ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ವಿದ್ಯುತ್ ಖಾಸಗೀಕರಣದ ಉದ್ದೇಶದ ವಿದ್ಯುತ್ ಸುಧಾರಣಾ ಕಾಯ್ದೆ 2020 ಹಿಂಪಡೆಯುವಂತೆ ಹಾಗೂ ಸಂಕಷ್ಟದಲ್ಲಿನ ನೇಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ನೇಕಾರರ ಮಹಾ ಮಂಡಳ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮನವಿ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ನೇಕಾರರ ಮಹಾ ಮಂಡಳದ ಪದಾಧಿಕಾರಿಗಳಾದ ಬಿ.ಜಿ.ಹೇಮಂತರಾಜು,ಪಿ.ಸಿ.ವೆಂಕಟೇಶ್ ಹಾಗೂ ಪಿ.ಎ.ವೆಂಕಟೇಶ್,ರಾಜ್ಯದಲ್ಲಿ ಸುಮಾರು 1.5 ಲಕ್ಷ ವಿದ್ಯುತ್ ಮಗ್ಗಗಳಿವೆ. ಸುಮಾರು 4.5 ಲಕ್ಷ ಕುಟುಂಬಗಳ 13 ಲಕ್ಷ ಮಂದಿ ನೇಯ್ಗೆ ಉದ್ಯಮದ ಮೇಲೆ ಅವಲಂಬಿತರಾಗಿದ್ದಾರೆ.
ಕೊರೊನಾ ಪರಿಣಾಮ ನೇಕಾರಿಕೆ ಇಂದು ಸಂಕಷ್ಟದಲ್ಲಿದೆ. ನೇಕಾರರು ನೇಯ್ದ ಬಟ್ಟೆಗಳ ಮಾರಾಟವಾಗದೇ ಸಾಲ ಮಾಡಿ ಬೀದಿ ಪಾಲಾಗುವ ಪರಿಸ್ಥಿತಿ ಬಂದಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಖಾಸಗೀಕರಣಕ್ಕಾಗಿಯೇ ವಿದ್ಯುತ್ ಸುಧಾರಣಾ ಕಾಯ್ದೆ-2020 ರಾಜ್ಯ ಸರ್ಕಾರ ಜಾರಿಗೆ ತರುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಂತೆ ಹೊಸದಾಗಿ ವಿದ್ಯುತ್ ಘಟಕಗಳನ್ನು ಸ್ಥಾಪನೆ ಮಾಡಿರುವ ನೇಕಾರರಿಗೆ ವಿದ್ಯುತ್ ರಿಯಾಯಿತಿ ನಿಲ್ಲಿಸಲಾಗಿದೆ.16 ವರ್ಷಗಳಿಂದ ನೇಕಾರರು ಬಳಸುವ ಒಂದು ಯೂನಿಟ್ ವಿದ್ಯುತ್ಗೆ ₹1.25 ಶುಲ್ಕ ವಿಧಿಸಲಾಗುತ್ತಿದೆ. ಆದರೆ ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಂಡರೆ ನೇಕಾರರಿಗೆ ವಿದ್ಯುತ್ ರಿಯಾಯಿತಿ ರದ್ದಾಗಲಿದೆ. ಇದರಿಂದ ನೇಯ್ಗೆ ಉದ್ಯಮ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಶೀಘ್ರವೇ ಸೀರೆ ಖರೀದಿ ಮಾಡಲು ಮುಂದಾಗಬೇಕು. ಆತ್ಮಹತ್ಯೆ ಮಾಡಿಕೊಂಡ ನೇಕಾರರಿಗೆ ಶೀಘ್ರ ಪರಿಹಾರ ನೀಡಬೇಕು. ನೇಕಾರರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಬೇಕು. ನೇಕಾರರಿಗೆ ಗುರುತಿನ ಚೀಟಿ ನೀಡಬೇಕು ಎನ್ನುವ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಈ ಕೂಡಲೇ ನೇಕಾರರ ಮನವಿಗೆ ಸ್ಪಂಧಿಸಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ನೇಕಾರ ಸಂಘಟನೆಗಳ ಮುಖಂಡರು ಹಾಜರಿದ್ದರು.

