃತ್ತವಾಗಿರುವುದಿಲ್ಲ. ಒಬ್ಬ ಅತ್ಯುತ್ತಮ ಮೆಕ್ಯಾನಿಕ್ ಆಗುವಲ್ಲಿ ಆತನ ಗ್ರಹಿಕೆ ಮತ್ತು ಪ್ರಯೋಗಶೀಲತೆಯಲ್ಲಿ ಭಾಷೆ ವಹಿಸುವ ಪಾತ್ರ ತುಂಬ ಕಡಿಮೆ ಎಂದು ಅವರು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೊಂಗಾಡಿಯಪ್ಪ ಸ್ಮಾರಕ ವಿದ್ಯಾ ಸಂಸ್ಥೆ ಗೌರವ ಕಾರ್ಯದರ್ಶಿ ಎಂ. ಅಶ್ವಥಯ್ಯ ಮಾತನಾಡಿ, 2 ಸಾವಿರಕ್ಕೂ ಹೆಚ್ಚು ಇತಿಹಾಸ ಇರುವ ಕನ್ನಡ ಭಾಷೆ ನಮ್ಮ ಜೀವನಾಡಿ. ಕನ್ನಡದಲ್ಲಿ ಪಂಪ, ರನ್ನ, ಜನ್ನ, ವಚನಕಾರರು ಮತ್ತು ಕುಮಾರವ್ಯಾಸರ ಕಾಲದಲ್ಲಿ ಇಂಗ್ಲಿಷ್ ಇನ್ನೂ ಕಣ್ಣು ಬಿಟ್ಟಿರಲಿಲ್ಲ. ನಮ್ಮ ಭಾಷೆಯ ಶ್ರೀಮಂತಿಕೆಯನ್ನು ಓದಿದಾಗ ಮಾತ್ರ ಅದರ ಮೌಲ್ಯ ಗೊತ್ತಾಗುತ್ತದೆ. ಭಾಷೆ ವಿಷಯದಲ್ಲಿ ಕೀಳರಮೆ ಬೇಡ ಎಂದು ಹೇಳಿದರು. ಆಧುನಿಕ ತಂತ್ರಜ್ಞಾನವನ್ನು ಬೋಧನೆಯಲ್ಲಿ ಅಳವಡಿಸಿಕೊಳ್ಳಲೇಬೇಕು. ತಂತ್ರಜ್ಞಾನದ ಜತೆ ಹೆಜ್ಜೆ ಹಾಕದೇ ಇದ್ದರೆ ನಾವು ಎಲ್ಲಾ ರೀತಿಯಲ್ಲೂ ಹಿಂದುಳಿಯುತ್ತೇವೆ ಎಂದರು
ಪ್ರಾಂಶುಪಾಲ ಮೇಜರ್ ಬಿ.ತಜಮುಲ್ಪಾಷ ಮಾತನಾಡಿ, ವೆಬಿನಾರ್ಗೆ ರಾಜ್ಯದಲ್ಲಷ್ಟೇ ಅಲ್ಲದೆ ಆಂಧ್ರಪ್ರದೇಶ, ತಮಿಳುನಾಡು, ದೂರದ ಶ್ರೀಲಂಕಾದಿಂದಲೂ ಸ್ಪಂದನೆ ವ್ಯಕ್ತವಾಗಿದೆ. ಕನ್ನಡ ನಾಡು ನುಡಿ ಚಿಂತನೆ ಎಲ್ಲರನ್ನೂ ಒಂದುಗೂಡಿಸುತ್ತದೆ ಎಂಬುದಕ್ಕೆ ಈ ವೆಬಿನಾರ್ ಸಾಕ್ಷಿ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರವೀಣ್,ವೆಬಿನಾರ್ ನಿರ್ವಹಣೆ ಮಾಡಿದರು.
