ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರದು ಪರ್ಸಂಟೇಜ್ ಸರ್ಕಾರ, ಲಂಚ ನೀಡದೆ ಇಲ್ಲಿ ನಯಾಪೈಸೆ ಬಿಡುಗಡೆಯಾಗಲ್ಲ. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೊಸ ಅನುದಾನವಂತೂ ಇಲ್ಲ, ಇದರ ಜೊತೆಗೆ ಹಿಂದೆ ಘೋಷಿಸಿದ್ದ ಅನುದಾನವನ್ನೂ ತಡೆಹಿಡಿಯಲಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಸಮುದಾಯ ಭವನಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅವುಗಳಿಗೆ ಹಣ ಬಿಡುಗಡೆ ಮಾಡುವಂತೆ ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಅವರನ್ನು ಕೇಳಿದರೆ, ಮುಖ್ಯಮಂತ್ರಿಗಳು ತಮ್ಮ ಇಲಾಖೆಗೆ ನಯಾಪೈಸೆ ಹಣ ಕೊಟ್ಟಿಲ್ಲ ಅಂತಾರೆ. ಸರ್ಕಾರ ದಿವಾಳಿಯಾಗಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?
ಪ್ರವಾಹ ಪರಿಸ್ಥಿತಿ ಇರುವಾಗ ವೈಮಾನಿಕ ಸಮೀಕ್ಷೆ ಮಾಡುವುದು ಸರಿ, ಆದರೆ ಈಗ ಪ್ರವಾಹ ಪೀಡಿತ ಸ್ಥಳಗಳಿಗೆ ರಸ್ತೆ ಮೂಲಕ ಸಂಚರಿಸಲು, ನಿರಾಶ್ರಿತ ಕೇಂದ್ರಗಳಲ್ಲಿರುವ ಜನರನ್ನು ಭೇಟಿ ಮಾಡಲು ಅವಕಾಶವಿದ್ದಾಗ್ಯೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಮಾನದಲ್ಲೇ ಸಮೀಕ್ಷೆ ಮಾಡಿದರೆ ಜನರ ಕಷ್ಟ ಏನು ಅಂತ ಹೇಗೆ ತಿಳಿಯುತ್ತೆ?
ಕಳೆದ ವರ್ಷದ ಆಗಸ್ಟ್ನಲ್ಲಿ, ಈ ಬಾರಿಯ ಆಗಸ್ಟ್ನಲ್ಲಿ, ಮತ್ತೆ ಅಕ್ಟೋಬರ್ನಲ್ಲಿ ರಾಜ್ಯದಲ್ಲಿ ಪ್ರವಾಹ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಒಮ್ಮೆಯಾದರೂ ರಾಜ್ಯಕ್ಕೆ ಭೇಟಿ ನೀಡಿ ಜನರ ಕಷ್ಟ ಕೇಳಿದ್ದಾರ? ಬಿಜೆಪಿಯ 25 ಸಂಸದರನ್ನು ರಾಜ್ಯದಿಂದ ಆರಿಸಿ ಕಳಿಸಿರುವುದೇ ಮೋದಿ ಅವರು ಕರ್ನಾಟಕವನ್ನು ಇಷ್ಟು ತಾತ್ಸಾರ ಮಾಡಲು ಕಾರಣ.
ತಾನಿರುವ ಹುದ್ದೆಯ ಗೌರವದ ಅರಿವಿಲ್ಲದ ನಳಿನ್ ಕುಮಾರ್ ಕಟೀಲ್ ಒಬ್ಬ ಯಕಶ್ಚಿತ್ ರಾಜಕಾರಣಿ. ಬೆಂಕಿ ಹಾಕೋದು, ಸಮುದ್ರಕ್ಕೆ ಬಿಸಾಕೋದು ಬರೀ ಇಂತಹುದನ್ನೇ ತಲೆಯಲ್ಲಿ ತುಂಬಿಕೊಂಡಿದ್ದಾರೆ. ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಹೀಗೆ ತನ್ನನ್ನು ಮುಳುಗಿಸ್ತೇನೆ ಅಂತ ಬಂದ ಬಹಳಷ್ಟು ಜನರನ್ನು ನೋಡಿದೆ.
ನಳಿನ್ ಕುಮಾರ್ ಕಟೀಲ್ ಅವರೇ, ರಾಜ್ಯದಲ್ಲಿ ರೈತರು, ನೇಕಾರರು, ಕೂಲಿ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಇದನ್ನು ತಡೆಯಲು ತಾವೇನು ಮಾಡಿದ್ದೀರಿ? ಮೊದಲು ಜನರಿಗೆ ಲಾಕ್ಡೌನ್ ಮತ್ತು ಪ್ರವಾಹದಿಂದ ಉಂಟಾದ ನಷ್ಟವನ್ನು ತುಂಬಿಕೊಡುವ ವ್ಯವಸ್ಥೆ ಮಾಡಿ. ನಿಮ್ಮ ಭಾಷಣದಿಂದ ಜನರ ಹೊಟ್ಟೆ ತುಂಬಲ್ಲ.
