ದೊಡ್ಡಬಳ್ಳಾಪುರ: ಹಿರಿಯ ನಾಗರಿಕರ ಸೂಕ್ತ ರಕ್ಷಣೆ ಮತ್ತು ಪಾಲನೆ ಪೋಷಣೆಗಾಗಿ ಸರ್ಕಾರ ಹಲವು ಸೌಲಭ್ಯಗಳನ್ನು ಅನುಷ್ಠಾನಗೊಳಿಸಿದ್ದು, ಇದರ ಉಪಯೋಗವನ್ನು ಪ್ರತಿಯೊಬ್ಬ ಅರ್ಹ ಹಿರಿಯ ನಾಗರಿಕರು ಪಡೆದುಕೊಳ್ಳಬೇಕು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್.ಎನ್.ಎಂ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದಲ್ಲಿಂದು ಸರ್ವೋದಯ ಸರ್ವೀಸ್ ಸೊಸೈಟಿ, ಬಾಪೂಜಿ ವೃದ್ದಾಶ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಹಾಗೂ ಜಿಲ್ಲೆಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ “ವಿಶ್ವ ಹಿರಿಯ ನಾಗರಿಕರ ದಿನಾಚರಣೆ” ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಮೊಟ್ಟ ಮೊದಲ ಬಾರಿಗೆ ಆಚರಿಸಲು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿ, 1991 ಅಕ್ಟೋಬರ್ 1 ರಿಂದ ವಿಶ್ವದಾದ್ಯಂತ ಹಿರಿಯ ನಾಗರಿಕ ದಿನಾಚರಣೆ ಆಚರಿಸಲು ಕ್ರಮಕೈಕೊಂಡಿತ್ತು. ಇದರನ್ವಯ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಹಿರಿಯ ನಾಗರಿಕರಿಗಾಗಿ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, ಹಗಲು ಯೋಗ ಕ್ಷೇಮ ಕೇಂದ್ರ ಹಾಗೂ ಹಿರಿಯ ನಾಗರಿಕ ವೃದ್ದಾಶ್ರಮ ಯೋಜನೆಯ ಸೌಲಭ್ಯ ಪಡೆಯಲು ಈ ಮೂಲಕ ತಿಳಿಸಿದ ಅವರು ಹಿರಿಯ ನಾಗರಿಕರನ್ನು ನಿರ್ಲಕ್ಷ್ಯ, ಮಾನಸಿಕ ದೈಹಿಕ ಹಿಂಸೆ ಹಾಗೂ ಮನೆಯಿಂದ ಹೊರಹಾಕುವುದು ಈ ರೀತಿಯ ಯಾವುದಾದರೂ ಪ್ರಸಂಗ ಕಂಡು ಬಂದರೆ ಅವರ ಮೇಲೆ ಪಾಲಕರ ಪೋಷಣೆ ಸಂರಕ್ಷಣೆ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ 2007 ಅನ್ವಯ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಎಸ್.ಸುಬ್ಬಾರಾವ್ ಅವರು ಸಮಾಜಕ್ಕೆ ಹಿರಿಯ ನಾಗರಿಕರ ಮಾರ್ಗದರ್ಶನ ಅವಶ್ಯಕ. ತಮ್ಮ ಜೀವನದಲ್ಲಿ ಅನುಭವಿಸಿರುವ ಏಳು ಬೀಳನ್ನು ಸರಿಪಡಿಸಿಕೊಂಡು, ಜೀವನವನ್ನು ಸಾರ್ಥಕತೆಯ ಕಡೆಗೆ ಕೊಂಡೊಯ್ಯಲು ಹಿರಿಯ ನಾಗರಿಕ ಸಹಕಾರ ಅತ್ಯಗತ್ಯವಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ತನ್ನ ಇಡೀ ಜೀವನವನ್ನೇ ಧಾರೆ ಎರೆಯುವ ಪೋಷಕರ ಕಷ್ಟ ಕಾಲದಲ್ಲಿ, ಮಕ್ಕಳು ಸದಾ ನೆರೆವಾಗಬೇಕು. ಹಿರಿಯ ನಾಗರಿಕರು ಶೋಷಣೆಗೆ ಒಳಗಾದ ಬಗ್ಗೆ ಮಾಹಿತಿ ದೊರೆತಲ್ಲಿ, ಸಹಾಯವಾಣಿ 1090 ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಿದರು.
ಜೀವಮಾನ ಸಾಧನೆಗಾಗಿ ಜಿಲ್ಲೆಯ ನಾಲ್ಕು ತಾಲ್ಲೂಕಿನ 4 ಮಂದಿ ಹಿರಿಯ ನಾಗರಿಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ರಂಗಭೂಮಿ ಕಲಾವಿದರಾದ ನೆಲಮಂಗಲ ತಾಲ್ಲೂಕಿನ ಜ್ಯೋತಿಲಿಂಗಪ್ಪ, ಸಾವಯುವ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೇವನಹಳ್ಳಿ ತಾಲ್ಲೂಕಿನ ಪಿ.ಜಯರಾಮ್, ಸಂಗೀತ ಮತ್ತು ಶಿಕ್ಷಣ ಕ್ಷೇತ್ರದಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಸರ್ವಮಂಗಳಮ್ಮ, ನಿವೃತ್ತ ಸರ್ಕಾರಿ ನೌಕರರಾದ ಹೊಸಕೋಟೆ ತಾಲ್ಲೂಕಿನ ಎಚ್.ಎಸ್.ಬಸವಾರಾಧ್ಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಆರಕ್ಷಕ ಉಪ ನಿರೀಕ್ಷಕರಾದ ಕೃಷ್ಣ ನಾಯಕ್, ಸರ್ವೋದಯ ಸೊಸೈಟಿ ಸಂಸ್ಥೆಯ ಗೋಪಾಲ್ ರಾವ್ ಹಾಗೂ ಶ್ರೀಸಾಯಿ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥರಾದ ಕೆ.ಎನ್.ಮೂರ್ತಿ, ಡಿಡಿಆರ್ಸಿ ಸಂಯೋಜಕರಾದ ರವಿಕುಮಾರ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ಸಿಬ್ಬಂದಿಗಳಾದ ನರಸಿಂಹಮೂರ್ತಿ.ಕೆ.ಡಿ, ರವಿಕುಮಾರ್ ಕೆ.ಎನ್, ನಿಖಿಲ್ ಮದಕಟ್ಟಿ ಉಪಸ್ಥಿತರಿದ್ದರು.

