ಮಾಲೂರು: ಅಣ್ಣಾವ್ರ ಹೆಸರು ಹೇಳೋದಕ್ಕೆ ಚೇತನ್ (Chetan) ಅವರಿಗೆ ಯೋಗ್ಯತೆ ಇಲ್ಲ, ಅವರೊಬ್ಬ ಪ್ರಚಾರ ಪ್ರಿಯರು. ಡಾ. ರಾಜ್ ಕುಮಾರ್ (Dr. Rajkumar) ಅವರ ಸ್ಮಾರಕ ಬಗ್ಗೆ ಮಾತನಾಡಲು ಅವರು ಯೋಗ್ಯರಲ್ಲ” ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ವಾಗ್ದಾಳಿ ನಡೆಸಿದರು.
ಮಾಲೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಅಣ್ಣಾವ್ರು ಯಾವತ್ತೂ ಏನನ್ನೂ ಬಯಸಿದ ವ್ಯಕ್ತಿತ್ವವಲ್ಲ. ಅವರ ಸಮಾಧಿ ಬಗ್ಗೆ ಮಾತನಾಡುವ ಯೋಗ್ಯತೆ ಚೇತನ್ಗೆ ಇಲ್ಲ” ಎಂದು ಕಿಡಿಕಾರಿದರು.
ಸರ್ಕಾರದ ವಿರುದ್ಧ ವಾಗ್ದಾಳಿ
“ಬೇಸಿಗೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಕುಡಿಯುವ ನೀರಿಲ್ಲ. ಕಾಂಗ್ರೆಸ್ ಸರ್ಕಾರ ಜೀವಜಲ ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿದೆ. ರೈತರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಈ ಸರ್ಕಾರ ಇರುವಷ್ಟು ದಿನ ರೈತರಿಗೆ ರಕ್ಷಣೆ ಇಲ್ಲ” ಎಂದು ಆರೋಪಿಸಿದರು.
ಸಚಿವ ಡಿ. ಸುಧಾಕರ್ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿ, “ಅವರು ಹಿರಿಯ ರಾಜಕಾರಣಿ. ಇತ್ತೀಚಿಗೆ ಅವರ ಅರೋಗ್ಯದ ಬಗ್ಗೆ ಬೇರೆ ಬೇರೆ ಚರ್ಚೆ ಆಗ್ತಿದೆ. ಭಗವಂತ ಅವರಿಗೆ ಆರೋಗ್ಯ ಕೊಡಲಿ ಎಂದು ಹಾರೈಸಿದರು.
“ಸ್ಥಳೀಯ ಚುನಾವಣೆ ನಡೆಸಲು ಕಾಂಗ್ರೆಸ್ಗೆ ಹಿನ್ನಡೆ ಆಗುವ ಭಯವಿದೆ. ಕೋರ್ಟ್ ಕೂಡ ಛೀಮಾರಿ ಹಾಕಿದೆ. ನನ್ನ ರಾಜ್ಯ ಪ್ರವಾಸ ನಿರಂತರವಾಗಿ ನಡೆಯುತ್ತಿದೆ. ಸಂಘಟನೆ ನಿಂತ ನೀರಲ್ಲ, ಸಮುದ್ರದಂತೆ ನಿರಂತರವಾಗಿರಬೇಕು” ಎಂದರು.
ಟಿಕೆಟ್ ಹಂಚಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, “ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ನಮ್ಮ ಹೈಕಮಾಂಡ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಚರ್ಚಿಸಿ ಮೈತ್ರಿಗೆ ಧಕ್ಕೆ ಬಾರದಂತೆ ಒಳ್ಳೆಯ ತೀರ್ಮಾನ ಕೈಗೊಳ್ಳುತ್ತಾರೆ” ಎಂದು ಸ್ಪಷ್ಟಪಡಿಸಿದರು.

