ದೊಡ್ಡಬಳ್ಳಾಪುರ: ಮಕ್ಕಳ ಕಲಿಕೆ, ಬೋಧನೆಗೆ ತೊಂದರೆಯಾಗಬಾರದು, ಶೈಕ್ಷಣಿಕ ವಿಚಾರಗಳಿಂದ ಅವರು ದೂರ ಉಳಿಯಬಾರದು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ರೂಪಿಸಿರುವ ವಿದ್ಯಾಗಮ ಯೋಜನೆ ನಗರ ಪ್ರದೇಶದಲ್ಲಿ ಕೆಲವು ತೊಡರುಗಳನ್ನು ಎದುರಿಸುತ್ತಿದ್ದು, ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಇಲಾಖೆ ಗಮನ ಹರಿಸಿ, ಶಾಲಾ ಶಿಕ್ಷಕರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಬೇಕೆಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ವಿದ್ಯಾಗಮ ರೂಪು ರೇಷೆ:

ಕೋವಿಡ್-19 ಕಾರಣದಿಂದಾಗಿ ಶಾಲೆ ಆರಂಭವಾಗದಿದ್ದರೂ ಮಕ್ಕಳ ಕಲಿಕೆ, ಬೋಧನೆಗೆ ತೊಂದರೆಯಾಗಬಾರದು, ಶೈಕ್ಷಣಿಕ ವಿಚಾರಗಳಿಂದ ಅವರು ದೂರ ಉಳಿಯಬಾರದು. ಮಕ್ಕಳ ಸಾಮಾರ್ಥ್ಯಕ್ಕೆ ಅನುಗುಣವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮಕ್ಕಳ ಮನೆ ಅಸುಪಾಸಿನಲ್ಲಿನ ಅರಳಿ ಕಟ್ಟೆ, ಊರಿನ ಕಟ್ಟೆ, ಹಾಲ್. ದೇವಾಲಯದ ಆವರಣ ಹೀಗೆ ಎಲ್ಲಿ ಸ್ಥಳಾವಕಾಶ ಇದೆಯೋ ಅಲ್ಲಿ ಮಕ್ಕಳನ್ನು ಸೇರಿಸಿ, ಕೋವಿಡ್-19 ಮುಂಜಾಗ್ರತಾ ನಿಯಮಗಳನ್ನು ಪಾಲಿಸಿಕೊಂಡು ಪಾಠಕ್ಕೆ ಸಂಬಂದಿಸಿದ ವಿಚಾರಗಳನ್ನು ತಿಳಿಸಲಾಗುತ್ತಿದೆ.
ನಗರ ಪ್ರದೇಶದಲ್ಲಿ ಸಮಸ್ಯೆ:
ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯದ ಆವರಣಗಳು, ಅಶ್ವತ್ಥಕಟ್ಟೆ ಮೊದಲಾದ ಸಾರ್ವಜನಿಕರ ಪ್ರದೇಶಗಳಲ್ಲಿ ಸಾಕಷ್ಟು ಸ್ಥಳಾವಕಾಶವಿರುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ಈ ರೀತಿಯ ಸ್ಥಳಾವಕಾಶಗಳು ಕಡಿಮೆ. ಉದಾಹರಣೆಗೆ ನಗರದ ಕುಚ್ಚಪ್ಪನ ಪೇಟೆಯ ಅರಳಿ ಕಟ್ಟೆಯಲ್ಲಿ ಮಾರುಕಟ್ಟೆ ಚೌಕ ಶಾಲೆಯ ಮಕ್ಕಳು ಕಲಿಯುತ್ತಿದ್ದಾರೆ. ಆದರೆ ಮಕ್ಕಳ ಕಲಿಕೆಗೆ ಸೂಕ್ತ ಸ್ಥಳಾವಕಾಶವಿಲ್ಲ. ಮಳೆ, ಗಾಳಿ ಹಾಗೂ ವಾಹನ ಸಂಚಾರ, ಜನ ಸಂಚಾರದತ್ತ ಮಕ್ಕಳು ಗಮನ ನೀಡುತ್ತಿದ್ದರೆ ಶಿಕ್ಷಕರಿಗೆ ಮಕ್ಕಳನ್ನು ಹಿಡಿದಿಡುವುದೇ ಕಷ್ಟವಾಗುತ್ತಿದೆ. ಇನ್ನು ಸಾರ್ವಜನಿಕ ಸ್ಥಳ ಎಂದ ಮೇಲೆ ಬೇರೆಯವರನ್ನು ಬರಬೇಡಿ ಎಂದು ಹೇಳಲಾಗುವುದಿಲ್ಲ. ಹತ್ತಾರು ಜನ ಓಡಾಡುತ್ತಿರುತ್ತಾರೆ. ಈಗ ಇದೇ ಸ್ಥಳದ ಸಮೀಪ ಮಾರಮ್ಮ ದೇವಾಲಯದಲ್ಲಿ ಮಕ್ಕಳಿಗೆ ಪಾಠ ಹೇಳಲಾಗುತ್ತಿದ್ದರೂ ಅಲ್ಲಿ ಸಹ ಸ್ಥಳಾವಕಾಶ ಕಡಿಮೆ ಇದೆ ಎಂದು ಪೋಷಕರು ದೂರಿದ್ದಾರೆ.