ಕಳೆದ ವರ್ಷದ ಪ್ರವಾಹದಲ್ಲಿ ಬಿದ್ದ ಮನೆಗಳನ್ನೇ ಕಟ್ಟಿಸಿಕೊಟ್ಟಿಲ್ಲ. ಈ ವರ್ಷದ ಪ್ರವಾಹದಲ್ಲಿ ಇನ್ನಷ್ಟು ಮನೆಗಳು ಬಿದ್ದಿವೆ. ಜಿಲ್ಲಾಧಿಕಾರಿಗಳಿಗೆ ದುಡ್ಡು ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳ್ತಾರೆ. ಅವರ ಪಿ.ಡಿ ಖಾತೆಯಲ್ಲಿ ದುಡ್ಡಿದ್ದರೆ ಸಂತ್ರಸ್ತರಿಗೆ ತಲುಪತ್ತಾ? ಈ ವರ್ಷ ಯಾರಿಗಾದರೂ ಪರಿಹಾರ ಕೊಟ್ಟಿದ್ದಾರಾ?
ನಮ್ಮ ಸರ್ಕಾರ ಪ್ರಾರಂಭಿಸಿದ್ದ ಯೋಜನೆಗಳನ್ನೆಲ್ಲ ಒಂದೊಂದಾಗಿ ನಿಲ್ಲಿಸ್ತಿದ್ದಾರೆ. ಅನ್ನಭಾಗ್ಯದ ಅಕ್ಕಿಯನ್ನು 7ಕೆ.ಜಿಯಿಂದ 5ಕ್ಕೆ ಇಳಿಸಿದ್ದಾರೆ. ಇಂದಿರಾಕ್ಯಾಂಟೀನ್ ಗೆ ದುಡ್ಡು ಕೊಡದೆ ಮುಚ್ಚಲು ಹೊರಟಿದ್ದಾರೆ. ದನ-ಕುರಿ ಸತ್ತರೆ ಪರಿಹಾರ ಕೊಡ್ತಿಲ್ಲ, ಕ್ಷೀರಧಾರೆಯಲ್ಲಿ ಹಾಲಿನ ಸಬ್ಸಿಡಿ ಕಡಿಮೆ ಮಾಡಿದ್ದಾರೆ. ಕೃಷಿಭಾಗ್ಯವೂ ನಿಂತಿದೆ.
ಕೇಂದ್ರ ತಂಡ ರಾಜ್ಯದ ಪ್ರವಾಹ ಸಮೀಕ್ಷೆ ನಡೆಸಿ ಇಷ್ಟು ದಿನವಾಯ್ತಲ್ಲ ಒಂದು ರೂಪಾಯಿಯಾದ್ರೂ ಪರಿಹಾರ ಬಂದಿದೆಯಾ? ಸಚಿವ ಆರ್. ಅಶೋಕ್ ಅವರು ಪರಿಹಾರ ಇವತ್ತು ಬರುತ್ತೆ, ನಾಳೆ ಬರುತ್ತೆ ಅಂತನೇ ದಿನ ದೂಡುತ್ತಿದ್ದಾರೆ, ಜನ ಕಷ್ಟದಲ್ಲಿರುವಾಗ ಪರಿಹಾರ ಕೊಡದೆ ಯಾವಾಗ ಕೊಡ್ತೀರ?
ನಮ್ಮ ಕಾಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೀಗಿತ್ತಾ? ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಗೋಲಿಬಾರ್ ನಡೆಸಿ ರೈತರನ್ನು ಕೊಂದರು, ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಎರಡು ಬಾರಿ ಗೋಲಿಬಾರ್ ನಡೆಸಿ ಅಮಾಯಕರನ್ನು ಕೊಂದರು. ಇದು ಕಾನೂನು ಮತ್ತು ಸುವ್ಯವಸ್ಥೆನಾ?
ಉಪಚುನಾವಣೆಯಲ್ಲಿ ಆರ್.ಆರ್ ನಗರದಲ್ಲಿ ಕಾಂಗ್ರೆಸ್- ಬಿಜೆಪಿ ಮಧ್ಯೆ ನೇರ ಸ್ಪರ್ಧೆಯಿದ್ದರೆ, ಶಿರಾದಲ್ಲಿ ತ್ರಿಕೋನ ಸ್ಪರ್ಧೆಯಿದೆ. ಎರಡೂ ಕ್ಷೇತ್ರಗಳ ಜನರ ಒಲವು ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಕಂಡುಬರುತ್ತಿರುವುದರಿಂದ ಎರಡರಲ್ಲೂ ಗೆಲ್ಲುವ ಹೆಚ್ಚಿನ ಅವಕಾಶವಿರುವುದು ನಮ್ಮ ಪಕ್ಷಕ್ಕೆ ಎಂದಿದ್ದಾರೆ.

