ದೊಡ್ಡಬಳ್ಳಾಪುರ: ಕೊವಿಡ್-19 ಲಾಕ್ಡೌನ್ ಹಾಗೂ ಸಭೆ ಸಮಾರಂಭಗಳಿಗೆ ನಿರ್ಬಂಧ ಕಾರಣದಿಂದಾಗಿ ರೇಷ್ಮೆ ಸೀರೆಗಳ ಮಾರಾಟ ತೀವ್ರವಾಗಿ ಕುಸಿಯುತ್ತಿದೆ. ಸೀರೆಗಳಿಗೆ ಸೂಕ್ತ ಬೆಲೆಯಿಲ್ಲದೇ ಸಹಸ್ರಾರು ಸೀರೆಗಳು ದಾಸ್ತಾನಾಗುತ್ತಿದ್ದು ರೇಷ್ಮೆ ಬಟ್ಟೆ ತಯಾರಕರು ಕಂಗಾಲಾಗಿದ್ದಾರೆ.
ರೇಷ್ಮೆ ಸೀರೆಗಳಿಗೆ ಹೆಸರಾಗಿದ್ದ ದೊಡ್ಡಬಳ್ಳಾಪುರದಲ್ಲಿ ಈಗ ಶೇ.10 ಭಾಗ ಮಾತ್ರ ರೇಷ್ಮೆ ಬಟ್ಟೆ ತಯಾರಿಕೆ ನಡೆಯುತ್ತಿದೆ. ಕೊರೊನಾ ಸಂಕಷ್ಟ ಉದ್ಬವಿಸುವುದಕ್ಕೂ ಮುನ್ನವೇ ಗಗನಕ್ಕೇರಿದ ರೇಷ್ಮೆ ಬೆಲೆ, ನೇಯ್ದ ಬಟ್ಟೆಗೆ ಸೂಕ್ತ ಮಾರುಕಟ್ಟೆ ಬೆಲೆ ಇಲ್ಲದೇ ನೇಯ್ಗೆ ಉದ್ಯಮ ತತ್ತರಿಸುತ್ತಿತ್ತು.
ಸಹಸ್ರಾರು ಸೀರೆಗಳ ದಾಸ್ತಾನು: ಕರೊನಾ ಲಾಕ್ಡೌನ್ ಆಗುವುದಕ್ಕೂ ಮುನ್ನ ರೇಷ್ಮೆ ನೂಲಿನ ಬೆಲೆ 4200 ರೂಗಳಿತ್ತು. ಈ ಬೆಲೆಗೆ ರೇಷ್ಮೆ ನೂಲು ಕೊಂಡಿದ್ದ ನೇಕಾರರು ರೇಷ್ಮೆ ಸೀರೆಗಳನ್ನು ಮಾರಾಟ ಮಾಡುವಾಗ ಸೂಕ್ತ ಬೆಲೆ ಸಿಗದೇ ದಾಸ್ತಾನು ಮಾಡಿದ್ದರು. ಆ ನಂತರ ರೇಷ್ಮೆ ಬೆಲೆ 3000 ಕ್ಕೆ ಕುಸಿಯಿತು. ಕೆಲಕಾಲ 2500 ರೂಗಳಿಗೂ ಬಂದಿತು. ಈ ಬೆಲೆಗೆ ಅನುಗುಣವಾಗಿ ರೇಷ್ಮೆ ಸೀರೆಗಳ ಖರೀದಿದಾರರು ಕಡಿಮೆ ಬೆಲೆಗೆ ಕೇಳಲಾರಂಭಿಸಿದರು. ಲಾಭವಿರಲಿ ಅಸಲಿನಲ್ಲಿಯೇ ವಿವಿಧ ನಮೂನೆಯ ಸೀರೆಗಳ ಮೇಲೆ 200 ರೂ ಕಡಿಮೆ ಕೇಳಲಾರಂಭಿಸಿದಾಗ, ನೇಕಾರರು ವಿಧಿಯಿಲ್ಲದೇ ಮನೆಗಳಲ್ಲಿಯೇ ಸೀರೆಗಳನ್ನು ದಾಸ್ತಾನು ಮಾಡುವ ಪರಿಸ್ಥಿತಿ ಒದಗಿ ಬಂದಿತ್ತು. ಬಹುತೇಕ ಎಲ್ಲಾ ರೇಷ್ಮೆ ಉದ್ಯಮಿಗಳ ಮನೆಗಳಲ್ಲಿ ಅವರ ಶಕ್ಯಾನುಸಾರ ದಾಸ್ತಾನು ಮಾಡುತ್ತಿದ್ದಾರೆ.
ಬಂಡವಾಳಕ್ಕೆ ಹೊಡೆತ: ಸೀರೆಗಳು ನಷ್ಟದ ಬೆಲೆಗೆ ಮಾರಲೊಪ್ಪದ ನೇಕಾರರು ದಾಸ್ತಾನು ಮಾಡುತ್ತಿದ್ದು, ಮಗ್ಗದ ಹಾಗೂ ಇತರೆ ಕೆಲಸದವರಿಗೆ ಕೆಲಸ ನೀಡಲಾದರೂ ಮಗ್ಗಗಳನ್ನು ನಡೆಸಬೇಕಿದೆ. ಹೀಗಾಗಿ ವಾರಕ್ಕೆ ಒಂದು ಮಗ್ಗದಲ್ಲಿ 3 ಸೀರೆ ನೇಯಿಸಲಾಗುತ್ತಿದೆ. ಬಂಡವಾಳಕ್ಕಾಗಿ ಸಾಲ ಮಾಡುವ ಪರಿಸ್ಥಿತಿ ಬಂದೊದಗಿದೆ. ವಾರ್ಪುಗಳನ್ನು ಹಾಕಿಸಿ ಅದನ್ನು ನೇಯಿಸಿದರೆ ನಷ್ಟ ಎಂದು ಅಲ್ಲಿಗೇ ನಿಲ್ಲಿಸಿರುವ ನೇಕಾರರು ಇದ್ದಾರೆ. ಇನ್ನು ಹಲವು ನೇಕಾರರು ರೇಷ್ಮೆ ಉದ್ಯಮದಿಂದ ಆರ್ಟ್ ಸಿಲ್ಕ್, ಪಾಲಿಯಸ್ಟರ್ ಸೀರೆಗಳನ್ನು ನೇಯಿಸುತ್ತಿದ್ದಾರೆ. ಇದು ನೇಕಾರರಲ್ಲಿಯೇ ಸ್ಪರ್ಧೆ ಏರ್ಪಡಲು ಕಾರಣವಾಗುತ್ತಿದೆ.