ಶಾಲೆಗಳಲ್ಲಿಯೇ ಅವಕಾಶ ನೀಡಿ:
ಸೆ.21 ರಿಂದ 9 ರಿಂದ 12ರವರೆಗೆ ಶಾಲೆಗಳ ಆರಂಭಕ್ಕೆ ಕೇಂದ್ರ ಸರ್ಕಾರ ಚಂತನೆ ನಡೆಸಿದ್ದು, ಮಾರ್ಗಸೂಚಿಗಳು ಬಿಡುಗಡೆಯಾಗಲಿವೆ. ಆದರೆ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭವಾಗುವುದು ಅನುಮಾನವಾಗಿದ್ದು, ಮಕ್ಕಳು ಶಾಲೆಯ ಸಂಪರ್ಕಕ್ಕಂತೂ ಬರುವ ವಾತಾವರಣ ಸೃಷ್ಟಿಯಾಗಲಿದೆ.
ಅರಳಿ ಕಟ್ಟೆ , ದೇವಾಲಯದ ಆವರಣಗಳಿಗೆ ಹೋಲಿಸಿದರೆ, ಶಾಲೆಗಳಲ್ಲಿಯೇ ವಿಶಾಲವಾದ ಜಾಗವಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಿದೆ. ಹೀಗಾಗಿ ಮಕ್ಕಳನ್ನು ಪಾಳಿ ಪದ್ದತಿಯಲ್ಲಿ ಕರೆಸಿಕೊಂಡು ಪಾಠ ಮಾಡಬಹುದಾಗಿದೆ. ಮಕ್ಕಳ ಸ್ಥಳದ ಆಯ್ಕೆ ಬಗ್ಗೆ ಶಾಲಾ ಶಿಕ್ಷಕಕರಿಗೆ ನಿರ್ಧಾರ ಕೈಗೊಳ್ಳಲು ಬಿಡಬೇಕು. ಒಟ್ಟಿನಲ್ಲಿ ಮಕ್ಕಳ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ಅವಕಾಶ ಕಲ್ಪಿಸಬೇಕು ಎನ್ನುತ್ತಾರೆ ಪೋಷಕ ನಾಗರಾಜ್.
ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳಂತೆ ವಿದ್ಯಾಗಮ: ಬೈಯಪ್ಪರೆಡ್ಡಿ, ಕ್ಷೇತ್ರಶಿಕ್ಷಣಾಕಾರಿ.
ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳಂತೆ ವಿದ್ಯಾಗಮ ನಡೆಸಲಾಗುತ್ತಿದೆ. ಶಾಲೆಗಳಲ್ಲಿ ಪಾಠ ಪ್ರವಚನಗಳ ಕುರಿತಾಗಿ ನಮಗೆ ಸೂಚನೆ ಬಂದಿಲ್ಲ. ಆದರೆ ಮಕ್ಕಳನ್ನು ಪಾಲಿ ಪದ್ದತಿಯಲ್ಲಿ, ಶಾಲೆಗೆ ಸಮೀಪದ ಸೂಕ್ತ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು, ಕೊವಿಡ್-19 ಮಾರ್ಗಸೂಚಿಗಳನ್ನು ಪಾಲಿಸಿ, ಪಾಠಗಳನ್ನು ಮಾಡಲು ಸೂಚಿಸಲಾಗಿದೆ. ಸರ್ಕಾರದ ಆದೇಶ ಬಂದರೆ ಶಾಲೆಗಳಲ್ಲಿಯೇ ಅವಕಾಶ ಕಲ್ಪಿಸಲಾಗುವುದು.
ವಿಶೇಷ ವರದಿ: ಡಿ.ಶ್ರೀಕಾಂತ