ಉತ್ತರ ಭಾರತದ ಮಾರುಕಟ್ಟೆಯಿಲ್ಲ: ವಿಶೇಷವಾಗಿ ದೊಡ್ಡಬಳ್ಳಾಪುರದಲ್ಲಿ ನೇಯುವ ಕಡಿಮೆ ತೂಕದ ನಮೂನೆಯ ರೇಷ್ಮೆ ಸೀರೆಗಳು ಉತ್ತರ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತದೆ. ಕೊವಿಡ್-19 ಪರಿಣಾಮ ಎಲ್ಲೆಡೆ ಶುಭ ಸಮಾರಂಭಗಳಿಗೆ ಹಲವಾರು ನಿರ್ಬಂಧ ಹೇರಿರುವುದರಿಂದ ಸೀರೆಗಳನ್ನು ಕೊಳ್ಳುವವರೇ ಇಲ್ಲದಂತಾಗಿ ರೇಷ್ಮೆ ಬಟ್ಟೆ ತಯಾರಿಕೆ ಕುಸಿಯುತ್ತಿದೆ. ಇದರಿಂದಾಗಿ ಅನಿವಾರ್ಯವಾಗಿ ಸೀರೆಗಳನ್ನು ದಾಸ್ತಾನು ಮಾಡಲಾಗುತ್ತಿದೆ ಎನ್ನುತ್ತಾರೆ ರೇಷ್ಮೆ ಸೀರೆಗಳ ಉದ್ಯಮಿ ರಮೇಶ್.
ಅವಲಂಬಿತ ಉದ್ಯಮಗಳಿಗೆ ಹೊಡೆತ: ರೇಷ್ಮೆ ಸೀರೆಗಳ ತಯಾರಿಕೆ ಕುಸಿತವಾಗುತ್ತಿರುವುದರಿಂದ ನೇಕಾರಿಕೆಯನ್ನು ಅವಲಂಬಿಸಿರುವ ಹುರಿಮಿಷನ್, ರೇಷ್ಮೆ ಬಣ್ಣ ಮಾಡುವ ಮಾಲೀಕರು, ಹಾಗೂ ಕಾರ್ಮಿಕರಿಗೆ ರೇಷ್ಮೆ ರೀಲರ್ಗಳ ಕೆಲಸಕ್ಕೂ ಹೊಡೆತ ಬಿದ್ದಿದ್ದು, ಈ ಘಟಕಗಳಲ್ಲಿಯೂ ಕೆಲಸವಿಲ್ಲದಂತಾಗಿದೆ. ಮೂರು ತಿಂಗಳಿನಿಂದ ರೇಷ್ಮೆ ನೂಲು ತಯಾರಿಕೆ ನಿಂತಿದೆ ಎನ್ನುತ್ತಾರೆ ಸಾಯಿ ರೀಲರ್ಸ್ ಮಾಲೀಕರಾದ ಮೋಹನ್ ಕುಮಾರ್.
ರೇಷ್ಮೆ ನಗರ ಎಂದು ಇಡೀ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದ್ದ ದೊಡ್ಡಬಳ್ಳಾಪುರಕ್ಕೆ ಸ್ವಾಗತ ನೀಡುವ ಕಮಾನುಗಳು ಮುಂದೆ ಅರ್ಥ ಕಳೆದುಕೊಂಡರೂ ಅಚ್ಚರಿಯಿಲ್ಲ.
ಆವರ್ತ ನಿಧಿ ಸ್ಥಾಪಿಸಿ: ಸರ್ಕಾರ ಆವರ್ತ ನಿಧಿ ಸ್ಥಾಪಿಸಿ, ರೇಷ್ಮೆ ಬೆಲೆ ಸ್ಥಿರವಾಗಿರುವಂತೆ ಕ್ರಮ ಕೈಗೊಳ್ಳಬೇಕಿದೆ. ಮದುವೆ ಮೊದಲಾದ ಸಭೆ ಸಮಾರಂಭಗಳಿಗೆ ಇರುವ ನಿಯಮ ಸಡಿಲಗೊಳಿಸಿ, ರೇಷ್ಮೆ ಸೀರೆಗಳ ಮಾರಾಟಕ್ಕೆ ಅನುಕೂಲ ಮಾಡಿಕೊಟ್ಟರೆ ರೇಷ್ಮೆ ಉದ್ಯಮ ಚೇತರಿಸಿಕೊಳ್ಳುತ್ತದೆ: ಪಿ.ಸಿ.ವೆಂಕಟೇಶ್ಅಧ್ಯಕ್ಷರು, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಮಂಡಳಿ.
ವಿಶೇಷ ವರದಿ ಡಿ.ಶ್ರೀಕಾಂತ

